
ರಂಗನಾಥ ಸ್ತಂಭ ವಿಜಯ ಭಾಗ ಮೂರು
ಚಳಿಗೆ ಕಾಲವೂ ನಡುಗುವುದು: ಶ್ರೀರಂಗನಾಥ ಸ್ವಾಮಿಯು ಆದಿಶೇಷನ ಮೇಲೆ ಒರಗಿ, ಒಂದೆಸಳು ಶ್ರೀತುಳಸಿಗೋ ಬಿಂದು ಗಂಗೋದಕಕ್ಕೋ ಭಕ್ತಾಭೀಷ್ಟವರಪ್ರದಾಯಕನಾಗಿರುವುದನ್ನು ನಾನು ಶ್ರೀರಂಗಪಟ್ಟಣದಲ್ಲಿ ಕಂಡವನಿದ್ದೇನೆ. ಕಾಲಹತಿಯಲ್ಲಿ ಆರಾಧನೆ ಆರತಿ ತಟ್ಟೆಯ ಆದಾಯವನ್ನು ಆತುಕೊಂಡಾಗ, ಮೇಲ್ವಿಚಾರಣೆ ಮೇಲ್ಸಂಪಾದನೆಯ ಮೇಲೇ ಮಲೆತುಬಿದ್ದಾಗ, ‘ದೇವಾಲಯ ಶಿಥಿಲಗೊಂಡು ಬಿರುಕುಬಿಟ್ಟ’ ವಾರ್ತೆಯನ್ನೂ ಓದುತ್ತಲಿದ್ದೇನೆ. ದೇವಬಿಂಬ ದೂಳೀ ಸ್ನಾನಕ್ಕೂ ನಿರ್ಮಾಲ್ಯ ಪೂಜನಕ್ಕೂ ಮೀಸಲಾದುದನ್ನೂ ಕಂಡವನಿದ್ದೇನೆ. ಆದರೆ ಭವಾನಿ ಕೊಳ್ಳದ ನಮ್ಮ ರಂಗನಾಥ ನಿಂತೇ ಇದ್ದರೂ ಪ್ರಕೃತಿಯ ಪೂಜೆ ಸ್ವೀಕರಿಸುತ್ತಾ ಸದಾ ಸುಖಿ, ಭಜಕರಿಗೆ ನಿತ್ಯ ನೂತನ. ಇವನಿಗೆ ಸಾಹಸವೇ ಸೇವೆ ಎಂದು ನಂಬಿದ ಕಿಂಕರರು ನಾವು. ಶಿಬಿರ ಹೂಡಿದ ಮೇಲಿನ ತಿರುಗಾಟದಲ್ಲಿ ನಾವು ಕಣ್ಣ ನೋಟಕ್ಕೆ ದಕ್ಕಿದಷ್ಟನ್ನು ಗರಿಕೆ ಸಮಿತ್ತುಗಳ ವಿವರದಲ್ಲಿ (ವೈದಿಕ ಸಂಭಾರದಂತೆ) ನೆನಪಿನ ಜೋಳಿಗೆಗೆ ಸೇರಿಸಿಕೊಂಡು ಮರಳಿದೆವು. ದೇವಾಲಯಗಳಲ್ಲಿ ದೇವಬಿಂಬಕ್ಕೆ ಖಾಸಾ ಸೇವೆಗೆ ಮುನ್ನ (ಎಷ್ಟೋ ಬಾರಿ ಜಿಡ್ಡುಹಿಡುಕಲು, ಕೊಳಕು) ತೆರೆಯೆಳೆಯುವುದನ್ನು ನೋಡಿದ್ದೇನೆ. ಆದರೆ ನಮ್ಮ ರಂಗನಾಥನಿಗೆ ದಿನಮಣಿಯೇ ಪರದೆಯವ. ಶಯನೋತ್ಸವಕ್ಕೆ ಕತ್ತಲಾವರಿಸಿತು.
ಸಮುದ್ರ ಮಟ್ಟದಿಂದ ೫೮೦೦ ಅಡಿ ಎತ್ತರ, ಅದರಲ್ಲೂ ಜನವರಿ ತಿಂಗಳು - ಉಶ್, ಚಳಿಯಪ್ಪೋ ಚಳಿ. ಇದ್ದೆಲ್ಲಾ ತೊಡುಗೆ ಅವಚಿಕೊಂಡೆವು. ಸ್ವೆಟ್ಟರ್, ಮಂಗನಟೊಪ್ಪಿ, ಶಾಲು ಸಾಕಾಗಲಿಲ್ಲ. ಕೆಲವರು ಗುಟ್ಟಿನಲ್ಲಿ ಎರಡು ಪ್ಯಾಂಟ್ ಕೂಡಾ ಏರಿಸಿದ್ದರು! ಅಡುಗೆ ಒಲೆಯನ್ನೇ ದೊಡ್ಡ ಮಾಡಿ ಸುತ್ತ ಮುಕುರಿಕೊಂಡೆವು. ಚಪಾತಿಯೇನೋ ಕಟ್ಟಿ ತಂದದ್ದಿತ್ತು. ಆದರೆ ಹೋಟೆಲಿನ ಅರೆಬೆಂದ ಚಪಾತಿ ಚಳಿಗೆ ನಾಯಿ ಚಕ್ಕಳ; ಹರಿದರು ಇಲ್ಲ, ಜಗಿಯಲು ಸಲ್ಲ. ಅದೃಷ್ಟಕ್ಕೆ ಕೂಟಕ - ಬಟಾಟೆ ಪಲ್ಯ, ಉಪಾಧ್ಯರ ಮಾಯಾಪಾತ್ರೆಯದ್ದು. ಸ್ವಲ್ಪ ಸ್ವಲ್ಪವೇ ನೆನೆಸಿ, ಹದಬರಿಸಿ, ಬಾಯಿಗೆ ರುಚಿತರಿಸಿ ಹೊಟ್ಟೆಗಿಳಿಸಿದೆವು. ಆದರೂ ಮತ್ತಷ್ಟು ಚಪಾತಿ ಉಳಿದೇ ಇತ್ತು. ಮಧ್ಯಾಹ್ನ ಹೋಟೆಲಿನಲ್ಲಿ ಕಟ್ಟಿಸುವಾಗ “ನಂಗ್ನಾಕು, ನಂಗೈದು” ಎಂದು ದೊಡ್ಡ ಬಟ್ಟಲು ಹಿಡಿದವರೆಲ್ಲ ಈಗ ನಿರ್ವಿಣ್ಣರು. ಕೈ ತೊಳೆಯುವ ಶಾಸ್ತ್ರಕ್ಕೆ ಒಲೆಯ ಮೇಲೆ ಬಿಸಿ ನೀರೇನೋ ಮಾಡಿಕೊಂಡಿದ್ದೆವು. ಆದರೆ ತೊಳೆದ ಮರುಕ್ಷಣಕ್ಕೆ ಬೆರಳುಗಳು ನೀರಪಸೆಗೆ ಕೋಟಗಟ್ಟುವ ಪರಿ ನೋಡಿ ಎಂಜಲು, ಮಡಿ ಎಲ್ಲಾ ನಾಗರಿಕತೆಯ ಭ್ರಮೆಗಳು ಎಂದು ಘೋಷಿಸಿಬಿಟ್ಟೆವು. ಮೂಲವಾದಿಗಳು “ಊಟಕ್ಕೆ ಮೊದಲೇ ಕೈತೊಳೆಯಲಿಲ್ವಂತೆ, ಇನ್ಯಾಕೆ” ಎಂದು ಪ್ಯಾಂಟಿಗೆ ಕೈ ಒರೆಸಿ ಶುದ್ಧರಾದರು. ಹಿಂದಿನ ರಾತ್ರಿಯಿಂದ ತೊಡಗಿದಂತೆ ಅನುಭವಿಸಿದ ಪ್ರಯಾಣ ಮತ್ತು ಶ್ರಮಗಳ ಲೆಕ್ಕ ಹಿಡಿದು ಬಳಸಿದ ತಟ್ಟೆ ಲೋಟಗಳನ್ನು ತೊಳೆಯುವುದು ಬಿಡಿ, ದಂತಧಾವನ, ಮುಖಮಾರ್ಜನದಂತ ಅನಿವಾರ್ಯಗಳನ್ನೂ ಆಪದ್ಧರ್ಮ ಎಂದು ತಳ್ಳಿ ಹಾಕಿದೆವು. ಇದನ್ನು ಕೇಳಿ, ‘ಅತಿಚಳಿಯಲ್ಲಿ ಪ್ಯಾಂಟಿಗೆ ಆಲುಗೆಡ್ಡೆ ಪಲ್ಯದ ಉಳಿಕೆಗಳನ್ನು ಸವರುವುದರಿಂದ ಆಗುವ ಪರಿಣಾಮ’ಗಳ ಬಗ್ಗೆ ಧೋಬೀಶಾಟ್ ವಿಶ್ವವಿದ್ಯಾನಿಲಯದ ರಜಕ ಸಂಶೋಧನಾಗಾರ ಉನ್ನತ ಮಟ್ಟದ (ಸ.ಮದಿಂದ ೫೮೦೦ ಅಡಿ!) ಅಧ್ಯಯನ ನಡೆಸಲು ಐವತ್ತು ಲಕ್ಷದ ಪ್ರಾಜೆಕ್ಟ್ ರಿಪೋರ್ಟ್ ಹಾಕಿದೆಯಂತೆ. ಮತ್ತು ಇಲ್ಲಿ ಹೀಗೆ ಹೆಚ್ಚುವರಿಯಾಗುವ ನೀರನ್ನು ಪರಿಸರ ಸ್ನೇಹೀ ಗಾರ್ಲ್ಯಾಂಡ್ ಕೆನಾಲ್ಗಳ ಮೂಲಕ ಬರಪೀಡಿತ ಸ್ಥಳಗಳಿಗೆ ತಿರುಗಿಸಲು ಕರ್ನಾಟಕದ ನಿವೃತ್ತ ಇಂಜಿನಿಯರ್ ಒಬ್ಬರು ಹೊಸದೇ ಕಡತವನ್ನು ಹೊಸೆಯುತ್ತಿದ್ದಾರಂತೆ!

ಚಂದ್ರನ ಮಂದ್ರದಲ್ಲಿ ಹಲವು ಗುನುಗುಗಳು ತೇಲಿದವು. ಚಡಪಡಿಸುವ ಬೆಂಕಿಯೊಡನೆ ಹಲವು ವಿಚಾರಗಳೂ ಸ್ಫೋಟಿಸಿದವು. ದೂರದ ಚಾ ತೋಟದ ಒಕ್ಕಲು ಸಾಲು ಈಗ ಮಿಣಿಮಿಣಿ ಮಾಲೆ. ಅಷ್ಟೇ ಅಲ್ಲ ಎಂಬಂತೆ ಸುತ್ತೂ ಸುದೂರಗಳಲ್ಲಿ ಹಂಚಿಹೋದಂತೆ ಹಲವು ಮಿಣುಕುಗಳು ಮನುಷ್ಯ ವಾಸ್ತವ್ಯದ ಹರಹು ತೋರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಚಲಿಸುವ ದೀಪಗಳು ವಾಹನ ಸಂಚಾರದ, ದಾರಿಯ ಸುಳಿವುಗಳನ್ನು ಬಿಚ್ಚುತ್ತಿತ್ತು. ಚಳಿ ಒತ್ತುತ್ತಿದ್ದಂತೆ ಎಲ್ಲರಿಗೂ ಗುಡಾರಗಳು ದೂರಾದವು. ಹೆಚ್ಚೇನು, ಸಮಯವೂ ನಿಧಾನಿಸಿತು! ಹಾಡಿನ ಸುರುಳಿ ಮುಗಿಯಿತೆಂದಲ್ಲ, ಕತೆಗಳಾ ಕಂತೆ ಮಡಚಿದ್ದೂ ಇಲ್ಲ. ಗಾಳಿಗೆ ಜೊತೆಗೊಟ್ಟ ಜ್ವಾಲೆಯ ನಲಿಕೆಯೊಡನೆ ನಮಗೆ ಹಿಂದೆ ಮುಂದೆ ಓಲಾಡಿ ಸಾಕಾಯಿತು. ಬೆಂಕಿಯ ಬಿಸಿಗೆ ಕೆಳಗಿನ ಬಂಡೆ ಸಶಬ್ದ ಬಿರಿಯತೊಡಗಿ ನಮ್ಮನ್ನು ಬೆದರಿಸಿತು. ತಿಂಗಳನ ಮಂದ ಬೆಳಕಿನಲ್ಲಿ ರಂಗನಾಥನೇ ಗುರುಗುಟ್ಟಿದಂತೆ, ದುರುಗುಟ್ಟಿದಂತೆ ಮತ್ತಷ್ಟು ಗಹನವಾದಂತೆಲ್ಲ ಅನ್ನಿಸಿ ಕಸಿವಿಸಿಯಾಯ್ತು. ಮರುದಿನದ ಸವಾಲೆದುರಿಸಲು ನಮಗೆ ನಿದ್ರೆ ಎಂಬ ವಿಶ್ರಾಂತಿ ತೀರಾ ಅವಶ್ಯವಿತ್ತು. ಅವೆಲ್ಲವನ್ನೂ ಒಟ್ಟುಗೂಡಿಸಿ, ಮೈಮುದ್ದೆ ಮಾಡಿಕೊಂಡೇ ಗುಡಾರ ಸೇರಿದೆವು.

ನಾನು ತಿಳಿದಂತೆ ದೇವು ವಾಸ್ತವದಲ್ಲಿ ಗುಂಡುಕಲ್ಲೇನೂ ಅಲ್ಲ ಎಂಬುದಕ್ಕೆ ಅವರು ರಾತ್ರಿ ಕಳೆದ ಕಥೆಯನ್ನು ಅವರ ಮಾತಿನಲ್ಲೇ ಕೇಳಿ. “ಉಪಾಧ್ಯರ ಮೀಟರ್ ೧೩ ಡಿಗ್ರಿ ಸೆಲ್ಶಿಯಸ್ ತೋರಿಸುತ್ತಿದ್ದರೂ ಬೀಸುತ್ತಿದ್ದ ಕುಳಿರ್ಗಾಳಿ ಅದು ೫-೬ಕ್ಕಿಂತ ಕೆಳಗಿರಬೇಕೆಂದೇ ಭ್ರಮೆ ಹುಟ್ಟಿಸುತ್ತಿತ್ತು. ತಣ್ಣೀರು ಮುಟ್ತಿದೆ, ಕೈ ಮರಗಟ್ಟಿ ಹೋಯ್ತು. ಶಿಬಿರಾಗ್ನಿಗೆ ತಾಗಿ ಕುಳಿತೆ. ಬೆಂಕಿ ಗುಡಿಯ ಹೊರಗಿತ್ತು. ಆದರೂ ಅದರ ಕಾವಿಗೆ ಗುಡಿಯೊಳಗಿನ ತ್ರಿಶೂಲಗಳು ಕರಗಿಯೇ ಹೋಗಿರಬೇಕು, ಕಾಲ ಕೆಳಗಿನ ಪಾದೆಯಂತೂ ನಿಜಕ್ಕೂ ಚಿಟಿಚಿಟಿಲೆಂದು ಬಿರಿಯುತ್ತಿತ್ತು. ಆದರೂ ನಮ್ಮ ಚಳಿ ಬಿಡಲಿಲ್ಲ. ಅನಿವಾರ್ಯವಾಗಿ ನೀರು ಮುಟ್ಟಿದರೆ ಕೈಯನ್ನೇ ಹೋಮಕ್ಕೊಡ್ಡಿ ಅವರವರಂಗೀಜೇಬರಾಗಿಬಿಡುತ್ತಿದ್ದೆವು. ಅಸಾಧ್ಯ ಚಳಿಯಲ್ಲಿ ಇನ್ನೇನು ಸತ್ತೇಹೋದೇನು ಎಂಬ ಭಯ ಕಾಡಿದರೂ ಉಪಾಧ್ಯರ ಸಾವಿರದ ಒಂದನೆಯ ಸಂಶೋಧನೆಯಾದ ಗೋಲಾಕಾರದ ಗುಡಾರ ಸೇರಿ ಮಲಗಿಬಿಟ್ಟೆ. ರಾತ್ರಿಯುದ್ದಕ್ಕೆ ಒಬ್ಬಿಬ್ಬರು ಆಗೀಗ ಎದ್ದು ಹೋಮದ ಬೊಣ್ಯವನ್ನು ಅರ್ಥಾತ್ ಪುಣ್ಯವನ್ನು ಕೈಮೈಗೆ ಹತ್ತಿಸಿಕೊಂಡು ಗುಡಾರ ಸೇರಿ ಮುರುಟುವುದು ತಿಳಿದರೂ ನಾನೇಳಲಿಲ್ಲ. ಆನೆಹುಲ್ಲು, ಮಜ್ಜಿಗೆ ಹುಲ್ಲುಗಳ ಸಂದಿಯಲ್ಲಿ ಗಾಳಿ ರುಮುರುಮು ಬೀಸುವಾಗ ಏನೇನೋ ಭ್ರಮೆಗಳು. ಆದರೂ ನಿದ್ರೆಗೇನೂ ಕೊರತೆಯಾಗದ್ದು ನಾನು ಪಡೆದು ಬಂದ ಭಾಗ್ಯವೇ ಇರಬೇಕು.”
[ಹಿಂದೆ ಆನಂದನ ತಂಡವೂ ಇಲ್ಲೆ ಶಿಬಿರ ಹೂಡಿತ್ತು. ಅವನದೇ ಭಾಷೆಯಲ್ಲಿ ಎರಡು ಮಾತು. “ನಮಗೋ ಯೌವನದ ಮದ. ನಮ್ಮ ಡೇರೆ ಎಂದರೆ ಒಂದು ಕಪ್ಪು ಜಮಖಾನ, ತಾಳಿಕೊಳ್ಳಲು ಎರಡು ಕೋಲು. ಆದರೇನು, ಬಚ್ಚುವಿಕೆ, ಮೃಷ್ಟಾನ್ನ ಭೋಜನದ ಅಮಲು ಒಳ್ಳೆ ನಿದ್ರೆಗೆ ಕಾರಣವಾಯ್ತು.”]

ಏಳುಮುಕ್ಕಾಲಕ್ಕೆ ಗುಡಿಗೆ ವಿದಾಯ. ದೇವು ಅಂದಾಜಿಸಿದಂತೆ “ಶಿಬಿರ ಸ್ಥಾನಕ್ಕೂ ಶಿಖರ ತುದಿಗೂ ಹಕ್ಕಿಯ ಬೀಸುರೆಕ್ಕೆಯ ದಾರಿಯಲ್ಲಿ ಅಂತರ ಕೇವಲ ನೂರಿನ್ನೂರು ಮೀಟರ್. ಆದರೆ ನಡುವೆ ಮಹಾ ಕಂದರ, ಇಳಿಯಲಾಗದ ಕಡಿದು.” ಆ ಪ್ರಪಾತದಂಚನ್ನು ನಿವಾರಿಸುವಂತೆ ಪೂರ್ವ ದಿಕ್ಕಿನ ‘ಮಂಗಕಲ್ಲಿನತ್ತ’ ಇಳಿಯತೊಡಗಿದೆವು. ಭಟ್ಟರಿಗೆ ಯುದ್ಧೋತ್ಸಾಹ, “ಹೊಡೆವವರು ಬನ್ನಿರೋ ತಡೆವವರು ಬನ್ನಿರೋ! ‘ಅಶೋಕ’ ನಮ್ಮ ಮುಂದಾಳು. ಹುಲ್ಲು, ಮುಳ್ಳು, ಉರುಳುಗಲ್ಲು ನಮ್ಮ ಹೆಜ್ಜೆಹೆಜ್ಜೆಯ ಧನ್ಯತೆ. ಹರಿವ ಬೆವರು, ತರಚುಗಾಯ ವೀರ ಸ್ಮರಣಿಕೆಗಳು.” ದೇವು ಭಾವ ತದ್ವಿರುದ್ಧ. “ಆಶ್ಚರ್ಯವೆಂದರೆ ಹಿಂದಿನ ಸಂಜೆ ರಂಗನಾಥನ ಎದುರು ನಿಂತಾಗ ಉಂಟಾದ ಅಧೈರ್ಯ, ಬೆಳಿಗ್ಗೆ ಆರೋಹಣಕ್ಕೆ ಹೊರಟಾಗ ಇರಲಿಲ್ಲ. ರಂಗನಾಥನ ಮೇಲೆ ಯುದ್ಧಕ್ಕೆ ಬಂದವರಲ್ಲ ನಾವು. ಸಾಧನೆಯ ಆನಂದಕ್ಕಾಗಿ ಮುಂದುವರಿದಿದ್ದೆವು, ಅಹಂಕಾರದ ಸ್ಥಾಪನೆಗಲ್ಲ. ಕೇವಲ ಖುಷಿ ಎಂದರೆ ಅದನ್ನೇರಿ ಪಡೆಯಬಹುದಾದಷ್ಟೇ ಮಟ್ಟದಲ್ಲಿ ಕೆಳಗೆ ನಿಂತು ಬರಿದೇ ದೃಷ್ಟಿಸಿಯೂ ಪಡೆಯಬಹುದಿತ್ತು. ಪರ್ವತಾರೋಹಣದಲ್ಲಿ ಮುಗಿದ ಒಂದು ಹಂತ ಸದಾ ಮುಂದಿನ ಹಂತಕ್ಕೆ ನಮಗೆ ತಿಳಿಯದಂತೇ ತಳಹದಿ ಕಲ್ಪಿಸುತ್ತದೆ, ಭರವಸೆ ನೀಡುತ್ತದೆ, ಭೀತಿಯಳಿಸಿ ಕುತೂಹಲ ಉಳಿಸುತ್ತದೆ.”
ಆಳೆತ್ತರದ ದಟ್ಟ ಹುಲ್ಲು ಎಲ್ಲ ಮುಚ್ಚಿದ್ದರೂ ನಮಗೆ ಅನುಕೂಲ ಜಾಡಿನ ಹೊಳಹು ಕೊಡುತ್ತಿತ್ತು. (ಹುಲ್ಲೇ ಇಲ್ಲದಲ್ಲಿ ಪ್ರಪಾತ ನಿಶ್ಚಿತ) ನಿಧಾನಕ್ಕೆ ಅದರ ನಡುವೆ ಜಾಡು ಮೂಡಿಸುತ್ತಾ ಅವನ್ನೇ ಆಧಾರಕ್ಕೂ ಜಗ್ಗಿ ಹಿಡಿಯುತ್ತಾ ಓರೆಯಲ್ಲಿ ಇಳಿದೆವು. ಸಣ್ಣ ಕಲ್ಲುಗುಂಡು, ಕೊರಕಲು, ಅಪರೂಪದ ಮುಳ್ಳ ಕಂಟಿ ನಮ್ಮನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪರೀಕ್ಷಿಸಿ ಬಿಡುತ್ತಿದ್ದವು. ಹಿಂದಿನವನ ಪಾದಮೂಲದಲ್ಲಿ ಎದುರಿನವನ ತಲೆಯಿರುವಷ್ಟು ತೀವ್ರ ಇಳುಕಲು. ಆದರೆ ನೇರ ಕೊಳ್ಳದ ದೃಶ್ಯ ನಮ್ಮನ್ನು ಹೆದರಿಸದಂತೆ ಹುಲ್ಲು ಪರದೆಯ ಕೆಲಸವನ್ನೂ ಮಾಡಿತ್ತು. ‘ಮಂಗ’ ತಡವಿ, ಕೊನೆಯ ಬಾರಿಗೆ ಎಂಬಂತೆ ಉದಯರವಿ ಕಿರಣದಲ್ಲಿ ಪೂರ್ಣ ತೊಳಗುತ್ತಿದ್ದ ರಂಗನಾಥನನ್ನು ಕಣ್ಣು ತುಂಬಿಕೊಂಡೆವು. ಜೊತೆಗೆ ಆರೋಹಣಾರಂಭದ ಸ್ಥಳ ಹಾಗೂ ಬಂಡೆಯ ಮೇಲೇರಿದಂತೆ ಅನುಸರಿಸಬೇಕಾಗಬಹುದಾದ ಜಾಡನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಂಡೆವು.
ಮಂಗಬಂಡೆ ಸಮೂಹವನ್ನು ಅದರ ಬುಡದಲ್ಲೇ ಬಳಸಿ, ಪಶ್ಚಿಮದ ಪೊದರ ಕೋಟೆಗೆ ಕನ್ನ ಹಾಕಿದೆವು. ಮೇಲಿನಿಂದ ಜರಿದ, ಜಾರಿದ ಕಲ್ಲು ಮಣ್ಣು ತರಗೆಲೆ ರಾಶಿಯ ಆಖಾಡದಲ್ಲಿ ಮುಳ್ಳಮಲ್ಲರು ಭಾರೀ ವ್ಯೂಹರಚನೆ ಮಾಡಿದ್ದರು. ದೇವು ಅನುಭವದಲ್ಲಿ, “ಅಷ್ಟು ಅಭದ್ರವಾದ debris zoneಅನ್ನು ನಾನು ಬೇರೆಲ್ಲೂ ಕಂಡಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಲ್ಲೂ ಎತ್ತುವಲ್ಲೂ ಬಹು ಜಾಗ್ರತೆ ಬೇಕಿತ್ತು. ಕಾಲು ಮುಟ್ಟಿಸಿಕೊಂಡ ಪುಡಿಗಲ್ಲುಗಳು ಉರುಳಿ ಧುಮುಕುತ್ತಿದ್ದುದರಿಂದ ಮುಂದಿನವರು ಹಿಂದಿನವರ ಭಯದ ನೆರಳಿನಲ್ಲಿಯೇ ಸಾಗಬೇಕಿತ್ತು.” ನಾವು ಕತ್ತಿ ಹಿಡಿದವರಲ್ಲ. ಅತ್ತಿತ್ತ ಹಣುಕಿ, ದುರ್ಬಲ ಸಂದಿನ ಒಂದೆರಡು ಬಲ್ಲೆಗೈಗಳನ್ನು ಸರಿಸಿ, ಎತ್ತಿ, ತೀರಾ ಅನಿವಾರ್ಯವಾದಲ್ಲಿ ಬೂಟುಗಾಲಿನಲ್ಲಿ ತುಳಿದು ಮುರಿದು ಒಳ ನುಗ್ಗಿಯೇ ಬಿಟ್ಟೆವು. ಗೀರು ಗಾಯಗಳು, ಸಣ್ಣ ಪುಟ್ಟ ಬಟ್ಟೆ ಹರಿದುಕೊಳ್ಳುವುದು, ಹಾಯ್ ಹೂಯ್ ಉದ್ಗಾರಗಳು ನಡೆದೇ ಇತ್ತು. ಇನ್ನೊಬ್ಬರ ಬಟ್ಟೆಯಿಂದ ಕೊಕ್ಕೆ ಮುಳ್ಳು ಬಿಡಿಸಹೋಗಿ ತಮ್ಮ ಕೈಗೆ ಚುಚ್ಚಿಸಿಕೊಂಡವರು, ಹೆಜ್ಜೆ ಅನುಸರಣೆಯ ನಿಷ್ಠೆಯಲ್ಲಿ ಒಬ್ಬ ದಡಬಡಿಸಿದ ಜಾಗದಲ್ಲೇ ಮತ್ತೊಬ್ಬ ಕುಸಿದು ಕೂರುವುದು, ಮುಂದಿನವನು ಸರಿಸಿಬಿಟ್ಟ ಗೆಲ್ಲಿನ ಪೆಟ್ಟು ಹಿಂದಿನವ ತಿನ್ನುವುದು ಎಲ್ಲ ಮಾಮೂಲೀ ಸಂಗತಿಗಳು.

[ನಾನು ಸಾಯಲಿಲ್ಲ ನಿಶ್ಚಯ. ಆದರೆ ಬಂಡೆಯ ಪರಿಣಾಮ? ಕಥೆ ದೈನಿಕವಿರಲಿ, ಸಾಪ್ತಾಹಿಕವಿರಲಿ ಕುತೂಹಲದ ಕಟ್ಟೆ ಕಟ್ಟುವವರು ಕೃಷಿಯ ಹಾಗೆ ಅಕಾಲದಲ್ಲೂ ಒಳ್ಳೆಯ ಬೆಳೆ ತೆಗೆಯುತ್ತಾರಂತೆ. ಮೂವತ್ತು ವರ್ಷಗಳ ಹಿಂದೆ, ರಂಗನಾಥಸ್ತಂಭ ಆರೋಹಣದ ಯಶಸ್ಸು ತಮ್ಮನಿಗೆ ಒಲಿದಾಗ, ‘ಅದೃಷ್ಟ’ ನನ್ನತ್ತ ದೃಷ್ಟಿಯೂ ಹರಿಸಿರಲಿಲ್ಲ. ಎಷ್ಟೋ ವರ್ಷ ಕಳೆದು, ಸ್ವಯಾರ್ಜಿತ ಪ್ರಥಮ ಪ್ರಯತ್ನ ನಡೆಸಿದೆ. ಅರವಿಂದ ಬಾಲಕೃಷ್ಣರಿಗೊಲಿದ ‘ಅದೃಷ್ಟ’ ನನಗಷ್ಟೇ ಕೈಕೊಟ್ಟಿತ್ತು. ಮೂರನೇ ಪ್ರಯತ್ನವಾದರೋ ಸಂಕಲ್ಪದಲ್ಲೇ ಆಸೆಕಂಗಳ ನೋಟಕ್ಕೇ ಮೀಸಲಾಗಿತ್ತು. ಇದು ಹಾಗಲ್ಲ ಎಂದೇ ಹೊರಟಿದ್ದರೂ ನಾಲ್ಕನೆಯದು ಐದನೆಯದಕ್ಕೆ ಮೆಟ್ಟುಗಲ್ಲೇ? ಅದೃಷ್ಟದಾಟದ ಹೊಸ್ತಿಲಲ್ಲಿ ಈ ಬಾರಿ ನಾನೇ ಎಡವಿದೆನೇ? ತಿಳಿಯಲು ಮುಂದಿನವಾರದವರೆಗೆ ನನ್ನ ದಾರಿ ಕಾಯ್ತೀರಲ್ಲಾ? ಬ್ಲಾಗಿನ ಪ್ರಧಾನ ಅರ್ಚಕ ನಾನೇ ಇರಬಹುದು. ಆದರೆ ಮರೆಯಬೇಡಿ, ನಿಮ್ಮ ಕುಶಿ, ಅಸಹನೆಗಳ ಮಂತ್ರ, ಸಮಿತ್ತುಗಳಿಂದಲೇ ಈ ಯಜ್ಞ ಸಂಪನ್ನವಾಗುತ್ತದೆ. ಮುಕ್ತವಾಗಿ ಮನಸ್ಸಿಗೆ ಕಂಡದ್ದು ಕೆಳಗೆ ತುಂಬಿ ಹೇಳ್ತೀರಾ “ಸ್ವಾಹಾ”?]
(ಮುಂದುವರಿಯುತ್ತದೆ)
ಧಾರಾವಾಹಿಯನ್ನು ಕುತೂಹಲ ಘಟ್ಟದಲ್ಲಿ ನಿಲ್ಲಿಸಿ
ReplyDeleteಗ್ರಾಹಕರನ್ನು ತುದಿಗಾಲಲ್ಲಿ ಕಾಯಿಸುವ
ದೂರದರ್ಶನ ಧಾರಾವಾಹಿಗಳ ಕಥಾವಿಸ್ತರಣೆ ತಂತ್ರ
ನಿಮಗೂ ಇಷ್ಟವೆ?!
ನಿಮ್ಮ ನಕ್ಷೆಯಲ್ಲಿ ಮಂಗಳೂರಿದೆ.
ರಂಗನಾಥ ಸ್ತಂಭದ ಎಡೆ ಎಲ್ಲಿ?
ಈ ಕಂತಿನ ವಿಷಯ ಮರೆಯುವ ಮೊದಲೇ ಮುಂದಿನದ್ದು ಬರಲಿ.
ReplyDeleteGood one.----joshy.
ReplyDeleteಸ್ವಾಹಾ~ ! ಅಲ್ಲಿನ ಚಳಿಯ ಊಹೆಗೇ ನಡುಗುತ್ತ, ಇಲ್ಲಿನ ಸುರಿಯುತ್ತಿರುವ ಮಳೆಯ ಚಳಿ ನಿವಾರಣೆಗಾಗಿ
ReplyDeleteಮಡದಿ ಸುಟ್ಟು ಎಣ್ಣೆ ಹಚ್ಚಿಕೊಟ್ಟ ಹಲಸಿನ ಹಪ್ಪಳ ಆಗೇ ಬಿಟ್ಟಿತು ಸ್ವಾಹಾ ~. ಅ೦ದಹಾಗೆ ಆನ೦ದಭಾವನ
ಕಾಲೇಜ್ ಪತ್ರಿಕೆಗೆ ಅವನು ಬರೆದಿದ್ದ conquering of ranganatha pillar ಓದದಿದ್ದುದು
ನೆನಪಾಯಿತು, ನಿನ್ನ ಕಡತದಲ್ಲಿರಬೇಕಲ್ಲವೇ ? ಈ ಯಾತ್ರೆ ಯಾವ ಇಸವಿಯದು ? ಈ ಧಾರಾವಾಹಿ
ದೈನಿಕವೋ ಅಲ್ಲ ಸಾಪ್ತಾಹಿಕವೋ ? ಈ ಕ೦ತನ್ನು ಓದಲು ಮಡದಿ ಸಾಲಿನಲ್ಲಿ ಕಾದಿದ್ದಾಳೆ. ಓದಿಸಿದ್ದಕ್ಕಾಗಿ ವ೦ದನೆಗಳು.
ಬೇಗ ಬೇಗ ಬರಲಿ,ನಿಮ್ಮ ಕಥಾನಕ . ರ೦ಗನಾಥನ ದಯವೊ೦ದಿರಲಿ...
ReplyDeleteInteresting and absorbing. Continue your story.
ReplyDeletenamaste,
ReplyDeleteranganatha sthambha vijaya, udayavaani saptahikada kantugalannu odi, omme A.B.C. ge bandu "ranganaatha sthambha vijaya" pustaka ideya? yaavaaga barutte ' anta keliddu nenapaagtide.
bahala varshagala nantara ondu romaanchanakaari vshayavannu naviraada haasydondige bareva nimma shiliya savi anubhavisuttiddene.
digvijaya mundakke saagali,, odugaraagi nimmondigiddene, (pratyaksha anubhavisuva yoga ideyo illavo..? )
vande.
shripathi acharya.
ನಿಮ್ಮ ಕಣ್ಣು ನಿಜಕ್ಕೂ ಒಂದು ಕೆಮರಾ, ಮನಸ್ಸು ಒಳ್ಳೆಯ ಪ್ರಿಂಟ್, ಬರವಣಿಗೆ ದೃಶ್ಯಕಾವ್ಯ. ಈ ಸಾಹಿತ್ಯ ಪ್ರಕಾರ ಬೆಳೆಯುತ್ತಿರಲಿ, ವಂದನೆಗಳು,
ReplyDeleteಚಂದ್ರಶೇಖರ ದಾಮ್ಲೆ
nodalu , odalu, sad_a kushi
ReplyDeleteಪ್ರಾಕೃತಿಕ ಸೊಬಗಿನ ಸಣ್ಣಪ್ಮಟ್ಟ ವಿವರಗಳನ್ರ್ನ ನೀವು ಗ್ರಹಿಸುವ ಪರಿ ನಿಜಕ್ಕೂ ಚೆನ್ನಾಗಿದೆ. ಇನ್ನಷ್ಟು ಓದೋಣ ಅನ್ನಿಸುತ್ತದೆ.
ReplyDeleteooh!adbutha chitranadondige adbutha sundara chitragalu.Shrre Panditharadyara commentsnnu edarondige serisikolli.Dhanyavadagalu ondu sundara lokakke kondu hoodudakke.
ReplyDeleteDear Ashoka Vardhana,
ReplyDeleteThough I enjoy reading them at my own leisure time, I have not been responding to you.
Keep sending. They are informative and interesting. You have your own style in presentation. I like it.
Thanks,
Mittur Ishwara Bhat,
nimmma shaili tusu badalaadanthe kandubantu. aapyaayamaanavuu.
ReplyDeletechaka, chaka antha bareetheeri
ReplyDeletearchakare. Bhayankara Meeseya hinde
isthondu navanetha. Wah
malagiro ranganinda modalmadi
yelrannu yebbisi koorsiddiri.
pl keep on writing.
Bhoo rameya naguvannu kannalli thumbisikollutha adhara prathibimbavannu aksharEkarisuva nimma samarthyakke sharanu.
ReplyDelete, "ಅಹಂಕಾರದ ಸ್ಥಾಪನೆಗಲ್ಲ." ಬರಿದೇ ಪರ್ವತಾರೋಹಣದಲ್ಲಿ ಮುಗಿದ ಒಂದು ಹಂತ ಸದಾ ಮುಂದಿನ ಹಂತಕ್ಕೆ ನಮಗೆ ತಿಳಿಯದಂತೇ ತಳಹದಿ ಕಲ್ಪಿಸುತ್ತದೆ, ಭರವಸೆ ನೀಡುತ್ತದೆ, ಭೀತಿಯಳಿಸಿ ಕುತೂಹಲ ಉಳಿಸುತ್ತದೆ.” emba mathannu oppikondu appikonde
lekhana kutuhala huttiside.mundina kantu yavaga ?
ReplyDelete