( ಜಮ್ಮು ಕಾಶ್ಮೀರ
ಪ್ರವಾಸ ಕಥನ
೯ )
ವೈಷ್ಣೋದೇವಿ ದರ್ಶನದೊಡನೆ
ನಮ್ಮ ಪ್ಯಾಕೇಜಿನ ಮುಖ್ಯ ವೀಕ್ಷಣಾಂಶಗಳು ಮುಗಿದಿದ್ದುವು . ಉಳಿದದ್ದು ಮರುಪಯಣ . ಆದರೆ ನಮ್ಮ ತಂಡ ಒಗ್ಗೂಡುವಲ್ಲಿ ಇದ್ದಂತೇ ಚದುರುವಲ್ಲೂ ಭಿನ್ನ ಇಷ್ಟಾನಿಷ್ಟಗಳಿದ್ದುವು . ಅದಕ್ಕನುಗುಣವಾಗಿ ಗಿರೀಶ್ ನಮ್ಮ ಒಳಗುಂಪುಗಳಿಗೆ ಅವರವರ ಊರಿಗೆ ಮರುಪಯಣದ ಟಿಕೆಟ್ಟು ಸಹಿತ ಮುಂದಿನ ಕಲಾಪಗಳನ್ನು ವಿಷದಪಡಿಸಿದರು . ಆ ಪ್ರಕಾರ ( ಇನ್ನೊಂದೇ
ಕಾರಿನಲ್ಲಿ ನಮಗೆ ಜೊತೆಗೊಟ್ಟಿದ್ದ ) ಓಬಳೇಶ್ ಕುಟುಂಬ ಜಮ್ಮುವಿಂದಲೇ ವಿಮಾನದಲ್ಲಿ ಚನ್ನೈಗೆ ಹಾರುವುದಿತ್ತು . ಕತ್ರದ ಹೊಸಹಗಲಿನಲ್ಲಿ ಗಿರೀಶ್ ಕಾರಿನಲ್ಲಿ ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು , ಸುವರ್ಣ , ರೇಖಾ ಮತ್ತು ವಿದ್ಯಾರಣ್ಯರನ್ನು ಜಮ್ಮುವಿಗೆ ಕರೆದೊಯ್ದರು . ಎರಡನೇ ಕಂತಿಗೆ ಉಳಿದ ಎಂಟೂ ಜನಕ್ಕೆ ಮಧ್ಯಾಹ್ನದ ಊಟದವರೆಗೆ ಅದೇ ಹೋಟೆಲಿನಲ್ಲಿ ವಿಶ್ರಾಂತಿ .
ಅರ್ಧ ಹಗಲು
ಸುಮ್ಮನೆ ಕೂರುವುದು ನಮ್ಮಿಂದಾಗದು . ಹಾಗೆಂದು ಪ್ರವಾಸೀ ಕೇಂದ್ರದ ಅವಗುಣಗಳನ್ನು ರೂಢಿಸಿಕೊಂಡ ಕತ್ರ ಸುತ್ತುವ ಮನಸ್ಸೂ ನಮಗೆ ಬರಲಿಲ್ಲ . ಆಗ ಒದಗಿದ್ದು ಹೋಟೆಲಿನಿಂದ ಎರಡೇ ಮಿನಿಟು ದೂರದಲ್ಲಿದ್ದ ಹೊಸಾ ಮಾಲ್ - ಮಲ್ಟಿಪ್ಲೆಕ್ಸ್ . ಅಲ್ಲಿ ವಾರದ ಹಿಂದಷ್ಟೇ ಬಿಡುಗಡೆಗೊಂಡ ಹಿಂದಿ ಚಿತ್ರ ` ಪೀಕು ’ – ( ಅಮಿತಾಭ್ , ದೀಪಿಕಾ , ಇರ್ಫಾನ್ ) ನಮ್ಮನ್ನು ಆಕರ್ಷಿಸಿತ್ತು . ಗಂಟೆ ಹತ್ತಾದರೂ ಧಿಯೇಟರೇನು ಆ ವಲಯದ ಪೇಟೆಯೇ
ಖಾಲಿ ಹೊಡೆದಿತ್ತು . ನಾವು ನಿರ್ಯೋಚನೆಯಿಂದ ಹತ್ತೂಕಾಲರ ಪ್ರದರ್ಶನಕ್ಕೆ ಟಿಕೆಟ್ ಖರೀದಿಸಿದೆವು . ಟಿಕೆಟ್ಟಿನಾಕೆ ಸಂಕೋಚದಲ್ಲೇ ಹೇಳಿದಳು “ ಇದರಿಂದ ಪೀಕುಗೆ ಮೂರು ಜನ ಪ್ರೇಕ್ಷಕರು ಬಂದಂತಾಯ್ತು ! ಕನಿಷ್ಠ ಆರು ಜನವಾಗದಿದ್ದರೆ ಪ್ರದರ್ಶನ ರದ್ದಾಗುತ್ತದೆ . ಆಗ ಇದೇ ಟಿಕೆಟ್ಟನ್ನು ನೀವು ಮತ್ತೈದೇ ಮಿನಿಟಿನಲ್ಲಿ ತೊಡಗುವ , ಇನ್ನೊಂದೇ ಹೊಸ ಸಿನಿಮಾ – ಗಬ್ಬರಿಗೆ ( ಅಕ್ಷಯ ಕುಮಾರ್ , ಪ್ರಿಯಾಂಕಾ ) ಬಳಸಿ ಸಹಕರಿಸಬೇಕು .” ಪೀಕುಗೆ ನಮಗೂ ಮೊದಲೇ ಮುಂಬೈ ತರುಣನೊಬ್ಬ ಟಿಕೆಟ್ ತೆಗೆದಿದ್ದ . ಆತ ನಮ್ಮ ಸೇರ್ಪಡೆಯಿಂದ ತುಸು ಉತ್ತೇಜಿತನಾಗಿ ವಠಾರದಲ್ಲಿದ್ದ ಇತರ ನಾಲ್ಕೈದೇ ಮಂದಿಯಲ್ಲಿ “ ಪೀಕು ದೇಖೋ ” ಪುಸಲಾವಣೆಗಿಳಿದ . ಆದರೆ ಅವರ ಹೇಳಿಕೆ ನಮ್ಮ ಸಾಮಾನ್ಯ ಚಿತ್ರವೀಕ್ಷಕರ ಮನೋಸ್ಥಿತಿಗೆ ಹಿಡಿದ ಕನ್ನಡಿ : “ ಅಯ್ಯೋ ಆ ಮುದ್ಕ ಅಮಿತಾಬ್ ...!”
ಅನಿವಾರ್ಯವಾಗಿ ನಾವು ಮೂವರು ಮತಾಂತರಗೊಂಡೆವು . ಹಾಗೆಂದು ಅಲ್ಲಿ ಗಬ್ಬರ್ ಯಶಸ್ವಿ ಎಂದು ಭಾವಿಸಬೇಡಿ . ಒಟ್ಟು ವೀಕ್ಷಕ ಸಂಖ್ಯೆ ಹದಿನೈದನ್ನು ಮೀರಲಿಲ್ಲ !
VIDEO
ಚಿತ್ರದಲ್ಲಿ , ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕನೊಬ್ಬ ಜಗಭ್ರಷ್ಟನಿಂದ ಸತ್ತೂ ಬದುಕುತ್ತಾನೆ . ಮತ್ತೆ ಆದರ್ಶ ಸಮಾಜ ರಚನೆಯ ಪಣ ತೊಟ್ಟು , ಆಪ್ತ ಶಿಷ್ಯವೃಂದದ ಕೂಟ ಕಟ್ಟುತ್ತಾನೆ . ` ಗಬ್ಬರ್ ’ ಎಂಬ ವೀರನಾಮದಲ್ಲಿ ಅತಿಮಾನುಷ ಸಾಹಸಗಳೊಡನೆ ನಾಯಕತ್ವ ಕೊಡುತ್ತಾನೆ . ಮಹಾಭ್ರಷ್ಟನನ್ನು ಮುಗಿಸುವುದರಲ್ಲಿ ಕಥೆ ಶಿಖರ ಮುಟ್ಟುತ್ತದೆ . ಆ ಉದ್ದಕ್ಕೂ ಹರಿದ
ಸಂದೇಶಗಳ ಪ್ರವಾಹಕ್ಕೆ ತಾರ್ಕಿಕ ಕೊನೆ ತೋರುವಂತೆ , “ ಕಾನೂನಿಗೆ ಯಾರೂ ಅತೀತರಲ್ಲ ” ಎನ್ನುವುದನ್ನೂ ಮೆರೆಯಿಸಿ , ನಾಯಕ ಗಲ್ಲುಗಂಬ ಏರುವುದರೊಂದಿಗೆ ನಮಗೆ ಮುಕ್ತಿ ಸಿಕ್ಕಿತು . [ ಶಿಳ್ಳೆ ಬೊಬ್ಬೆಗಳ ಕೊರತೆ ಕಂಡು ( ಅಕ್ಷಯ್ ಕುಮಾರ್ ) “ ಫ್ಯಾನುಗಳಿರಲಿಲ್ಲ ” ನಾನಂದೆ . ಒಂದೂವರೆ ಗಂಟೆ ತಂಪಾಗಿ ಕಳೆದ ಸಂತೋಷಕ್ಕೆ ಜತೆಗಾತಿ “ ಏಸಿ ಇತ್ತಲ್ಲಾ ” ಅನ್ನಬೇಕೆ !]
ಹೋಟೆಲಿನಲ್ಲಿ ಉಳಿದವರ ಜತೆ ಊಟ ಮುಗಿಸಿದೆವು . ಗಿರೀಶ್ ನಿಶ್ಚೈಸಿದ್ದ ಕಾರು ನಮ್ಮನ್ನೇ ಕಾದಿತ್ತು . ಅದನ್ನೇರಿ ಹೋಟೆಲಿಗೂ ಕತ್ರಕ್ಕೂ ವಿದಾಯ ಹೇಳಿದೆವು . ಜಮ್ಮು ದಾರಿಯಲ್ಲಿ ನಗ್ರೋಟ
ಎಂಬಲ್ಲಿ ಎರಡು ದೇವಸ್ಥಾನಗಳ ಸಂದರ್ಶನವಾಯ್ತು .
ಇದು ದೊಡ್ಡ ದೇವರ ( ವೈಷ್ಣೋದೇವಿ ) ಭಕ್ತರಲ್ಲಿ ಕಿರಿಪಾಲು ಕೇಳುವಂತೆ ` ಪ್ರಥಮ ವೈಷ್ಣೋದೇವಿ ’ ಎಂದೇ ಪ್ರಸಿದ್ಧವಂತೆ . ( ಮಂಜುನಾಥನ ಭಕ್ತರಲ್ಲಿ ಚಾರ್ಮಾಡಿಯ ಅಣ್ಣಪ್ಪ ಪಾಲು ಕೇಳಿದ ಹಾಗೆ ?) ಅಲ್ಲಿನ ವಿಸ್ತಾರ ಬಸ್ ನಿಲ್ದಾಣದಲ್ಲಿ ಎರಡು ಪ್ರವಾಸೀ ಬಸ್ಸುಗಳು ಬಂದು ಠಿಕಾಣಿ ಹೂಡಿದ್ದು ಪ್ರೇಕ್ಷಣೀಯವಾಗಿತ್ತು .
ಗ್ಯಾಸ್ ಸ್ಟವ್ , ತರಕಾರಿ ಕೊಚ್ಚು , ಅಡುಗೆ - ಪಡುಗೆ ಬಸ್ಸಿನ ಬುಡದಲ್ಲೇ ನಡೆದಿತ್ತು . ಯಾತ್ರಿಗಳು ಮಂದಿರದ ಹಜಾರಗಳಲ್ಲಿ ಮನಸ್ಸಿನ ಶಾಂತಿಯನ್ನೂ ದೇಹದ ವಿಶ್ರಾಂತಿಯನ್ನೂ ತಳುಕು ಹಾಕಿ ನಿದ್ರಿಸಿದ್ದರು ! ನಾವು ಸಾಕಷ್ಟು ಚುರುಕಿನಲ್ಲೇ ದೇವಾಲಯಕ್ಕೊಂದು ಸುತ್ತು ಹಾಕಿ ಪ್ರಯಾಣ ಮುಂದುವರಿಸಿದೆವು .
ಜಮ್ಮು ಹೊರವಲಯದಲ್ಲಿ
ಇನ್ನೊಂದು ದೇವಳ ದರ್ಶನ – ರಘುನಾಥ ಮಂದಿರ . ಇದು ಪಕ್ಕಾ ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳ ಮತ್ತು ಸದಾ ಜನವಾಹನ ಸಮ್ಮರ್ದವುಳ್ಳ ವಠಾರದ ನಡುವೆ ಇದೆ . ಆದರೂ ಬಹಳ ದೊಡ್ಡ ವಠಾರವುಳ್ಳ ದೇವಳ .
ಇಲ್ಲಿ ಹಲವು ಆರಾಧನಾಮೂರ್ತಿಗಳ ನಡುವೆ ರಘುನಾಥ ಅಧಿ ದೇವರು . ಏಳು ಗೋಪುರಗಳ ಮಂದಿರ , ಸುಮಾರು ನೂರೈವತ್ತು ವರ್ಷಗಳ ಪ್ರಾಚೀನತೆಯುಳ್ಳ ಬಹುಜನ ವಿಶ್ವಾಸದ ಕೇಂದ್ರ , ಎಂದೆಲ್ಲ ಅಂತರ್ಜಾಲ ವಿಶ್ವಕೋಶ ( ವಿಕಿಪೀಡಿಯ ) ಇದರ ಕುರಿತು ಉದ್ದುದ್ದ ಹಾಡುತ್ತದೆ . ಮುಂದುವರಿದು , ಸಹಜವಾಗಿ ೨೦೦೨ರಷ್ಟು ಹಿಂದೆಯೇ ಎರಡೆರಡು ಬಾರಿ ಇದರ ಮೇಲೆ ಉಗ್ರರ ಕೈ ಬಾಂಬು ದಾಳಿ ನಡೆದು ಹಲವು ಜೀವಹಾನಿಯಾದದ್ದನ್ನೂ ದಾಖಲಿಸುತ್ತದೆ . ಹಾಗಾಗಿ ಈಗ ಭಾರೀ ಸೈನಿಕ ಬಂದೋಬಸ್ತು . ಅಂದರೆ ವೈಷ್ಣೋದೇವಿ ಮಂದಿರದಂತೇ ನಮ್ಮನ್ನು ಜಾಲಾಡಿ , ವಾಚು , ಪೆನ್ನಿನವರೆಗೆ ಎಲ್ಲವನ್ನೂ ಹೊರಗೇ
ಉಳಿಸಿ ಒಳಗೆ ಬಿಟ್ಟರು . ಒಂದು ಸುತ್ತು ಹಾಕಿದೆವು . ಅದಕ್ಕಿರುವ ಜನಪ್ರಿಯತೆಗೆ ( ಆದಾಯಕ್ಕೆ ) ನಿರ್ವಹಣೆ ತುಂಬ ಕೊಳಕಾಗಿದೆ . ಲೌಕಿಕ ಶುದ್ಧವನ್ನೇ ಕಾಣದ ತಾಣ ಏನು ಪಾರಮಾರ್ಥಿಕಶುದ್ಧಿಯನ್ನು ಕೊಟ್ಟೀತೋ ! “ ಸ್ವರ್ಗವೇ ಭೂಮಿಯೊಳಗಿರದಿರೆ ನೀನು , ಬೇರೆಲ್ಲೂ ಇಲ್ಲಾ ” ಎಂಬ ಕುವೆಂಪು ಗೀತೆ ಗುನುಗಿಕೊಂಡು ಕಾರಿಗೆ ಮರಳಿದೆವು . ಕಾರಿನವನು ನಮ್ಮನ್ನು ರೈಲ್ವೆ ನಿಲ್ದಾಣಕ್ಕೊಯ್ದು ಬಿಟ್ಟು ಹೋದ .
ಜಮ್ಮು ರೈಲ್ವೇ
ನಿಲ್ದಾಣಕ್ಕೆ ನೆರೆ ಬಂದಿತ್ತು . ಎಲ್ಲಾ ಆರಾಮ್ ಘರ್ ಗಳಿಗೂ ಪ್ಲ್ಯಾಟ್ ಫಾರಮ್ಮಿನ ಆಸನ ಸಾಲುಗಳಿಗೂ ಜಗುಲಿಗೂ ಜನಮಹಾಪೂರ ಬಂದು ತಳಮಳಿಸಿತ್ತು . ಇನ್ನೂ ಸಂಜೆ ಐದು ಗಂಟೆ , ನಮಗೆ ರೈಲು ರಾತ್ರಿ ಒಂಬತ್ತರ ಮೇಲೆ ! ಅಂದರೆ ಸುಮಾರು ನಾಲ್ಕರಿಂದ ಐದು ಗಂಟೆಯವರೆಗೆ ( ಸಮಯಕ್ಕೆ ಸರಿಯಾಗಿ ಯಾವ ರೈಲು ಓಡುತ್ತದೆ ಹೇಳಿ !) ನಾವು ಅಕ್ಷರಶಃ ಕೇರಾಫ್ ರೈಲ್ವೇ ಫುಟ್ಪಾತ್ ! ಇದ್ದದ್ದರಲ್ಲಿ ಚೊಕ್ಕವಿದ್ದ , ಫ್ಯಾನ್ ತಳದ ನೆಲ ಹುಡುಕಿ , ಗಂಟು ಗದಡಿ ಎದುರಿಟ್ಟುಕೊಂಡು , ಅದರ ಮೇಲೆ ಗಿರೀಶ್ ಕಟ್ಟಿಸಿಕೊಟ್ಟಿದ್ದ ಬುತ್ತಿಯೂಟ ಇಟ್ಟುಕೊಂಡು ಕುಳಿತೆವು .
ಜನಸಾಗರ , ವರ್ತನಾ ವೈಖರಿಗಳು , “ ಪ್ರಯಾಣಿಕರ ಗಮನಕ್ಕೆ ” ಘೋಷಣೆಗಳು , ಕಡಲನ್ನು ಚಮಚದಲ್ಲಿ ಮೊಗೆದಂತೆ ಆಗೀಗ ಬಂದು ಹೋಗುತ್ತಿದ್ದ ರೈಲು ಗಾಡಿಗಳು , ಶ್ವಾನ ಸಹಿತ ವಿಶೇಷ ಪೋಲಿಸ್ ತನಿಖೆಗಳು ಮಿನಿಟು ಮಿನಿಟಾಗಿ ಎಳೆದು ನಮ್ಮ ಸಮಯವನ್ನು ತರಲು ಸಹಕರಿಸುತ್ತಿತ್ತು . ಮೂರು ಅಡ್ಡೆ ಸುತ್ತಿ , ಹೊರಾವರಣದ ಕಟ್ಟಡಕ್ಕೆ ಹೋಗಿ , ಸ್ಥಳನಿರ್ದೇಶನ ಕಾಣಿಸದ ನಮ್ಮಿಬ್ಬರ ಟಿಕೆಟ್ಟನ್ನು ಸರಿಪಡಿಸಿಕೊಂಡು ಬಂದೆ . ಉಳಿದಂತೆ ` ವಿಚಾರಣಾ ಅಡ್ಡೆ ’ ಯ ತಲೆ ತಿನ್ನುವುದು ,
ಮೂತ್ರದೊಡ್ಡಿ ಸಂದರ್ಶನ , ಅಕ್ಬಾರ್ ದುಕಾನ್ ಹುಡುಕಾಟ , ಚಿಲ್ಲರೆ ಖರೀದಿಗಳು , ಚಾಯ್ಪಾನದ ಭ್ರಮೆ ಎಲ್ಲಾ ಮುಗಿದ ಮೇಲೆ “ ಬಾಲೇ ಟೋಟದ ಪಕ್ಕದ ಕಾಡೊಲು ...” ಇದ್ದ ಪ್ರಜೆಗಳಂತೆ , ರಾತ್ರಿ ಊಟ ಯಾವ ವೇಳೆಗೆ ಪ್ರಶಸ್ತ ಎಂದು ಗಂಭೀರ ಚರ್ಚೆ ನಡೆಸಿದೆವು .
ಗಣೇಶ ಭಟ್ಟ್
ದಂಪತಿ ಹವಾನಿಯಂತ್ರಿತ ಭೋಗಿ ಬಯಸಿದ್ದರಿಂದ ತುಸು ಮೊದಲಿನ ಪ್ರತ್ಯೇಕ ಗಾಡಿ . ಅದು ಲೆಕ್ಕಕ್ಕೆ ಏಳೂವರೆಯಾದರೂ ಎಂಟೂಹತ್ತಕ್ಕೆ ಅವರನ್ನೊಯ್ಯಿತು . ನಮ್ಮ ಮತ್ತು ಧನಂಜಯರ ಕುಟುಂಬದ ಗಾಡಿ ಒಂಬತ್ತರದ್ದು ಜಮ್ಮು ಬಿಡುವಾಗ ಹತ್ತಾಗಿತ್ತು . ಗಾಡಿಯೊಳಗೆ ನಮ್ಮೆರಡು ಕುಟುಂಬಕ್ಕೆ ಸಿಕ್ಕ ಸ್ಥಾನಗಳು ಭಿನ್ನ ಮೂಲೆಗಳಲ್ಲಿದ್ದುವು . ಸಹಜವಾಗಿ ರಾತ್ರಿಯುದ್ದಕ್ಕೆ ಬಂದುಹೋಗುವವರ ಗೊಂದಲ , ನಮ್ಮ ಸೊತ್ತುಗಳ ಕುರಿತ ಆತಂಕ - ನಮ್ಮ ನಿದ್ರೆ ಕನಸಾಯ್ತು . ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ದಿಲ್ಲಿ ತಲಪಿದೆವು . ಅಲ್ಲಿ ಒಟ್ಟಾಗಿ ಟ್ಯಾಕ್ಸೀ ಮಾಡಿ ಮತ್ತೆ ಕರೋಲ್ಭಾಗಿನ ಹೋಟೆಲ್ ಸನ್ಶೈನ್ ಸೇರಿಕೊಂಡೆವು .
ಆ ದಿನ ಎಲ್ಲರಿಗೂ
ವಿಶ್ರಾಂತಿ ದಿನವೆಂದೇ ಗಿರೀಶ್ ಘೋಷಿಸಿದ್ದರು . ಅದು ಕೊಳ್ಳುಬಾಕರಿಗೆ ದಿಲ್ಲಿ ಮಾರುಕಟ್ಟೆ ಕೊಳ್ಳೆ ಹೊಡೆಯುವುದಕ್ಕೆ ಇರಬಹುದು . ಅಥವಾ ಕಾಶ್ಮೀರದ ಭೌಗೋಳಿಕ ಅಸ್ಥಿರತೆಯಲ್ಲೋ ರಾಜಕೀಯ ತಳಮಳದಲ್ಲೋ ಸಮಯಕ್ಕೆ ಬರಲಾಗದಿದ್ದರೆ ಎಂದು ಟ್ರಾವೆಲ್ಸಿನವರು ಹೆಚ್ಚುವರಿಯಾಗಿ ಇಟ್ಟುಕೊಂಡದ್ದೂ ಇರಬಹುದು .
ಮಾರಣೇ ದಿನ ಅಲ್ಲಿಂದ ` ಮರಳಿ ಕರ್ನಾಟಕ ’ ಸಂಚಾರ ವ್ಯವಸ್ಥೆ ( ನಾವೇ ಬಯಸಿದಂತೆ ) ನಮ್ಮ ತಂಡವನ್ನು ಇನ್ನಷ್ಟು ಚದುರಿಸಿತು . ಧನಂಜಯ ಕುಟುಂಬಕ್ಕೆ ವಿಮಾನದ ಟಿಕೆಟ್ . ಭಟ್ ಕುಟುಂಬಕ್ಕೆ ಬೆಳಿಗ್ಗೆ ಬೇಗನೆ ಹೊರಡುವ ಬೆಂಗಳೂರು ರೈಲು . ನಮಗೆ ಸುಮಾರು ಹತ್ತು ಗಂಟೆಗೆ ಹೊರಡುವ ಮಂಗಳೂರು ರೈಲು . ಈ ಗೊಂದಲದಲ್ಲಿ ವಿಕ್ರಂ
ಟ್ರಾವೆಲ್ಸಿನೊಡನೆ ಹೆಚ್ಚು ಒಡನಾಡಿದವರೇ
ಆದ ಸುವರ್ಣ ಮತ್ತು ರೇಖಾ ಜೋಡಿ ಮಾತ್ರ ಅತಂತ್ರರಾದದ್ದು ದೊಡ್ಡ ವಿಪರ್ಯಾಸ ; ಆ ಮೂವರಿಗೆ ಟಿಕೆಟ್ಟೇ
ಆಗಿರಲಿಲ್ಲ . ಅದನ್ನು ಸರಿಪಡಿಸಲು ಗಿರೀಶ್ ಸರ್ಕಸ್ ನಡೆಸಿದ್ದರು . ( ಎರಡು ದಿನಗಳ ದಿಲ್ಲಿ ವಿಶ್ರಾಂತಿಯ ಕೊನೆಯಲ್ಲಿ , ಸ್ವತಃ ಗಿರೀಶ್ ಜೊತೆಗೊಟ್ಟು , ಬಳಸು ದಾರಿಯಲ್ಲಿ ಮೂವರನ್ನೂ ಊರು ಮುಟ್ಟಿಸಿದರೆಂದು ಅನಂತರ ತಿಳಿಯಿತು )
ಭಾರತೀಯ ದೇಗುಲಗಳ
ಪೈಕಿ ಆರಾಧನೆಗೂ ಭಕ್ತರಿಗೂ ಆಧುನಿಕ ಶಿಸ್ತು ಮತ್ತು ಶುಚಿಯನ್ನು ಅಳವಡಿಸಿದವುಗಳಲ್ಲಿ ರಾಮಕೃಷ್ಣಾಶ್ರಮ ( ಕ್ರಿ . ಶ . ೧೮೯೭ . ಇದು ಬಹುಶಃ ಪ್ರಥಮವೂ ಇರಬೇಕು ) ಅಗ್ರೇಸರ . ಅನಂತರದ ದಿನಗಳಲ್ಲಿ ಅದನ್ನು ಅನುಸರಿಸಿದಂತೆ ಹಲವು ಭಕ್ತಿ ಕೇಂದ್ರಗಳೇನೋ ಬಂದಿವೆ . ಆದರೆ ರಾಮಕೃಷ್ಣಾಶ್ರಮಗಳು ರೂಢಿಸಿದ ಸರಳತೆ ಮತ್ತು ಮಂದಿರ ಕೇಂದ್ರಿತವಾದ ಆರ್ಥಿಕ ಉತ್ಪನ್ನವನ್ನು ವಿವಿಧ ಸಾಮಾಜಿಕ ಸೇವೆಗೇ ಬದ್ಧವಾಗಿಸುವ ( ಅನಾಥಾಶ್ರಮ , ವಿದ್ಯಾ ಸಂಸ್ಥೆ , ವಿದ್ಯಾರ್ಥಿ ನಿಲಯ , ಆದಿವಾಸಿಗಳ ಪುನರುತ್ಥಾನ ಇತ್ಯಾದಿ ) ಕ್ರಮವನ್ನು ಇನ್ನೊಂದು ಸಂಸ್ಥೆಯಲ್ಲಿ ನಾನು ಕಾಣಲಿಲ್ಲ . ಅಂದರೆ, ಉಳಿದವು ದೇಗುಲದ ಮತ್ತು ತತ್ಸಂಬಂಧೀ ಆಚರಣೆಗಳ ವೈಭವೀಕರಣ ನಡೆಸುತ್ತವೆ . ಇವರ ವಿನಿಯೋಗಗಳೇನಿದ್ದರೂ ತಮ್ಮದೇ ಭಕ್ತಿ ಪೂರಕವಾದ ಚಟುವಟಿಕೆಗೆ , ಸಂಸ್ಥೆಗೆ ಲಾಭ ತರುವ ಬಾಬುಗಳಿಗಷ್ಟೇ ಇರುತ್ತವೆ . ಎಷ್ಟೋ ಸಂದರ್ಭಗಳಲ್ಲಿ ಇಂಥಾ ದೇವಳಗಳಲ್ಲಿ ಮೂಲ ಹೂಡಿಕೆ ಪಕ್ಕಾ ವಾಣಿಜ್ಯೋದ್ಯಮಗಳದ್ದೇ ಇರುವುದನ್ನು ನಾವು ಕಾಣುತ್ತೇವೆ . ಇಂಥ ಭಕ್ತ್ಯೋದ್ಯಮದಲ್ಲಿ ದಿಲ್ಲಿಯ ಅಕ್ಷರಧಾಮ ಎಂಬ ಸ್ವಾಮಿ ನಾರಾಯಣರ ಆರಾಧನಾ ಕೇಂದ್ರ ತನ್ನ ವಿಸ್ತಾರ ವೈಭವಗಳಿಂದಲೇ ಬಹುಪ್ರಚುರಿತವಾಗಿದೆ . ಇದರ ಗುಜರಾಥ್ ಶಾಖೆಯ ಮೇಲೆ ೨೦೦೨ರಲ್ಲಿ ಭಯೋತ್ಪಾದಕರ ದುರಾಕ್ರಮಣವಾಗಿತ್ತು . ಅದು ಉಂಟು ಮಾಡಿದ ಅನುಕಂಪದ ಅಲೆಯೂ ಈ ಮಂದಿರಗಳಿಗೆ ಕೊಟ್ಟ
ಪ್ರಚಾರ ಸಣ್ಣದಲ್ಲ . ಹಾಗಾಗಿ ದಿಲ್ಲಿ - ವಿಶ್ರಾಂತಿಯ ಪೂರ್ವಾಹ್ನ ನಾವಿಬ್ಬರು ಮೆಟ್ರೋ ರೈಲೇರಿ ಅಕ್ಷರಧಾಮಕ್ಕೆ ಭೇಟಿ ಕೊಟ್ಟೆವು .
ಸುಮಾರು ಎರಡು ಗಂಟೆಗಳ ಕಾಲ ಅದರ ಖಾಯಂ ಪ್ರದರ್ಶನಗಳನ್ನೆಲ್ಲ ವಿರಾಮದಲ್ಲಿ ನಡೆದು ನೋಡಿದೆವು . ಸಂಜೆಗಳಿಗೇ ಮೀಸಲಾದ ವಿಶೇಷ ಪ್ರದರ್ಶನಗಳ ಬಗ್ಗೆ ಪ್ರಚಾರ ಸಾಹಿತ್ಯ ನೋಡಿಯೇ ಸಾಕೆನ್ನಿಸಿತು . ಪಾರಂಪರಿಕವಾಗಿ ಆರಾಧನಾ ಕೇಂದ್ರಗಳಿಗೆ ಏನೂ ಕೊರತೆಯಿಲ್ಲದ ದೇಶದಲ್ಲಿ ಅಕ್ಷರಧಾಮ ತನ್ನನ್ನೇ ಬಣ್ಣಿಸಿಕೊಳ್ಳುವ ಇನ್ನೊಂದು ವಾಣಿಜ್ಯ ಕೇಂದ್ರ .
ಕನಿಷ್ಠ ನಾಗರಿಕ ಸೌಕರ್ಯಗಳಿಗೂ ( ನೆಲ , ನೀರು , ವಿದ್ಯುತ್ , ಸಂಪರ್ಕ ಇತ್ಯಾದಿ ) ವಿಪರೀತ ಒತ್ತಡ ಇರುವ ಮಹಾನಗರ ಕೇಂದ್ರಿತವಾಗಿಯೇ ಬರುವ ಅಕ್ಷರಧಾಮವನ್ನು ಯಾವ ಮೌಲ್ಯದ ಹೆಸರಿನಲ್ಲೂ ನಾನು ಮೆಚ್ಚಲಾರೆ . ( ಅದರ ಶಿಲ್ಪಕಲಾವೈಭವ , ಪ್ರದರ್ಶಿಕೆಗಳ ಮಹತ್ತ್ವ , ವಿಶೇಷ ಪ್ರದರ್ಶನಗಳ ಪರಿಣಾಮ ಮುಂತಾದವುಗಳು ವಿವಿಧ ಮಾಧ್ಯಮಗಳಲ್ಲಿ ಸಾಕಷ್ಟು ಇವೆ – ಆಸಕ್ತರು ಓದಿಕೊಳ್ಳಬಹುದು !)
ಸಂಜೆ ಮತ್ತೆ
ಕರೋಲ್ ಭಾಗ್ ಮಾರುಕಟ್ಟೆಯಲ್ಲಿ ಸಾಕಷ್ಟು ವ್ಯಾಪಕವಾಗಿಯೇ ಸುತ್ತಿ ಹೋಟೆಲಿಗೆ ಮರಳಿದೆವು . ಮರು ಬೆಳಿಗ್ಗೆ ಆರಾಮವಾಗಿ ನಾವಿಬ್ಬರೇ ಗಿರೀಶ್ ಮಾಡಿಕೊಟ್ಟ ರಿಕ್ಷಾ ಏರಿ ನಿಜಾಮುದ್ದೀನ್ ರೈಲ್ವೇ ನಿಲ್ದಾಣಕ್ಕೆ ಹೋದೆವು .
ಹತ್ತು ಗಂಟೆ
ಐದು ಮಿನಿಟಿಗೆಂದು ನಿಗದಿಗೊಂಡ ರೈಲು ಅರ್ಧ ಗಂಟೆ ತಡವಾಗಿ ಹೊರಟದ್ದೇ ನಮ್ಮ ಪುಣ್ಯ . ಅದು ದಿಲ್ಲಿ ಹೊರವಲಯ ತಲಪುತ್ತಿದ್ದಂತೆ ಮಧ್ಯಾಹ್ನದ ` ಬಿಸಿಯೂಟ ’ ಕ್ಕೆ ಹೆಸರು ನೋಂದಾಯಿಸಿಕೊಳ್ಳುವ ಜನಕ್ಕೆ ಹೆಸರು ಕೊಟ್ಟೆವು . ಆದರೆ ರೈಲಿನ ವಿರಾಮದ ಓಟದಲ್ಲಿ ನಿಗದಿತ ಊಟದ - ನಿಲ್ದಾಣ , ಅಂದರೆ ಸವಾಯ್ ಮಾಧೋಪುರ , ಬರುವಾಗ ಅಪರಾಹ್ನ ಗಂಟೆ ಮೂರಾಗಿತ್ತು . ಈ ಪಾಠ ನಮ್ಮ
ಮುಂದಿನ ಮೂರು ಊಟಗಳನ್ನು ಪರೋಕ್ಷವಾಗಿ ಕಾಪಾಡಿತು ! ನಾವು ದಿಲ್ಲಿ ಪೇಟೆ ಸುತ್ತಾಟದಲ್ಲಿ ಸಂಗ್ರಹಿಸಿದ್ದ ಮಾವು , ಸೌತೆ ( ಕಾಕ್ಡೀ ), ಬಾಳೇಹಣ್ಣು ತುಂಬಾ ಉಪಯೋಗಕ್ಕೆ ಬಂತು . ಉಳಿದಂತೆ ಸ್ವಲ್ಪ ಹಗುರ ಹೊಟ್ಟೆಯಲ್ಲೇ ಇದ್ದು , ಮಾರಿ ಬರುತ್ತಿದ್ದ ಚಾ ಮತ್ತು ಆಯ್ದ ಸಣ್ಣಪುಟ್ಟ ತಿನಿಸುಗಳಲ್ಲೇ ಮುಂದಿನ ಪ್ರಯಾಣಾವಧಿಯನ್ನು ಪೂರೈಸಿಕೊಂಡೆವು . ಸಿಕ್ಕಿದ್ದನ್ನು ತಿಂದು , ಸಿಕ್ಕಿದಲ್ಲಿ ತೂರಿ ಸಾರ್ವಜನಿಕ ಪೀಡೆಗಳಾಗಲಿಲ್ಲ , ಸ್ವಂತ ಆರೋಗ್ಯವನ್ನೂ ಉಳಿಸಿಕೊಂಡೆವು .
ಸೆಕೆ , ನೀರಿನ
ಅಭಾವ ರೈಲು ಪ್ರಯಾಣದಲ್ಲಿ ಬಹಳ ಕಾಡಿತು . ` ಬಾಟಲ್ಡ್ ವಾಟರ್ ’ ನ ಭ್ರಮೆಯವರಿಗೆ ` ಠಂಡ ಪಾನಿ ’
ಎಷ್ಟೂ ಎಲ್ಲೂ ಸಿಗುತ್ತಿತ್ತು . ಅದಕ್ಕೆ ಸರಿಯಾಗಿ ಪರ್ಲ್ಪೆಟ್ ಬಾಟಲುಗಳು ( ಎಷ್ಟೋ ಅರ್ಧಂಬರ್ಧ ನೀರಿದ್ದಂತೇ ) ಭೋಗಿಯೋಳಗೂ ಮಾರ್ಗದುದ್ದಕ್ಕೂ ಎರಚಾಡಿಕೊಂಡಿದ್ದದ್ದನ್ನು ನೋಡಿದಾಗ ಸಂಕಟವಾಗುತ್ತಿತ್ತು . ನಾವಂತೂ ಸಾರ್ವಜನಿಕ ವಿತರಣೆಗಳನ್ನು ಆದಷ್ಟು ಬಳಸಿ , ` ವ್ಯವಸ್ಥೆ ’ ಅದನ್ನು ಪೂರ್ಣ ನಿರಾಕರಿಸುವ ದಿನ ದೂರ ಮಾಡಲು ಯತ್ - ಕಿಂಚಿತ್ ಕರ್ತವ್ಯ ಪೂರೈಸಿದ್ದೇವೆ . (ನಮ್ಮ ಸರಕಾರೀ ಕನ್ನಡ ಶಾಲೆಗಳನ್ನು ನೆನೆಸಿಕೊಳ್ಳಿ.) ನಮ್ಮ ಎರಡು ಟಪ್ಪರ್ ವೇರ್ ಖಾಯಂ ಬಾಟಲುಗಳನ್ನು ಉದ್ದಕ್ಕೂ ನಿಲ್ದಾಣಗಳಲ್ಲಿ ಸಿಕ್ಕ ` ಕುಡಿಯುವ ನೀರು ’ ಅಡ್ಡೆಗಳಿಂದ ಮರುಪೂರಣಗೊಳಿಸಿಕೊಳ್ಳುತ್ತಲೇ ಬಳಸಿದ್ದೇವೆ . ಆ ನಲ್ಲಿಗಳ ಪರಿಸರ
ಎಲ್ಲೆಡೆ ಶುದ್ಧವಿತ್ತೆಂದು ಹೇಳಲಾರೆ . ಆದರೆ ಆ ನೀರಿನಿಂದ ನಮ್ಮ
ಆರೋಗ್ಯ ಎಲ್ಲೂ ಕೆಡಲಿಲ್ಲ ! ಅದಕ್ಕೂ ಮಿಕ್ಕು ಕನಿಷ್ಠ ಹನ್ನೆರಡರಿಂದ ಇಪ್ಪತ್ತು ಪರ್ಲ್ಪೆಟ್ ಬಾಟಲುಗಳ ಪ್ರಸರಣವನ್ನು ಕಡಿಮೆಮಾಡಿದ್ದೇವೆ . ಎರಡನೇ ದಿನ ಹಗಲು ಸುಮಾರು ಹನ್ನೊಂದು ಗಂಟೆಗೇ ನಮ್ಮ ಭೋಗಿಯ ಅನ್ಯ ಬಳಕೆಯ ನೀರದಾಸ್ತಾನು ಮುಗಿದು ಹೋಗಿತ್ತು . ಒಂದೆರಡು ದೊಡ್ಡ ನಿಲ್ದಾಣಗಳನ್ನು ಕಳೆದರೂ ಪರಿಸ್ಥಿತಿ ಸುಧಾರಿಸಲಿಲ್ಲ . ನಾನು ಮೊದಲು ಗಾಡಿಯ ರಕ್ಷಕನ ಬಳಿ ದೂರು ಸಲ್ಲಿಸಿದೆ . ಆತ ಎಂಜಿನ್ ಚಾಲಕನನ್ನು ಸಂಪರ್ಕಿಸಲು ತಿಳಿಸಿದ . ಚಾಲಕನೂ ಅಸಹಾಯಕ . ಆ ದಾರಿಯಲ್ಲಿ ಭೋಗಿಗಳಿಗೆ
ನೀರು ಮರುಪೂರಣ ವ್ಯವಸ್ಥೆಯಿದ್ದ ನಿಲ್ದಾಣ ( ಮಡ್ಗಾಂವ್ ) ಬರಬೇಕಾದರೆ ಸಂಜೆ ಏಳಾಗಿತ್ತು . ದುರಂತವೆಂದರೆ ಇದು ಗಾಡಿಯ ಕಕ್ಕೂಸುಗಳಲ್ಲಿ , ಕೈತೊಳೆಯುವ ಬಾನಿಗಳಲ್ಲೂ ಪರ್ಲ್ಪೆಟ್ ಬಾಟಲುಗಳ ಮೆರೆತವನ್ನು ಕಾಣಿಸಿತ್ತು . ಇದರ ಮೇಲೆ ಬಹುತೇಕ ಸಾರ್ವಜನಿಕರ ಅಶಿಸ್ತು ಹಾಗೂ ನೈರ್ಮಲ್ಯಗಳ ಕೊರತೆ ನಮ್ಮ ಪ್ರಯಾಣವನ್ನು ಅಸಹ್ಯಗೊಳಿಸಿತ್ತು .
ಒಟ್ಟು ಯೋಜಿತ
ಪ್ರವಾಸದ ನಿರೀಕ್ಷೆಗಳು ಸೋತದ್ದನ್ನು ಈ ಮರುಪಯಣ ಹೆಚ್ಚಿಸಿತು .
ಕತ್ರದ ಅರ್ಧ ದಿನದಿಂದ ತೊಡಗಿ ಸುಮಾರು ನಾಲ್ಕು ದಿನಗಳ ಉದ್ದವನ್ನು ನಾವು ನೀರಸವಾಗಿ ಕಳೆದೆವು . ( ಇದು ಮೊದಲೇ ಸ್ಪಷ್ಟವಾಗಿದ್ದರೆ ನಾವೂ ಜಮ್ಮುವಿನಿಂದಲೇ ವಿಮಾನ ಹಿಡಿದು ಮುಗಿಸುತ್ತಿದ್ದೆವು ಖಂಡಿತ .) ನಮ್ಮ ರೈಲಾದರೋ ಮತ್ತೆ ಕೇರಳ ಲಕ್ಷ್ಯದ್ದೇ ಆಗಿತ್ತು . ಅದು ತೀರಾ ಅವೇಳೆ – ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ , ಮಂಗಳೂರ ಸಂಧಿಸ್ಥಳದಲ್ಲಿ ( ಕಂಕನಾಡಿ ) ಕೇವಲ ಐದು ಮಿನಿಟಷ್ಟೇ ನಿಂತು ಮುದುವರಿಯುವುದಿತ್ತು . ಇದು ನಮ್ಮ ಒಳಗುದಿಯನ್ನು ಹೆಚ್ಚಿಸಿ , ‘ ಮಂಗಳೂರು ತಪ್ಪಿಯೇ ಹೋಗಬಹುದು ’ ಎಂಬ ಆತಂಕವನ್ನೇ ಮೂಡಿಸಿತ್ತು . ಹಾಗಾಗಿ ನಾವು ಕುಂದಾಪುರದಿಂದಲೇ ಸಜ್ಜಾಗಿ ಕುಳಿತು , ಹಾದುಹೋಗುವ ನಿದ್ದೆಗಣ್ಣಿನ ನಿಲ್ದಾಣಗಳ ಲೆಕ್ಕ ಹಾಕಿದೆವು . ಉಡುಪಿ ಮಂಗಳೂರುಗಳ ನಿಗದಿತ ತಂಗುವಿಕೆಯನ್ನು ಮೀರಿ ಯಾವ್ಯಾವುದೋ ಕಾರಣಕ್ಕೆ ಹಸಿರು ಕಂದೀಲು ಸಿಗದೆ ನಿಂತದ್ದೆಲ್ಲ ಸೇರಿ ಭಾರೀ ವಿಳಂಬವನ್ನೇ ಲೆಕ್ಕ ಹಾಕಿದ್ದೆವು . ಆದರೆ ಒಂದು ಗಂಟೆಯ ಸುಮಾರಿಗೇ ಕಂಕನಾಡಿ ಬಂದಾಗ ಕಡೆಗೂ ಮುಗಿಯಿತಲ್ಲ ಎಂಬ ಬಿಡುಗಡೆಯ ಭಾವ ಬಂದಿತ್ತು . ನಿಲ್ದಾಣದ ಆಟೋ ರಾಕ್ಷಸ ನಿರ್ದಯೆಯಿಂದ ನೂರೈವತ್ತು ರೂಪಾಯಿ ( ಮುಂದಾಗಿಯೇ ಮಾತಾಡಿದಂತೇ ) ವಸೂಲು ಮಾಡಿ ಮನೆ ಮುಟ್ಟಿಸಿದಾಗ , ಬಳಕೆದಾರ ಜಾಗೃತಿಗೂ ಮಿತಿಯುಂಟೆಂದು ಕೇವಲ ತರ್ಕಿಸಿ ತೃಪ್ತಿಪಟ್ಟುಕೊಂಡೆವು .
ಮರು ಹಗಲೇ
ವಿಕ್ರಂ ಟ್ರಾವೆಲ್ಸಿಗೆ ನಾನು ೧೪ ಅಂಶಗಳ ವಿವರಣೆ ಕೇಳಿ ಪತ್ರ ಬರೆದೆ . ಆ ಪತ್ರದಲ್ಲಿನ ಹಣಕಾಸಿನ
ಲೆಕ್ಕ ಮತ್ತು ನಮ್ಮ ವೈಯಕ್ತಿಕ ದೂರುಗಳನ್ನು ಬದಿಗಿಟ್ಟು ಸಾರಾಂಶವನ್ನು ಮಾತ್ರ ಕೊಡುತ್ತೇನೆ :
“ ನಾವು ಮಂಗಳೂರು ಬಿಡುವ ( ೩ - ೫ - ೧೫ ) ಮೊದಲೇ ಪತ್ರಿಕೆಯಲ್ಲಿ ಓದಿ ತಿಳಿದಿದ್ದೆವು - ' ಕಾಶ್ಮೀರದಲ್ಲಿ ಮಳೆಯಿಂದ ಭೂಕುಸಿತಗಳಾಗಿವೆ . ಜಮ್ಮು ಶ್ರೀನಗರ ದಾರಿಯನ್ನು ಏಕಮುಖ ಸಂಚಾರಕ್ಕೆ ತೆರೆದಿದ್ದಾರೆ .' ಈ ಕುರಿತು ನಿಮ್ಮ ಪ್ರತಿನಿಧಿ - ಗಿರೀಶ್ ತಿಳುವಳಿಕೆ ತಂದುಕೊಳ್ಳದೆ ಆರಾಮವಾಗಿ ಹನ್ನೊಂದು ಗಂಟೆಗೆ ಜಮ್ಮು ಬಿಟ್ಟದ್ದಕ್ಕೆ ನಾವು ( ಒಟ್ಟು ತಂಡ ) ಅಪಾರ ಹಿಂಸೆ , ಕಾನೂನಿನ ವಿರುದ್ಧದ ಪ್ರಯಾಣ , ಅವೇಳೆಯಲ್ಲಿ ಊಟ , ವಿಶ್ರಾಂತಿ ಎಲ್ಲ ಅನುಭವಿಸಬೇಕಾಯ್ತು . ಸ್ಥಳೀಯ ಕಟ್ಟಳೆಗಳನ್ನು ಪ್ರವಾಸೀ ನಿರ್ವಾಹಕ ಮೊದಲೇ ತಿಳಿದುಕೊಂಡು ತಂಡವನ್ನು ನಡೆಸಬೇಡವೇ ? ಇದು ವೀಕ್ಷಣಾ ಸ್ಥಳ ಮತ್ತು ಸಮಯದ ಹೊಂದಾಣಿಕೆಗೂ ಅನ್ವಯಿಸಬೇಕಿತ್ತು . ನಮ್ಮ ಬಹುತೇಕ ಮಧ್ಯಾಹ್ನದ ಊಟಗಳು ತಡವಾಗಿಯೂ ಸ್ಥಳವೀಕ್ಷಣಾ ಸಮಯ ತೀರಾ ಅವಸರದ್ದೂ ಆದದ್ದು ಸರಿಯೇ ? ವೈಷ್ಣೋದೇವಿ ಬೆಟ್ಟ ಇಳಿದ ಮೇಲೆ ನಾವು ನಮ್ಮದೇ ವೆಚ್ಚದಲ್ಲಿ , ಎಚ್ಚರಿಕೆಯಲ್ಲಿ ಹೋಟೆಲು ಸೇರಿಕೊಂಡೆವು . ಅಪರಿಚಿತ ಸ್ಥಳ , ಅವೇಳೆ , ಭಾಷಾ ಸಮಸ್ಯೆ , ( ಕಾಶ್ಮೀರ ಎಂದ ಮೇಲೆ ಭಯೋತ್ಪಾದನೆ ಹಾಗೂ ಪಾಕೃತಿಕ ಅಸ್ಥಿರತೆಯನ್ನೂ ಸೇರಿಸಿ ,) ಚರವಾಣಿಯದ್ದೂ ಸಂಪರ್ಕ ಸಮಸ್ಯೆ ಇದ್ದಲ್ಲಿ ಪ್ರವಾಸೀ ಸದಸ್ಯರನ್ನು ಸುಕ್ಷೇಮವಾಗಿ ಮತ್ತೆ ಸೇರಿಸಿಕೊಳ್ಳುವ ಜವಾಬ್ದಾರಿ ಟ್ರಾವೆಲ್ಸ್ಗೆ ಬೇಡವೇ ? ದಾಲ್ ಸರೋವರದಲ್ಲಿ
ದೋಣಿ , ಉಳಿದಂತೆ ಕುದುರೆ , ದೋಲಿ , ಜೀಪು , ಕೊನೆಗೆ ಬೂಟು , ಕೋಟುಗಳಲ್ಲೂ ನಮ್ಮನ್ನು ಸ್ಥಳೀಯರ ಸುಲಿಗೆಗೆ ಬಿಟ್ಟು ನಿರ್ವಾಹಕ ದೂರ ಉಳಿದದ್ದು ಸರಿಯಲ್ಲ . ಪೂರ್ವಸಿದ್ಧ ಯೋಜನೆಯಲ್ಲಿದು ಗುಪ್ತ - ವೆಚ್ಚಗಳಾಗಿಯೇ ನಮ್ಮನ್ನು ಕಾಡಿವೆ . ಕಾಶ್ಮೀರದ ಬೇಸಗೆಯಲ್ಲಿ ಮುಖ್ಯವಾಗಿ ಎರಡು ಋತುಗಳು - ಸೇಬಿನದ್ದು ಮತ್ತು ಹೂಗಳದ್ದು ( ಟುಲಿಪ್ ). ಟುಲಿಪ್ ಉದ್ಯಾನವನ ಇದ್ದಾಗಲೂ ನಮಗೆ ತಪ್ಪು ಮಾಹಿತಿ ಕೊಟ್ಟು , ತೋರಿಸದಿದ್ದುದು ಯಾಕೆ ? ಪ್ರವಾಸೀ ಮಾರ್ಗದರ್ಶಿ ವ್ಯವಸ್ಥೆಗಳ ನಿರ್ಹಣೆಯೊಡನೆ ಮಾಹಿತಿ ಮೂಲವೂ ಆಗಬೇಕಿತ್ತು . ವೈಷ್ಣೋದೇವಿಯ ಸ್ಥಳಪುರಾಣ ಬಿಟ್ಟರೆ ಎಲ್ಲೂ ಆ ವಿವರಗಳು ನಮಗೆ ಸಿಕ್ಕಲಿಲ್ಲ , ಅಲ್ಪ ಸ್ವಲ್ಪ ಹೇಳಿದ್ದಿದ್ದರೆ ಅವು ಸಮರ್ಪಕವಾಗಿರಲಿಲ್ಲ . ಇದು ಮೊದಲೆಂಬಂತೆ ಯೋಜಿತ ಪ್ರವಾಸವನ್ನು ಒಪ್ಪಿಕೊಂಡ ನನಗೆ ಈ ಯಾತ್ರೆ ಭಾರೀ ನಿರಾಶೆಯನ್ನೇ ಉಂಟು ಮಾಡಿದೆ .”
ವಿಕ್ರಂ ಟ್ರಾವೆಲ್ಸಿಗೆ ಚರವಾಣಿಯ ಕಿರು
ಸಂದೇಶದಲ್ಲಿ ಎರಡೆರಡು ಬಾರಿ ಮೇಲಿನ ಪತ್ರದ ನೆನಪು ಹುಟ್ಟಿಸಿದೆ . ಕೊನೆಗೆ ವೈಯಕ್ತಿಕವಾಗಿ ಅವರಲ್ಲಿಗೆ ಹೋಗಿ , ಬಾಯ್ದೆರೆ ಹೇಳಿ ಬಂದೆ . ಮತ್ತೆ ವಿರಾಮದಲ್ಲಿ ಮಾಲಿಕರ ದೂರವಾಣಿ ಕರೆ ಮಾತ್ರ ಬಂತು – “SORRY!” ( ಇನ್ನೊಮ್ಮೆ ಬನ್ನಿ , ತಿದ್ದಿಕೊಂಡು ನಡೆಸುತ್ತೇವೆ – ಎಂದೂ ಸೇರಿಸಿದ್ದರು .) ನಿಜ , ಜಮ್ಮು ಕಾಶ್ಮೀರ ಸಿದ್ಧ ಪ್ರವಾಸೀ ಯೋಜನೆಯ ಕೊನೆಯಲ್ಲಿ ನಮಗುಳಿದದ್ದು ದೊಡ್ಡ , ಭರಿಸಲಾಗದ ವಿಷಾದ ಮಾತ್ರ . ಅಸಂಖ್ಯ ಸಾಹಸ ಯಾತ್ರೆ , ಮೂರು ಸುದೀರ್ಘ ಮೋಟಾರ್ ಸೈಕಲ್ ಯಾನಗಳನ್ನೂ ( ಒಂದು ದಕ್ಷಿಣ ಭಾರತ, ಉಳಿದೆರಡು ಅಖಿಲ ಭಾರತ ) ಕೇವಲ ವೈಯಕ್ತಿಕ ನೆಲೆಯಲ್ಲಿ ಯೋಜಿಸಿ , ಯಶಸ್ವಿಯಾಗಿ ಪೂರೈಸಿದ ನನಗೆ ಇನ್ನೊಂದು ಪೂರ್ವಸಿದ್ಧ ಪ್ರವಾಸ ಖಂಡಿತಕ್ಕೂ ಬೇಡ .
( ಒಂಬತ್ತು ಕಂತುಗಳ
ಜಮ್ಮು ಕಾಶ್ಮೀರ
ಪ್ರವಾಸ ಕಥನ
ಮುಗಿಯಿತು )
"ಪೂರ್ವಸಿದ್ಧ ಪ್ರವಾಸ ಖಂಡಿತಕ್ಕೂ ಬೇಡ" - ನನ್ನದೂ ಇದೇ ಅಭಿಪ್ರಾಯ
ReplyDeleteWonderful and useful information with some precautions to be taken with Travel agency. Thank your Ashokvardhana
ReplyDeleteTumba vicharagalu tiliyitu;Lekhana oodisi kondu hoyitu,yellu noyisalilla.Dhanyavadagalu.
ReplyDeleteಎಲ್ಲರೂ ಪಾಠ ಕಾಳಿಯ ಬಹುದಾದ ಪ್ರವಾಸೀ ಅನುಭವ ಸಾರ! ನೀಜ್, ಸ್ವತಂತ್ರ ಪ್ರವಾಸವೇ ಉತ್ತಮ.
ReplyDelete- Shyamala Madhav.