ಏ ಇದೆಲ್ಲಾ ನಿನಗೆ ಹೇಳುತ್ತಿಲ್ಲ. ಸುಮಾರು ಎರಡು ವರ್ಷದ ಹಿಂದೆ ಅಭಯನ ಮದುವೆಯ ಕಾಲದಲ್ಲಿ, ಸಮಾಜ ಗಂಡಿನ ಕಡೆಯವರಿಗೆ ಎತ್ತರದ ಮಣೆ ಹಾಕಿದ್ದನ್ನು ಬಿಡಲಾಗದೇ ನಮ್ಮೊಳಗೆ ನಡೆದ ವಿಚಾರಕ್ಕೆ ಅಕ್ಷರ ರೂಪ ಕೊಡುತ್ತಿದ್ದೇನಷ್ಟೆ. ಆಗ ನಾವು ನನ್ನಪ್ಪನ ಆತ್ಮೀಯ ಗೆಳೆಯರು, ಪ್ರಾಪಂಚಿಕ ಓದು ಮತ್ತು ವೃತ್ತಿಯಲ್ಲಿ ಅಸಾಧಾರಣ ಲೋಹಶಾಸ್ತ್ರಜ್ಞರಾಗಿ ಕಾರ್ಖಾನೆಯಲ್ಲೂ ವಿದ್ಯಾ ಸಂಸ್ಥೆಗಳಲ್ಲೂ ಬೆಳಗಿದ ಪ್ರೊ| ಶ್ರೀಕಂಠಕುಮಾರಸ್ವಾಮಿಯವರು ಬರೆದು ಪ್ರಕಟಿಸಿದ ‘ಸರಳ ವಿವಾಹ’ ಪುಸ್ತಕಕ್ಕೆ ಶರಣಾದೆವು. ನಿನಗೆ ಆಶ್ಚರ್ಯವಾದೀತು, ಪ್ರೊ| ಸ್ವಾಮಿಯವರು ವೈದಿಕ ಶಾಸ್ತ್ರಗಳನ್ನು ಸಮದಂಡಿಯಾಗಿ ಅಧ್ಯಯನ ಮಾಡಿದ್ದು ಮಾತ್ರವಲ್ಲ, ಒಪ್ಪಿ ಸ್ವಂತ ಆಚಾರದಲ್ಲಿ ರೂಢಿಸಿಕೊಂಡು, ಕುರಿತು ಕೇಳಿದವರಿಗೆ ದ್ವಂದ್ವಗಳಿಲ್ಲದಂತೆ ಹೇಳುವಲ್ಲೂ ಪರಿಣತರಿದ್ದಾರೆ. ನಿನ್ನ ನೆನಪಿಗೆ ಹೇಳುತ್ತೇನೆ - ನನ್ನಪ್ಪನ ವೈಜ್ಞಾನಿಕ ನಿಲುವು ೧. ನಾನು ಗತಿಸಿದ ಮೇಲೆ ದೇಹದಾನ ಆಗಬೇಕು. ೨. ಉತ್ತರಕ್ರಿಯೆ ಹೆಸರಿನಲ್ಲಿ ಏನೂ ನಡೆಯಕೂಡದು. ಇವನ್ನು ರೂಢಿಸುವ ಹಂತದಲ್ಲಿ ನಮಗೆ ಪೂರ್ಣ ಅನುಮೋದನೆ ಕೊಟ್ಟವರು ಈ ಸ್ವಾಮಿಯಲ್ಲದ ಸ್ವಾಮಿಯವರು. ಆ ಸ್ವಾಮಿಯವರ ವಿವಾಹದ ಕುರಿತ ಪುಸ್ತಕವನ್ನು ಮನನ ಮಾಡಿ, ಹುಡುಗಿಯ ಕಡೆಯವರ ಮನನೋಯದಂತೆ, ನಾನೂ ಎರಡು ದಿಬ್ಬಣ (ಮೊದಲು ಬದ್ಧಕ್ಕೆ ಮಂಗಳೂರು - ಅಡ್ಯನಡ್ಕ, ಮತ್ತೆ ಮದುವೆಗೆ ಮಂಗಳೂರು - ಪೆರ್ಲ) ನಡೆಸಿದವನೇ ಎಂದು ನೆನಪಿಸಿಕೊಂಡೇ ನಿಮ್ಮೊಡನೆ ಸೇರಿದ್ದೆ. ಅಭಯನದ್ದಾದರೋ ಕೇವಲ ಮೂವತ್ತು ನಲವತ್ತು ಕಿಮೀ ಅಂತರದ್ದು, ಅಬ್ಬಾ ಎಂದರೂ ಒಂದೂವರೆ ಗಂಟೆಯ ದಾರಿ. ಆದರೆ ಸುಮಾರು ಅರ್ಧ ಶತಮಾನದ ಹಿಂದೆ (೧೯೬೦ರ ದಶಕ), ದಿನ ಮುಂಚಿತವಾಗಿಯೇ ತಲಪಬೇಕಾದ ಅನಿವಾರ್ಯತೆಯಲ್ಲಿ, ನಾನು (ಸುಮಾರು ಎಂಟು-ಹತ್ತರ ಪೋರ) ಅನುಭವಿಸಿದ ಇನ್ನೊಂದೇ ದಿಬ್ಬಣದಿಂದ ಇಂದಿಗೂ ಉಳಿದ ಕೆಲವು ದಟ್ಟ ಚಿತ್ರಗಳನ್ನು ಇಲ್ಲಿ ಚುಟುಕಾಗಿಯಾದರೂ ಹೇಳದುಳಿಯಲಾರೆ!
ಪುತ್ತೂರಿನ ಎ.ಪಿ. ಸುಬ್ಬಯ್ಯನವರ (ನನ್ನ ಅಮ್ಮನ ಕಡೆಯ ಅಜ್ಜ, ೧೯೦೧-೭೭) ದ್ವಿತೀಯ ಪುತ್ರ ಚಿ| ಗೋವಿಂದ (ಅಲಿಯಾಸ್ ಎ.ಪಿ. ಗೋವಿಂದ ಭಟ್) ಎಂಬ ವರನು, ಹೊನ್ನಾವರ ಕರ್ಕಿಯ ಗಣೇಶಕೃಷ್ಣಭಟ್ಟರ (ಇಂದು ದಿವಂಗತರು. ಕ್ಷಮಿಸು, ಇಸವಿಯ ವಿವರಗಳು ನನ್ನಲ್ಲಿಲ್ಲ) ಹಿರಿಯ ಮಗಳು ಸೌ| ಮೋಹಿನಿ ಎಂಬ ವಧುವನ್ನು (ಅಲಿಯಾಸ್ ಇಂದಿನ ಎ.ಪಿ ಮಾಲತಿ) ವರಿಸುವುದೆಂದು ನಿಶ್ಚಯವಾಗಿತ್ತು. ಅಂದರೆ ದಿಬ್ಬಣದ ದಾರಿ, ಪುತ್ತೂರು-ಮಂಗಳೂರು-ಹೊನ್ನಾವರ ಎಂದು ಯಾವುದೇ ಭೂಪಠ ಹೇಳುತ್ತದೆ. ಸುಮಾರು ೨೩೦ ಕಿಮೀ, ಆರಾಮವಾಗಿ ಐದಾರು ಗಂಟೆಯ ಪಯಣ. ಪುತ್ತೂರಿನಲ್ಲಿ ಕಾಫಿಯಾದರೆ ಹೊನ್ನಾವರದಲ್ಲಿ ಮಧ್ಯಾಹ್ನದ ಊಠ! ತಡಿ ತಡಿ, ನೆನಪಿಸಿಕೋ, ಇದು ಅರ್ಧ ಶತಮಾನ ಹಿಂದಿನ ಕಥೆ. ಕರಾವಳಿಯಲ್ಲಿ ಚತುಷ್ಪಥದ ಯೋಚನೆ ಬಿಟ್ಟು, ಹೆದ್ದಾರಿಯೂ ಇಲ್ಲದ ಕಾಲ. ಬರಿಯ ಮಂಗಳೂರು - ಉಡುಪಿ ಪ್ರಯಾಣಿಸಲೂ ಕೆಲವು ದೋಣಿ ಸವಾರಿಗಳನ್ನು ಪೋಣಿಸಲೇ ಬೇಕಾಗುತ್ತಿತ್ತು (ನೇಪಥ್ಯದಿಂದ ಕುಹಕಮತಿ ಬೊಬ್ಬಿಡುತ್ತಿದೆ, ಕಾಲಚಕ್ರ ತಿರುಗಿ ಅಲ್ಲಿಗೇ ಬಂದಿದೆ. ಹೆಸರು ಮಾತ್ರ ಹೆದ್ದಾರಿ, ಮಳೆಗಾಲದಲ್ಲಿ ಇಂದೂ ದೋಣಿಸವಾರಿಯೇ ಸರಿ!). ಇಂದಿನಂತೆ ಪ್ರಯಾಣಾವಧಿಯನ್ನು ಮಿನಿಟುಗಳಲ್ಲಿ ಹೆಚ್ಚು ಕಮ್ಮಿ ಎನ್ನುವಂತಿರಲಿಲ್ಲ; ಗಂಟೆಗಟ್ಟಳೆ, ಮಳೆಗಾಲದಲ್ಲಿ ದಿನಗಟ್ಟಳೆ ಆದರೂ ಆಶ್ಚರ್ಯಪಡುವವರಿರಲಿಲ್ಲ. ಹಾಗಾಗಿ ಹಿರಿಯರು ದಿನ ಮುಂಚಿತವಾಗಿಯೇ ಹೊನ್ನಾವರಕ್ಕೆ ದಿಬ್ಬಣ ಹೊರಡಿಸಿದರು. ಎಲ್ಲೋ ಒಳನಾಡುಗಳಲ್ಲಿ ಸುತ್ತಿ, ತೀರಾ ಅನಿವಾರ್ಯವಾದಲ್ಲಿ ಮಾತ್ರ ಜಲಯಾನ ಸಂಯೋಜಿಸಿ ನಕ್ಷೆ ಮಾಡಿಕೊಂಡಿದ್ದರು. ಆ ಕಾಲದ ಅತ್ಯುತ್ತಮ ವ್ಯಾನ್, ಮೂರು ಸಾಲು ಸೀಟರ್ ನಮ್ಮ ರಥ!
ಎದುರು ಸಾಲಿನಲ್ಲಿ ಚಾಲಕನಲ್ಲದೆ, ಅಜ್ಜ, ಅಜ್ಜನ ಖಾಸಾ ವೈದ್ಯ ಸುಂದರರಾವ್ ಮತ್ತು ನಮ್ಮ ಕಡೆಯ ಪುರೋಹಿತರು. ಉಳಿದಂತೆ ವ್ಯಾನೊಂದು ಉಪ್ಪಿನಕಾಯಿ ಭರಣಿ; ಅಜ್ಜಿ, ವರಮಹಾಶಯ, ವರನ ಸೋದರರು, ಅತ್ತಿಗೆ, ಸೋದರಿಯರು (ಆರು ಮಂದಿ), ಕೆಲವು ಭಾವಂದಿರು, ಮತ್ತು ನನ್ನಂಥ ಚಿಳ್ಳೆಪಿಳ್ಳೆಗಳು ಅದರೊಳಗಿನ ಜೀವವೈವಿಧ್ಯ. ಮೂರೋ ನಾಲ್ಕೋ ದಿನದ ಎಲ್ಲರ ಅಗತ್ಯದ ಮತ್ತು ಮದುವೆಯ ವಿಶೇಷ ಗಂಟುಗದಡಿಗಳನ್ನು ಸ್ಥಳ ಇದ್ದಷ್ಟು ಸೀಟುಗಳಡಿಯಲ್ಲಿ ಇರುಕಿಸಿಯೂ ಉಳಿದವನ್ನು ಎಲ್ಲರ ತೊಡೆಗೆ ಹಂಚಿಕೊಟ್ಟು, ಒತ್ತಿ ಬಾಗಿಲು ಬಡಕೊಂಡು, ಅದಕ್ಕೇ ನೇತುಬಿದ್ದೊಬ್ಬ ವ್ಯಾನ್ ಸಹಾಯಕ - ಬಹುಮುಖೀ ಉಪಯುಕ್ತ ಕೊಸರು! ದಾರಿಯೋ ಅಂಕುಡೊಂಕು ಶುನಕಬಾಲ. ಎತ್ತಿನ ಗಾಡಿಗಾಗಿ ರೂಪುಗೊಂಡ ಜಲ್ಲಿ ಮಾರ್ಗಕ್ಕೆ ದಾಸ್ತಾನು ಒದಗಿದಂತೆಲ್ಲಾ ತುಸು ತುಸು ಡಾಮರು ಕಾಣಿಸಿದ್ದರು. ಹೊಗೆ, ದೂಳು, ಸೆಕೆ, ವಾಂತಿ ಸಾರೋದ್ಧಾರ. ಏರು ಕಡಿದಾಗಿ ವ್ಯಾನ್ ಗದ್ಗದಿಸುವಾಗ ಸಹಾಯಕ ಕೈಯಲ್ಲೊಂದು ಮರದ ಕಟ್ಟೆ ಹಿಡಿದು ಹೊರ ಧುಮುಕುತ್ತಿದ್ದ. ಗೇರು ಸಹಜವಾಗಿ ಎರಡರಿಂದ ಒಂದಕ್ಕಿಳಿಯದಿದ್ದರೆ ವಿಧಿವತ್ತಾಗಿ ‘ಕಟ್ಟೆಪೂಜೆಗೆ’ ಪುರೋಹಿತ ಇವನೇ. ಮತ್ತೆ ವ್ಯಾನ್ ಹೊಸ ಹುಮ್ಮಸ್ಸಿನಲ್ಲಿ ಏರಿದರೆ ಬಚಾವ್. ಇಲ್ಲಾ ನಾಲ್ಕು ಗಂಡಸರು ಇಳಿದು (ಲೋಡ್ ಶೆಡ್ಡಿಂಗ್), ದೂಳೋ ವಾಂತಿಯೋ ಎಣಿಸದೆ ವ್ಯಾನಿಗೆ ಕೈಯೋ ತಲೆಯೋ ಕೊಟ್ಟು ಹೆಚ್ಚಿನ ಬಲ (ಪವರ್ ಡ್ರೈವ್) ಊಡುವಾಗ ಈತ ಸಮರ್ಥ ನಿರ್ದೇಶಕ, “ಲೇಲೇ ಲಂಬಾಆಆ ಐಸಾಆಆ.” ಚಾಲಕ ಕುಳ್ಳ; ಇಳಿದಾರಿಯ ಆತಂಕಕಾರಿ ಸನ್ನಿವೇಶಗಳಲ್ಲಿ ಕತ್ತು ಚಾಚಿ ದಾರಿ ನೋಡಿಕೊಳ್ಳಬೇಕು ಮತ್ತೆ ಪರಿಸ್ಥಿತಿಗನುಗುಣವಾಗಿ, ಕೆಳಜಾರಿ ಕ್ಲಚ್ಚೋ ಬ್ರೇಕೋ ತುಳಿಯಬೇಕು! ಆ ಕಾಲದಲ್ಲಿ ವೇಗವರ್ಧನೆ ಎಂಬ ಶಬ್ದವೇ ಹುಟ್ಟಿರಲಿಲ್ಲ. ಹಾಗಾಗಿ ಆಕ್ಸಿಲರೇಟರ್ ವಿಚಾರಿಸಬೇಡ. ಒಟ್ಟಾರೆ ಆ ಸವಾರಿ ಸುಖವನ್ನು ನಿರೂಪಿಸುವಲ್ಲಿ ಸಾವಿರ ನಾಲಗೆಯ ರೇಡಿಯೋ ಜಾಕಿಯೂ ಸೋಲುವುದು ಖಾತ್ರಿ ಎಂದ ಮೇಲೆ ನಾನ್ಯಾಕೆ ಮುಂದುವರಿಲಿ! (ಈ ಕಾಲದಲ್ಲೂ ಅದರ ಕಿಂಚಿತ್ ಅನುಭವಕ್ಕೆ ಹೀಗೊಂದು ವಿಡಿಯೋ ತುಣುಕು ಲಗತ್ತಿಸಿದ್ದೇನೆ, ನೋಡಬಹುದು: ‘ಬಿಸಿಲೆ ಘಾಟಿಯಲ್ಲಿ ಕೆಸರಟ್ಟಿಸಿ ಸವಾರಿ’)
ಅಷ್ಟೆಲ್ಲಾ ಸಾಲದೆಂಬಂತೆ ಅಂದು ನಮ್ಮ ವ್ಯಾನ್ ದಾರಿ ತಪ್ಪಿತ್ತಂತೆ. ಮಧ್ಯಾಹ್ನದ ಊಟಕ್ಕೆ ತೀರಾ ತಡವಾಗಿ ತೀರ್ಥಳ್ಳಿಗೆ ನುಗ್ಗಿದ್ದೂ ಅಲ್ಲಿ ಬ್ರಾಹ್ಮಣರ ಹೊಟೆಲ್ (ವಿಷಮಕಾಲದಲ್ಲಿ ಮಹಾಬ್ರಾಹ್ಮಣ ವಿಶ್ವಾಮಿತ್ರ ಏನೇ ತಿಂದಿರಲಿ, ಅಂದು ನಮ್ಮ ತಂಡ ತದ್ವಿರುದ್ಧವಾದ ಮಿಲಿಟರಿ ಹೊಟೆಲ್ ಯೋಚಿಸುವುದೂ ಅಸಾಧ್ಯವಿತ್ತು) ಹುಡುಕಿದ್ದೂ ಅಲ್ಲಿ ಬಿಸಿ ಮಂತ್ರಾಕ್ಷತೆಯಂಥ ಅನ್ನಕ್ಕೆ ಒಂದು ಗಂಟೆ ಕಾದದ್ದೂ ಕೊನೆಗೆ ಊಟ ಬಡಿಸಲಿದ್ದಾಗ ಸಹ್ಯವಿದ್ದ ಲಡಕಾಸಿ ಮೇಜನ್ನು ತೆಗೆಸಿ, ಪುರೋಹಿತರ ಮಡಿಗಾಗಿ ಕಪ್ಪುಕೊಳೆತ ನೆಲದಮೇಲೆ ಕೂರುವಂತಾದದ್ದೂ ನನ್ನ ಜೀರ್ಣಗೊಂಡ ನೆನಪಿನ ಭಿತ್ತಿಯಲ್ಲಿ ಚಿರಸ್ಥಾಯಿ! ರಾತ್ರಿಯಲ್ಲಿ ಆಗುಂಬೆ ಘಾಟಿ ಇಳಿಯುವಾಗ ಮರಿಯೊಂದಿಗೆ ತಾಯಿ ಹುಲಿಯೊಂದು ನಮ್ಮ ವ್ಯಾನ್ ಬೆಳಕಿಗೆ ಕಣ್ಣು ಕೊಟ್ಟು ದಾರಿ ದಾಟಿದಾಗ ದಕ್ಕಿದ ರೋಮಾಂಚನ, ಯಾವ್ಯಾವುದೋ ನದಿ ಕಡವಿನಲ್ಲಿ ಖಾಲಿ ವ್ಯಾನನ್ನು ಜೋಡುದೋಣಿಗಳ ಮೇಲಿನ ಹಲಿಗೆಗೇರಿಸಿ ನಾವು - ಪ್ರಯಾಣಿಕರೆಲ್ಲಾ ಸುತ್ತುವರಿದು ನಿಂತಾಗ ಗಳು ಹಿಡಿದು ದೋಣಿ ನೂಕುವವರು “ಓ ಬಾಲೇ” ಹಾಕಿದ್ದು, ಹೊಳೆಗಂಚುಗಟ್ಟಿದ ಗಿಡಮರಗಳ ಕರಿಛಾಯೆ ತಲೆದೂಗಿದ್ದು, ನೀರಿಗೆ ಉಕ್ಕು ತರಿಸಿದ (ಭರತ) ಚಂದ್ರಹಾಸ ದ್ವಿಪಾತ್ರದಲ್ಲಿ (-ಬಾನಲ್ಲೂ ಹೊಳೆಯಲ್ಲೂ) ಎಲ್ಲ ಬೆಳಗಿದ್ದೂ ವಿವರಿಸುತ್ತಾ ಕುಳಿತರೆ ನಾನಲ್ಲ, ಭಾಷೆಯೇ ಸೋಲುತ್ತದೆ. ಅಲ್ಲದೇ ನನ್ನ ಇಂದಿನ ದಿಕ್ಚ್ಯುತಿಯೂ ವಿಪರೀತವಾದೀತು. ಹಾಂ, ಎಲ್ಲಿ ಬಿಟ್ಟಿದ್ದೇ, ಕುಶಾಲನಗರ. ಮತ್ತೆ ಬಂತು ಬೈಲುಕುಪ್ಪೆ - ಟಿಬೆಟಿಯನ್ನರ ಕಾಲೊನಿ. ಇಲ್ಲ, ಅದರ ವಿವರಗಳಿಗೂ ಮನದ ಕದ ಹಾಕಿ ಜಪಿಸುತ್ತೇನೆ. . . . “ಆಹಾ ರಾಮೂಗೆ ಮದ್ವೆಯಂತೇ ಹುಡ್ಗೀ ಬೆಳ್ಗಾವಿಯಂತೇ”
ಕಾಸರಗೋಡು ತೇಜಸ್ವಿ ಶ್ರೀಹರಿಯ (ಪರ್ಯಾಯವಾಗಿ ರಾಮು ಬಂದಾಗ ಅವನ) ಕಿವಿಕಚ್ಚಿಕೊಂಡಿದ್ದ. ಮಹಿಳಾಮಣಿಗಳು ಉದ್ದಕ್ಕೂ ಶಿಸ್ತಾಗಿ ಬಲಪಂಥದ ಮೂರು ಸಾಲು ಸೀಟನ್ನಷ್ಟೇ ಬಿಸಿಮಾಡಿದರು. ಕೋಟೆ ಶಿವ ಮೌನದ ಕೋಟೆ ಹರಿಯಲೇ ಇಲ್ಲ. ಎಲ್ಲರೂ ಪರಿಚಿತರೇ ಆದರೂ ಇಂದಿನ ಜೀವನ ಕ್ರಮಕ್ಕನುಸಾರವಾಗಿ ಈ ಸನ್ನಿವೇಶಕ್ಕೆ ಮಾತ್ರ ಒಟ್ಟು ಸೇರಿದ್ದರಿಂದಲೋ ಏನೋ ಹೆಚ್ಚು ಸಮೂಹ-ಲಹರಿಗಳು ತೇಲಲಿಲ್ಲ. ಕಿಸ್ಬಾಯಿ ಕಿವಿಮುಟ್ಟುವ ಹಾಸ್ಯ ಚಟಾಕಿಗಳು ಸಿಡಿಯಲಿಲ್ಲ, ಬಸ್ಸಿನ ಸೂರು ಹಾರಿಹೋಗುವ ನಗೆಬಾಂಬುಗಳು ಸ್ಫೋಟಿಸಲಿಲ್ಲ. ‘ಅನಿಸುತಿದೆ’ಯಿಂದ ತೊಡಗಿ ‘ತೇರೇ ಅಂಗನೆ’ಯವರೆಗಿನ ಸಿನಿ-ಜ್ಞಾನ ಪರೀಕ್ಷೆ ಮಾಡುವ ಪದಬಂಡಿಗಳು ಹೊರಡಲೇ ಇಲ್ಲ. ಬಸ್ಸಿನ ಬಯಲು ಸೀಮೆಯ ಏಕತಾನತೆಯ ಓಟ ನನಗೆ ಶ್ರುತಿ ಕೊಟ್ಟಂತೆ ಆಗಿ ಅಯಾಚಿತವಾಗಿ ಸಿಳ್ಳೆಯಲ್ಲಿ ‘ವಿರಹಾಆಆ ನೂರು ನೂರು ತರಹಾಆಆ’ ತೇಲಿತು. ನನ್ನ ಮೀಸೆಯ ಬಿಗುನೋಡಿ ಮೌನವಾಗಿದ್ದವರು ಯಾರೋ ‘ಅಶೋಕಣ್ಣಂಗೆ ದೇವಕಿಯಕ್ಕನ ನೆನಪೂ’ಂತ ಕಾಲೆಳೆದರು. ನನ್ನ ರಾಗಮಾಲಿಕೆ ‘ಕಥನಕುತೂಹಲ’ದ ಘಾಟೀ ದಾರಿಗೋಡಿತು, ಪುರಾನೀ ಗೀತ್ಮಾಲಾದಲ್ಲಿ ವಿಹರಿಸಿತು, ಅಶ್ವತ್ಥರ ಧಾಟಿಯಲ್ಲಿ ಭಟ್ಟರ ‘ಎಂಥಾ ಮರುಳು’ ಸಾರಿತು. ಆಗೀಗ ನನ್ನ ಲಹರಿ ಹಿಡಿದವರಿದ್ದರು, ಸಣ್ಣಪುಟ್ಟ ಶಭಾಸ್ ಹೇಳಿದವರೂ ಇದ್ದರು. ಪುಣ್ಯಕ್ಕೆ ಅವರು ಯಾರಿಗೂ ಗೊತ್ತಿದ್ದಂತಿರಲಿಲ್ಲ - ನನ್ನ ಹಾಡುಗಳ ಸ್ಟಾಕೆಲ್ಲಾ ಗುಜರಿ ಮಾಲುಗಳು! ಆದರೂ ‘ದಾರಿ ಕಾಣದಾಗಿದೆ ರಾಘವೇಂದ್ರನೇ’ ಬರುವಾಗ ದಾರಿ ಬದಿಯಲ್ಲಿ ಜಿಟಿ ರಾಘವೇಂದ್ರನೇ ಕಾರಿಳಿದು ನಿಂತದ್ದು ನಿಜಕ್ಕೂ ತಮಾಷೆಯಾಗಿತ್ತು. ಅಲ್ಲೇ ನಮ್ಮ ಬಸ್ಸೂ ನಿಲುಗಡೆಗೆ ಬಂತು. ಹೀಗೆ ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆಗಾಗಿ ಬಂದವರು ಎಡದ ಕವಲು ಹಿಡಿದು ಹೊಳೇನರಸಿಪುರದ ದಾರಿಯಲ್ಲಿ ಎಲ್ಲೂ ಅಲ್ಲದ ಒಂದು ತಾಣದಲ್ಲಿ ಬೆಳಗ್ಗಿನ ತಿಂಡಿಗೆ ನಿಲ್ಲುವಾಗ ಗಂಟೆ ಹತ್ತಾಗಿತ್ತು.
ಕೃಷ್ಣರಾಜ ನಗರ ದಾಟುವಾಗ ನಾನು ಕಾಲೇಜಿನಲ್ಲಿದ್ದಾಗ ಇಲ್ಲಿ ಭಾಗವಹಿಸಿದ ಹತ್ತು ದಿನಗಳ ವಾರ್ಷಿಕ ಎನ್ಸಿಸಿ ಶಿಬಿರ ನೆನಪಿಗೆ ಬಂತು. ಭೇರ್ಯ ಕಳೆದು ಹೊಳೆನರಸೀಪುರ ದಾಟುವಾಗ ದೇಶಕ್ಕೆ ಕರ್ನಾಟಕ ಕೊಟ್ಟ ಏಕೈಕ ಪ್ರಧಾನಿಯ ಸ್ಮರಣೆ ಬಾರದಿರಲಿಲ್ಲ. ಅದು ದೇವರೋ ದೆವ್ವವೋ ಅಥವಾ ಒಟ್ಟು ನಮ್ಮನ್ನು ನಾವೇ ಆಳಿಕೊಳ್ಳುವ ವ್ಯವಸ್ಥೆಯ ಅಸಾಮರ್ಥ್ಯದ ಪ್ರತಿನಿಧಿಯೋ ಯೋಚಿಸಿದರೆ ವೃಥಾ ಮಂಡೆಬೆಚ್ಚ. ಅಲ್ಲಿ ಊರಿನಾಚೆಯ ಗುಡ್ಡೆ, ಮೇಲಕ್ಕೂ ಹರಿದ ದಾರಿ ಸಣ್ಣ ಕುತೂಹಲ ಮೂಡಿಸಿತು. ಮುಂದೆ ಅರಸೀಕೆರೆಯಲ್ಲಿ ಇದನ್ನೂ ಮೀರಿಸಿದ ಇನ್ನೊಂದೇ ಗುಡ್ಡೆ, ಗುಡಿ ಎಲ್ಲಾ ಕಾಣಿಸಿ ಈ ಗುಡ್ಡೇ ಹಿತ್ತಲಿನವನ ಗುಡ್ಡೆ ಏರುವ ಪ್ರಜ್ಞೆಯೇ ತಪ್ಪಿಹೋಯ್ತು. ಇಂಥದ್ದೇ ಬೆಟ್ಟದಪುರದ ಬೆಟ್ಟ (ಸ್ವಲ್ಪ ಆಚೆ, ರಾಮನಾಥಪುರದ ದಾರಿಯಲ್ಲಿದೆ) ಕೆಲವು ವರ್ಷಗಳ ಹಿಂದೆ ನಾನೂ ದೇವಕಿಯೂ ಹತ್ತಿದ್ದೆವು. ನಗರಗಳ ಹಿತ್ತಿಲಿನಂತೇ ಇರುವ ಈ ಪ್ರಾಕೃತಿಕ ತಾಣಗಳು ಗಾದೆ ಮಾತಿನಂತೆ ದೂರಕ್ಕಷ್ಟೇ (ನುಣ್ಣಗೆ ಮತ್ತು) ಆಕರ್ಷಕ. ಅಲ್ಲಿಗೆ ಹೋದರೆ ಅವುಗಳ ಮೇಲಾದ ನಾಗರಿಕ ಅವಹೇಳನವೇ ನಮ್ಮ ಗಮನ ಸೆಳೆದು ಸೋಲಿಸಿಬಿಡುತ್ತವೆ. [ಇದೇ ಅರಸೀಕೆರೆ ಸದಾಶಿವನಿಗೆ ಮೋಟಾರ್ ಸೈಕಲ್ ಕಲಿಕೆ ಕೇಂದ್ರವಾಗಿತ್ತು. ಆ ಕಥೆಯನ್ನು ಅವನ ಬಾಯಲ್ಲೇ ದಿಬ್ಬಣದ ಮೊದಲ ಹೆಜ್ಜೆಯೊಡನೆ ಲಗತ್ತಿಸಿದ ವಿಡಿಯೋದಲ್ಲಿ ಪೇಟೆಯ ದೃಶ್ಯದೊಡನೆ ಕೇಳಬಹುದು]
ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಒಗ್ಗೂಡಿಸಲು ನಾಯಕ ಶಿಖಾಮಣಿಗಳು ವಿನಾಯಕನ ಉತ್ಸವವನ್ನು ನೆಪ ಮಾಡಿಕೊಂಡರೆಂದು ಕೇಳಿದ್ದೇವೆ. ಆದರಿಂದು ಅದೇ ಉತ್ಸವ ಬಿರಡೆ ಕಳಚಿದ ಬಾಟಲಿ ಭೂತದಂತೆ ಊರೂರಿನಲ್ಲಿ ನಮ್ಮೊಳಗಿನ ಅಪನಂಬಿಕೆಯನ್ನು ಬೆಳೆಸುತ್ತಿರುವುದನ್ನು ನಾನೇನು ಹೊಸದಾಗಿ ಹೇಳಬೇಕಾಗಿಲ್ಲ. ನಮ್ಮ ಗ್ರಹಾಚಾರಕ್ಕೆ ಅಂದು ಸಂಜೆ ಶಿವಮೊಗ್ಗದಲ್ಲಿ ಎಲ್ಲೋ ವಿನಾಯಕ ವಿಸರ್ಜನೆ ನಡೆಯುವುದಿತ್ತು. ನಾವು ಆತಂಕದಲ್ಲೇ ಹೊಟೆಲಿನಲ್ಲೂ (ಚರವಾಣಿ ಸಂಪರ್ಕದಿಂದ ದಿಬ್ಬಣದ ಬರವನ್ನು ತಿಳಿದು ಶಿವಮೊಗ್ಗದಲ್ಲಿ ಎದುರುಗೊಂಡ) ನಿನ್ನ ಆತ್ಮೀಯರಲ್ಲೂ ವಿಚಾರಿಸಿಕೊಂಡೇ ಮುಂದುವರಿದೆವು. ಆದರೂ ಪೊಲಿಸ್ ಬಂದೋಬಸ್ತು, ಮಾರ್ಗ ತಡೆಗಳು ಮತ್ತು ನಿರ್ಬಂಧಗಳನ್ನೆಲ್ಲ ಕಳಚಿಕೊಂಡು ಊರ ಹೊರಬಿದ್ದಾಗ ತಪ್ಪುದಾರಿಯಲ್ಲಿ ನಾಲ್ಕೈದು ಕಿಮೀ ಓಡಿಯಾಗಿತ್ತು! ಹೊನ್ನಾಳಿಗೆ ಸುಮಾರು ನಲ್ವತ್ತು ಕಿಮೀ ಅಂತರದ ಸರ್ಕಾರೀ (ಬಸ್ಸಿನ) ಒಳ್ಳೆಯ ದಾರಿ ಬಿಟ್ಟು ನಾವು ಸುಮಾರು ಐವತ್ತು ಕಿಮೀ ಬಳಸಿನ ಜಲ್ಲಿಕಿತ್ತು, ದೂಳಿ ಸ್ನಾನ ಮಾಡಿಸುವ ಸಾವ್ಕಾರೀ ಬಸ್ಸಿನ ದಾರಿ ಹಿಡಿದಿದ್ದೆವು. ಹಿಂದೋಡಿ, ಹೊಸದಾರಿಗೆ ಪರಡುವ ಯೋಚನೆ ಬಿಟ್ಟು ಹಾಗೇ ಮುಂದುವರಿದೆವು. ಆದರೆ ಪುರಂದರ ದಾಸರೇ, ಆದದ್ದೆಲ್ಲಾ ಒಳಿತೇ ಆಗಲಿಲ್ಲ!
ಮುಂದೆ ಪೂರ್ಣ ಕತ್ತಲಾವರಿಸುತ್ತಿದ್ದಂತೆ ನಾವು ಬೆಂಗಳೂರು-ಹುಬ್ಬಳ್ಳಿ ಹೆದ್ದಾರಿಯನ್ನು ಸೇರಿಕೊಂಡೆವು. ಅದುವರೆಗಿದ್ದ ಊರು ನೋಡುವ ಅವಕಾಶ ತಪ್ಪಿತ್ತು. ಅಲ್ಲದೆ ನಮ್ಮೊಳಗಿನ ಮಾತು, ಹಾಡು, ಹುಡಿ ಎಲ್ಲಾ ಲವಲವಿಕೆ ಕಳೆದುಕೊಂಡದ್ದಕ್ಕೋ ಏನೋ ಶ್ರೀಹರಿ ಬಸ್ಸಿನೊಳಗಿನ ವಿಡಿಯೋಕ್ಕೆ ಎರಡು ಸಿನಿಮಾ - ಜುರಾಸಿಕ್ ಪಾರ್ಕ್ ಮತ್ತು ಲಾಸ್ಟ್ ವರ್ಲ್ಡ್, ಹಾಕಿದ. ಭೋರಿಡುವ ಜಲಪಾತ, ಹೆಗ್ಗೌಳಿಗಳ ದಾಪುಗಾಲು, ವಿಭಿನ್ನ ಯುಗಗಳೆರಡರ ಸಿನಿಮೀಯ ಮುಖಾಮುಖಿ ಅನಾವರಣಗೊಳ್ಳುತ್ತಿದ್ದಂತೆ ನಮ್ಮ ವಾಹನಗಳು ರಾಣೆಬೆನ್ನೂರಿನಿಂದ ತೊಡಗಿ ಹಾವೇರಿ, ಹುಬ್ಳಿಗಾಗಿ ಬೆಳಗಾವಿಯತ್ತ ಏಕ ಓಟವನ್ನು ನಡೆಸಿದ್ದವು. ಎರಡೋ ಮೂರೋ ಸುಂಕದ ಕಟ್ಟೆಗಳಲ್ಲಿ ಮತ್ತು ಚಾಲಕದ್ವಯರಿಗೆ ಏಕತಾನತೆ ಕಡಿಯುವ ನೆಪದಲ್ಲಿ ಎಲ್ಲೂ ಅಲ್ಲದಲ್ಲಿ ಒಮ್ಮೆ ನಿಂತದ್ದು ಬಿಟ್ಟರೆ ನಮ್ಮದು ಅಸಾಮಾನ್ಯ ಓಟವೇ.
ನಾನು ಮೊದಲು ಹೇಳಿದ ಅರ್ಧ ಶತಮಾನದ ಹಿಂದಿನ - ಗೋವಿಂದನ ದಿಬ್ಬಣದ ಸ್ಥಿತಿ ಇನ್ನಷ್ಟು ಹೀನಾಯವಿತ್ತೆಂಬುದನ್ನು ಇಲ್ಲಿ ನೆನೆಸಿಕೊಳ್ಳಲೇಬೇಕು. ಮೊದಲೇ ಮಾತಾಡಿಕೊಂಡಂತೆ ಆ ದಿಬ್ಬಣವೂ ಸಂಜೆಗೆ ಮೊದಲು ಕರ್ಕಿ ತಲಪಬೇಕಿತ್ತು. ಆದರೆ ‘ಗಂಡಿನ ಕಡೆಯವರು’ ರಾತ್ರಿ ಹತ್ತು ಗಂಟೆಯಾದರೂ ಬರಲಿಲ್ಲ ಎನ್ನುವಾಗ ಹೆಣ್ಣು ಹೆತ್ತವರ ಆತಂಕಗಳ ಕರ್ಮೋಡ ದಿಕ್ಕೆಡಿಸುವಂತೆ ದಟ್ಟವಾಗುತ್ತಾ ಹೋಯ್ತಂತೆ. ಪ್ರಯಾಣದ ವಿಳಂಬ, ಆಕಸ್ಮಿಕಗಳನ್ನೆಲ್ಲಾ ಅಳೆದೂ ಸುರಿದೂ ತೀರ್ಮಾನ ನಿಲ್ಲುತ್ತಿದ್ದದ್ದು, ಗಂಡಿನವರು ಅವಮಾನಕಾರಿಯಾಗಿ ಕೈಕೊಟ್ಟರು! ಅಪರಾತ್ರಿ ಎರಡು ಗಂಟೆಗೆ ದಿಬ್ಬಣ ನಿಜಕ್ಕೂ ಹಾಜರಾದಾಗ ಹುಡುಗಿಯ ತಾಯಿಗೆ ದುಃಖ ಬಿರಿದದ್ದೋ ಹರ್ಷ ಉಕ್ಕಿದ್ದೋ ಅರಿವಾಗದೇ ಕಣ್ಣು ಕತ್ತಲಾಗಿ ಬಿದ್ದೇಬಿಟ್ಟರಂತೆ!
ಆ ಲೆಕ್ಕದಲ್ಲಿ ನಮ್ಮ ಕಾಲ ಒಳ್ಳೆಯದು. ಹೆಚ್ಚುಕಡಿಮೆ ಎಲ್ಲರಲ್ಲೂ ಚರವಾಣಿಯಿತ್ತು. “ರಾಮಣ್ಣಾ ತಿರುಗಾಸಿಗೆ ಮೊದಲು ನಿಲ್ಲೋಂದ್ರೆ, ಮಂಗ, ಮುಂದೋಗಿದಿಯಾ” ಅಂತ ಶ್ರೀಹರಿ ಭಾತೃ ವಾತ್ಸಲ್ಯದಿಂದ ಕುಟುಕುವವರೆಗೆ ನಮ್ಮೆರಡು ವಾಹನಗಳ ನಡುವೆ ಸಂವಹನ ನಿರಂತರವಿತ್ತು. ಮತ್ತೆ ಹಿಂದಿನಿಂದ ನಮ್ಮನ್ನು ಕಳಿಸಿಕೊಟ್ಟವರಿಗೆ ಸುದ್ದಿಯನ್ನೂ ಮುಂದಿನೂರಿನ ಆತಿಥೇಯರಿಗೆ ಪ್ರಯಾಣದ ಪ್ರಗತಿಯನ್ನೂ ಕಾಲಕಾಲಕ್ಕೆ ಕೊಡುತ್ತಲೇ ಇದ್ದುದರಿಂದ ಯಾರೂ ಆತಂಕಗೊಳ್ಳುವ ಪ್ರಮೇಯ ಬರಲೇ ಇಲ್ಲ. ರಾಮು ಬಸ್ಸಿನಲ್ಲಿ ವಿರಾಮದಲ್ಲಿದ್ದಾಗ ಎಲ್ಲ ಒತ್ತಾಯಿಸಿ ‘ಉಡ್ಬೀ ವೈಫಿಗೆ’ ಕರೆ ಮಾಡಿಸಿದ ತಮಾಷೆ ಎಲ್ಲಿವರೆಗೆ ಬೇಳೀತಂದ್ರೆ, ಅತ್ತ ನಮಿತಾ (ವಧುವಾಗಲಿದ್ದವಳ ಹೆಸರು) “ರಾಮಯ್ಯಾ ವಸ್ತಾವಯ್ಯಾ, ಮೈನೇ ದಿಲ್ ತುಜ್ಕೊ ದಿಯಾ” ಎಂದು ಹಾಡಿರಬಹುದೇ ಎನ್ನುವವರಿಗೆ ಕೊರತೆಯಿರಲಿಲ್ಲ! ಆದರೆ ಆತಿಥೇಯ ಗಣೇಶಭಟ್ಟರು ನಮ್ಮ ನೆಪದಲ್ಲಿಟ್ಟುಕೊಂಡ ಪೂಜೆಯ ಸಮಾಪನ, ಪ್ರಸಾದ ಭೋಜನ ಎಲ್ಲವನ್ನೂ ಕಾದು ಕಾದು, ತಡವಾಗಿಯೇ ಅವರ ಮನೆಯವರ ಲೆಕ್ಕದಲ್ಲೇ ಪೂರೈಸಬೇಕಾಗಿ ಬಂದದ್ದು ಅನುಕಂಪನೀಯ. ಸಾಲದ್ದಕ್ಕೆ ಅವೇಳೆಯಲ್ಲಿ (ನಾವು ಬೆಳಗಾವಿ ಹೊರವಲಯ ತಲಪುವಾಗ ನಡುರಾತ್ರಿ ಹನ್ನೆರಡೂವರೆ ಗಂಟೆ) ಸ್ವತಃ ಗಣೇಶ ಭಟ್ಟರು ಹೆದ್ದಾರಿ ಪಕ್ಕಕ್ಕೆ ಬಂದು ನಮಗೆ ಮಾರ್ಗದರ್ಶನ ಮಾಡಬೇಕಾಯ್ತು. ಅವರ ಮನೆ ತಲಪಿದ್ದೇ ಮೊದಲು ಪೂಜೆಯ ತೀರ್ಥ ಪ್ರಸಾದ. ಅನಂತರ ಊಟ, ಕೊನೆಯಲ್ಲಿ ಪ್ರಯಾಣದ ಕೊಳೆ ನಿರ್ನಾಮ. ಈ ಹಿಂದೆ ಮುಂದಾದ ಕ್ರಿಯೆಗಳಿಗೆ ಸರಿಯಾಗಿ ಮಲಗುವಾಗ ಗಂಟೆ ಒಂದೂವರೆ; ಇದು ಕಳೆದ ರಾತ್ರಿಯೋ ಹೊಸಹಗಲೋ? ಖ್ಯಾತ ನಾಟಕಕಾರನೊಬ್ಬನ ಪಾತ್ರ ಹೇಳುತ್ತದೆ “ತಡವಾಗಿ ಮಲಗುವುದೆಂದರೆ ಬೇಗ ಮಲಗುವುದೆಂದೇ ಅರ್ಥ!
ಇಂತು ವಿಶ್ವಾಸಿ
ಅಶೋಕ
ಅಶೋಕ ಬಾವ, ನಾರಾಯಣ ಮಾವ ನಮ್ಮ ಮನೆಗೆ ಬಂದಾಗ ಅದೆಷ್ಟೋ ಬಾರಿ ನನ್ನಪ್ಪನ (ಅರ್ಥಾತ್ ನಿಮ್ಮೆಲ್ಲರ ಗೋವಿಂದನ) ಕಲ್ಯಾಣೋತ್ಸವದ ಸುದೀರ್ಘಪಯಣವನ್ನು ನೆನಪಿಸಿಕೊಳ್ಳುತ್ತಿದ್ದದ್ದು ಮತ್ತೆ ನೆನಪಿಸಿತು ನಿನ್ನ ಬರಹ. . ಅಂದು ಮೊಬೈಲ್ ಇಲ್ಲದ ಪ್ರಶಾಂತ ಕಾಲ. ನೀವೆಲ್ಲ ದಾರಿ ತಪ್ಪಿದ ಮಂದಿ ಧಾರವಾಡ ತಲುಪುವ ಹೊತ್ತಿಗೆ ನಡುರಾತ್ರೆಯಂತೆ. ಅಮ್ಮನಮ್ಮ ಅಂದರೆ ನಮ್ಮ ಪಾಲಿನ "ಆಯಿ" ವರ ಕೈಕೊಟ್ಟ ಅಂತಲೇ ನಿರ್ಧರಿಸಿದರಂತೆ. ಮೊನ್ನೆ ನೀವು ಬೆಳಗಾಂವ್ ಕೂಡ ತಲುಪಿದ್ದು ನಡು ರಾತ್ರೆ ! ಎಷ್ಟೆಲ್ಲ ಖುಷಿ ಪಟ್ಟಿರಬಹುದು ನೀವೆಲ್ಲ. ಹೀಗೆ ಬಾಂಧವ್ಯ ಉಳಿದು ನಳನಳಿಸುತ್ತಿರಬೇಕು. ಇನ್ನು ಮುಂದೆ ಮದುವೆಯಾಗುವವರು ದೂರದೂರಿನವರನ್ನು ಆರಿಸಿಕೊಂಡು ಬಂಧು ಬಾಂಧವರಿಗೆಲ್ಲ ಹೀಗೆ ಒಟ್ಟಾಗಿ ಪಯಣಿಸುವ ಅವಕಾಶ ಕಲ್ಪಿಸಿಕೊಡಲಿ ಎಂಬ ಠರಾವು ಪಾಸು ಮಾಡಿದರೆ ಹೇಗೆ?
ReplyDelete.
ಅಶೋಕವರ್ಧನರೇ!
ReplyDeleteಉಭಯ ಕುಶಲೋಪರಿ.
ಸಾಂಪ್ರತ ಎಲ್ಲಾ ವಿವರಗಳು ತಿಳಿದುಬಂದುವು. ಈ ಪತ್ರದ ನಂತರ ಹೆಚ್ಚಿನ ಆಮಂತ್ರಣ ಪತ್ರ ಕಳುಹಿಸುವ ಅಗತ್ಯ ಇಲ್ಲ.
ನಾನು ಡೈರಿಯಲ್ಲಿ ಬರೆದುಕೊಂಡಾಯಿತು!
"ಡಿಸೆಂಬರ್ ಒಂದು ಪುತ್ತೂರಿನಲ್ಲಿ ಮದುವೆ, ಎರಡರಂದು ಮಡಿಕೇರಿಯಲ್ಲಿ ವಧೂ ಗೃಹಪ್ರವೇಶ ".
ಪುತ್ತೂರಿನಲ್ಲಿ ಸಿಗೋಣ! ಮತ್ತು ಅಲ್ಲಿಂದ ಮಡಿಕೇರಿಗೆ ನಮ್ಮ್ಮದು ಜತೆ ಪ್ರಯಾಣ.
ವಿ. ಸೂ. : ನನಗೆ ವೆಜಿಟೇರಿಯನ್ ಬಿರಿಯಾನಿ ಅಲರ್ಜಿ! - ನೆನಪಿರಲಿ! - ಪೆಜತ್ತಾಯ ಎಸ್. ಎಮ್.
ಬದ್ಧಕ್ಕೆ ನಾಲ್ಕು ಮಂದಿ (ವರ ಮಹಾಶಯ ಹೋಗದೇ ಇದ್ದರೂ ನಡೆಯುತ್ತಿತ್ತು) ಮಾತ್ರ ಹೋಗುತ್ತಿದ್ದ ಕಾಲ ಒಂದಿತ್ತು. ಈಗ ಅದು 'ದಿಬ್ಬಣ'ದ ರೂಪ ಪಡೆದಿದೆ. ಸಮಾರಂಭ ಪುರೋಹಿತರು ಇಲ್ಲದೇ ಇದ್ದರೂ ನಡೆಯುತ್ತಿತ್ತು. ಈಗ ಅದು 'ಮಿನಿ' ಮದುವೆಯ ರೂಪ ತಾಳಿದೆ. ನಿಜವಾಗಲೂ ನಾವು ಪ್ರಗತಿಪಥದಲ್ಲಿ ಮುಂದುವರಿಯುತ್ತಿದ್ದೇವೆ. ಲೇಖನ ಕೆಲವು ನನಗೆ ತಿಳಿಯದೇ ಇದ್ದ ಮಾಹಿತಿ ಒದಗಿಸಿತು.
ReplyDeleteಇದೊಂದು ಕುಟುಂಬಕ್ಕೆ ಸೀಮಿತ ಬರಹವಿರಬಹುದೆ ಎಂಬ ಆಲಸ್ಯದಿಂದ ಓದಲು ಆರಂಭಿಸಿದೆ. ಕುತೂಹಲಕಾರಿಯಾಗಿರುವ ಈ ಕಥನ ಅನೇಕ ಅನೂಹ್ಯ ವಿವರಗಳು ಹಾಗೂ ವಿಸ್ಮಯಕರ ಒಳನೋಟಗಳೊಂದಿಗೆ ಮುದ ನೀಡಿತು. ಎರಡು ಬಣಗಳನ್ನು ಬೆಸೆಯುವ ‘ದಿಬ್ಬಣ’ ಎಂಬುದು ಎಂಥ ಸೋಜಿಗದ ವಿಷಯ ಅಲ್ಲವೆ ? ದಿಬ್ಬಣದ ರೂಪುರೇಷೆ ಕಾಲಕಾಲಕ್ಕೆ ಹೇಗೆ ಬದಲಾಗುತ್ತ ಬಂದಿದೆ ಎಂದು ಚರ್ಚಿಸುವುದೂ ಒಂದು ಕುತೂಹಲಕರ ಸಮಾಜೋ- ಸಾಂಸ್ಕೃತಿಕ ಅಧ್ಯಯನ ಆಗಬಲ್ಲುದು ಅನಿಸುತ್ತದೆ. ಹೀಗಾಗಿ ಇದು ಒಂದು ಮನೆಗೆ ಸೀಮಿತವಲ್ಲ; ಇಡೀ ಸಮುದಾಯಕ್ಕೆ ಸಂಬಂಧಿಸಿದ್ದು ಎಂಬಂತೆ ಓದಿಕೊಂಡೆ. ಖುಷಿಯಾಯಿತು. ಇಂಥ ಅನೌಪಚಾರಿಕ ಬರಹಗಳು ನಮ್ಮ ಅರಿವನ್ನು ಹಿಗ್ಗಿಸುತ್ತಿರಲಿ. ಆಭಾರಿ.
ReplyDelete- ಹರೀಶ್ ಕೇರ
ಬದ್ದಕ್ಕೆ ಹೊದ ಕಥೆ ಚೆನ್ನಾಗಿದೆ.
ReplyDeleteಶಿವಮೊಗ್ಗ ಹೊನ್ನಾಳಿ ನಾ ಇಡೀ ಪ್ರವಾಸದಲ್ಲಿ ಕಂಡ ಅತ್ಯಂತ ಕೆಟ್ಟ ರಸ್ತೆಗಳಲ್ಲೊಂದು. ಗಮನಿಸಿದ್ದೀರಾ ? ಹೊನ್ನಾಳಿಯಲ್ಲಿ ಹಲವಾರು ಉಡುಪಿ ಹೋಟೇಲುಗಳು. ಮುಂದೆ ಹಿಂದಿನ ಊರುಗಳಲ್ಲಿ ಅಷ್ಟಿಲ್ಲ.
ಗೋವಿಂದ
ಒಂದು ಮಾಹಿತಿ: ಈಶ್ವರಮಾವ ಕಾಫಿ ಕುಡಿದರೆ ಆಯಿತು ಮತ್ತೆ. ಚಪಲಕ್ಕೂ ಕಾಫಿ ಚಪ್ಪರಿಸಿದವರಲ್ಲ ಅವರು. ಅಷ್ಟು ಮಡಿ ಇತ್ತು ಕಾಫಿ ಚಹದಲ್ಲಿ ಅವರಿಗೆ. ನೀವು ಹೀಗೆ ಬರೆದದ್ದು ಗೊತ್ತಾದರೆ ಅಲ್ಲಿಂದಲೇ ಲೆಪ್ಟೆಂಡು ರೈಟು ಜಾಡಿಸಿಯಾರು! ಆನಂದ ಭಾವ ಕಾಫಿ ಕುಡಿಯಲ್ಲ ಅಂತ ಅವರಿಗೆ ಬಹಳ ಖುಷಿ ಇತ್ತು. ಅನಂತನಿಗೆ ಕಾಫಿ ಕುಡಿಯಬೇಡ ಎಂದು ಹೇಳಿ ಹೇಳಿ ಸೋತಿದ್ದರು.
ReplyDeleteದಿಬ್ಬಣ ಹೋದದ್ದು ಮಾತ್ರ. ಅಲ್ಲಿ ನಡೆದ ಕಲಾಪದ ಸುದ್ದಿ ಇಲ್ಲ. ಅಪೂರ್ಣವಾಯಿತು ಲಹರಿ.
ReplyDeleteಮೋಹಿನಿ (ಎ.ಪಿ. ಮಾಲತಿ) ಅಕ್ಕನ ಮದುವೆಯಲ್ಲಿ ನಾನು ತು೦ಬಾ ಚಿಕ್ಕವನಿದ್ದೆ. ಕರ್ಕಿ ನಮ್ಮ ಅತ್ತೆಯ ಮನೆಯಲ್ಲಿ ಮದುವೆ. ರಾತ್ರಿ ಹನ್ನೆರಡು ದಾಟಿದರೂ ಪುತ್ತೂರಿನಿ೦ದ ದಿಬ್ಬಣ ಬರದಿದ್ದಾಗ ಎಲ್ಲರೂ ಚಿ೦ತಾಜನಕರಾಗಿದ್ದರು. ನನಗೆ ಯಾವ ಜವಾಬ್ದಾರಿಯೂ ಇಲ್ಲದ್ದರಿ೦ದ ರಾತ್ರಿ ಯಾವಾಗ ನಿದ್ದೆ ಬ೦ದಿತೊ ನೆನಪಿಲ್ಲ. ಬೆಳಿಗ್ಗೆ ಎದ್ದಾಗ ದಿಬ್ಬಣ ಸುಮಾರು ಬೆಳಿಗ್ಗಿನ ೨ ಗ೦ಟೆಗೆ ಬ೦ದಿತೆ೦ದು ತಿಳಿಯಿತು. ಬಾಲ್ಯದ ನೆನಪನ್ನು ಮರುಕಳಿಸಕ್ಕೆ ಧನ್ಯವಾದಗಳು.
ReplyDeleteಅಶೋಕಣ್ಣಾ
ReplyDeleteಕಡೂರು ಬೀರೂರು, ಹೊಸಪೇಟೆ ದಾರಿಯಲ್ಲಿ ಗುಡ್ಡಗಳಲ್ಲಿ ದಾರಿ ಮಾಡಿ ಗಾಳಿಯಂತ್ರ ಸ್ಥಾಪನೆ ನೋಡುವಾಗ ಬಹಳ ಬೇಸರವಾಗಿತ್ತು. ಇಲ್ಲೊಂದು ಚಿತ್ರಣ ಇದೆ.
http://www.downtoearth.org.in/content/green-energy-takes-toll-green-cover
ಪ್ರೀತಿಯಿಂದ
ಗೋವಿಂದ
Ashokanna....ಚೋಕ್ರೀ ಬೆಳಗಾಂವೀ! (ದಿಬ್ಬಣದ ಎರಡನೇ ಹೆಜ್ಜೆ) odide.... Bahala khushiyaythu......thadavaddakke kshame irali......
ReplyDeleteNeevellaru nammondige belagaavige bandaddu namagellarigoo bahala santhoshavayithu.... nammellarannu (@ Jyothi) neevu hogaluvashtu upachara navenu maadalillavaadaroo nammannu hogaliddu nimma doddathana...
Belagaavige hoda anubhavavannu eradane hejjeyallooo ele eleyaagi vivarisiddakke (Photos & Videogala sahitha) namage allige punaha hoda anubhavavaythu..... belagaaviya prayana khushi kottarooo adarannu neevu helidante nanige vyaktha padisalu baruvudilla..... kshame irali