
(ಕುಮಾರಪರ್ವತದ ಆಸುಪಾಸು ಭಾಗ ಐದು)
“ನೀವು ಕಾಡಿಗೆ ಯಾಕ್ ಬಂದ್ರಿ?” ಕತ್ತು ಮುಚ್ಚುವ ಸ್ವೆಟ್ಟರ್ ಹಾಕಿದ್ದ ಡ್ರೈವರ್ ಪ್ರಶ್ನಿಸಿದ. ಜೀಪಿನ ಹೆದ್ದೀಪ ಕತ್ತಲಮೊತ್ತದಲ್ಲಿ ಆಳದ ಗುಹೆ ಕೊರೆಯುತ್ತಾ ನಮ್ಮನ್ನು ಒಳಗೊಳಗೆ ಒಯ್ಯುತ್ತಿತ್ತು. “ಹೊಳೆ, ಕಾಡು, ಬೆಟ್ಟ ಸುತ್ತುವುದು ನಮ್ಮ ಹವ್ಯಾಸ” ನಾನಂದೆ. ಎದುರು ಇನ್ನೊಂದು ಬದಿಯಲ್ಲಿ ಕುಳಿತವ, ಉಣ್ಣೆ ಟೊಪ್ಪಿಯವ “ಓಹೋ ಮೌಂಟೇರಿಂಗ್ ವರ್ಕ್ ಮಾಡ್ತಾ ಇದ್ದೀರಾ! ಸ್ಟೂಡೆಂಟ್ಸಾ?” ಜೀಪಿನ ಜೋಡಣೆಗಳು ಕಿರಿಗುಟ್ಟುವಂತೆ ಕುಲುಕುತ್ತಾ ಒರಟು ದಾರಿಯ ಸಡಿಲ ಕಲ್ಲುಗಳ ಮೇಲೆ ತೊನೆಯುತ್ತಾ ಸಾಗಿತ್ತು. “ಎಲ್ಲಾ ತರದವರೂ ಇದ್ದೇವೆ” ನನ್ನ ಮಾತಿಗೆ ನಡುವೆ ಕುಳಿತ ಕುಳ್ಳ ಥಟ್ಟನೆ ಕೇಳಿದ “ನಿಮ್ಮಲ್ಲಿ ಡಿಪಾರ್ಮೆಂಟ್ನವರೂ ಇದ್ದಾರಾ? ಜರ್ನಲಿಸ್ಟ್ಸೂ?” ಬೆಳಕೋಲು ಆಚೀಚಿನ ಕುಮಾರಧಾರಾ ಕೊಳ್ಳದ ಆಳವನ್ನಾಗಲೀ ಕನ್ನಡಿಕಲ್ಲಿನ ಎತ್ತರವನ್ನಾಗಲೀ ತೋರುತ್ತಿರಲಿಲ್ಲ. ನಾನು “ಇಲ್ಲ” ಎಂದೆ. ಎಲ್ಲ ಸ್ವಲ್ಪ ಹಗುರಾದಂತನ್ನಿಸಿತು. ದಾರಿ ಮಟ್ಟವಿತ್ತು, ಸವಾರಿ ಹಗುರಾಯ್ತು. “ನಾವೂ ನಿಮ್ಮಂಗೇ,” ಡ್ರೈವರು ಮುಂದುವರಿಸಿದ “ಅಡ್ವೆಂಚರ್ ಲವ್ವಿಂಗ್. ಹೀಗೆ ಜಾಲಿಯಾಗಿ ಹಂಟಿಂಗ್ ಮಾಡಾಣಾಂತ ಬಂದ್ವಿ. ಆದ್ರೆ ಗೇಟ್ನಲ್ಲಿ ಹೇಳೋಹಾಗಿಲ್ಲ. ಅದ್ಕೇ ಸುಬ್ರಹ್ಮಣ್ಯದ ಸಂಬಂಧಿಕರ ಕಥೆ ತಗ್ದ್ವೀ. ಗಾರ್ಡ್ ತಪ್ಪುಸ್ಕೊಳಾಣಾಂತಂದ್ರೆ ನೀವು ಗಂಟುಬಿದ್ರೀ. ಏನೇ ಇರಲೀ ಒಪ್ಕೊಂಡಿದ್ದಕ್ಕೆ ನಿಮ್ನ ಕೆಳ ಗೇಟಿನ ಹತ್ರ ಬಿಡ್ತೀವಿ. ಯಾರ್ಗೂ ಹೇಳಕ್ಕೊಗ್ಬೇಡಿ” ಮುಗಿಸಿದ. ದಾರಿ ಬೆಟ್ಟದ ತೆರೆಮೈಗೆ ಬಂದು ಬಲಕ್ಕೆ ಹೊರಳಿದಾಗ ಬೆಳಕು ಶೂನ್ಯವನ್ನೇ ವ್ಯಾಪಿಸಿದರೂ ಎಲ್ಲ ನಿಚ್ಚಳವಾದಂತಿತ್ತು.

ಮಾತು ಬೆಳೆದಂತೆ ಘಾಟಿಯ ಇಳುಕಲು ತೀವ್ರವಾಯ್ತು, ದಾರಿ ಹೆಚ್ಚು ಹಾಳೂ ಆಗಿತ್ತು. ಜೀಪು ಕಲ್ಲು ಕೊರಕಲುಗಳಲ್ಲಿ ನ್ಯರನ್ಯರಗುಟ್ಟುತ್ತಾ ದಿಣ್ಣೆ ತಗ್ಗುಗಳಲ್ಲಿ ಧಡಕಾಯಿಸುತ್ತಾ ಇಳಿದಿತ್ತು. ಹೀಗೇ ಒಮ್ಮೆ ತೀವ್ರ ಬಲ ತಿರುವು ತೆಗೆಯುತ್ತಿದ್ದಂತೆ ಎಲ್ಲರಿಗೂ ಮುಗ್ಗರಿಸಿದ ಅನುಭವ. ಜೀಪಿನ ಅಡಿ ನೆಲ ಉಜ್ಜಿ, ದೂಳೆಬ್ಬಿಸಿ ನಿಂತೇ ಬಿಟ್ಟಿತು. ಜಗ್ಗಿದ್ದ ಬಲಭಾಗದಿಂದಲೇ ಚಾಲಕ ಹುಶಾರಾಗಿಳಿದು, ಟಾರ್ಚ್ ಹಾಕಿ ನೋಡಿ, “ಥತ್ ಮಗಂದು! ಯಾಕ್ಸಿಲ್ ಕಟ್ಟು.” ತರಹೇವಾರಿ ವಿಷಾದಸೂಚಕಗಳೊಡನೆ ಎಲ್ಲರೂ ಇಳಿಯುತ್ತಿದ್ದಂತೆ ಇನ್ನೊಬ್ಬ ಘೋಷಿಸಿದ “ನಡ್ಯೋ ಪ್ರೀತ್ಯೋರ್ನ ತುಂಬ್ಕೊಂಡಿದ್ದಕ್ಕೆ ಎಲ್ರೂ ನಡ್ಯಂಗಾಯ್ತು.”
*** ***

ಕುಮಾರಪರ್ವತದಲ್ಲಿ ನಾವು ಬೆಂಬತ್ತಿದ್ದ ‘ಜಲಪಾತ’ದ ತಳ ನಿಷ್ಕರ್ಷೆಗೆ ಅಂತಿಮ ರುಜು ಹಾಕಿದ್ದು ಈ ಕುಮಾರಧಾರೆ. ಸಮುದ್ರ ಮಟ್ಟದಿಂದ ಸುಮಾರು ೯೧೦ ಮೀಟರ್ ಔನ್ನತ್ಯದಿಂದ ಸುಬ್ರಹ್ಮಣ್ಯದ ೧೨೪ ಮೀಟರಿಗೆ ಇಳಿಯುವ ಈ ಜಾಡು ಸಪಾಟು ನೆಲದ ಅಂದಾಜಿನಲ್ಲಿ (ಭೂಪಟದಿಂದ) ಉದ್ದ ತೆಗೆದರೂ ಸುಮಾರು ೨೬ ಕಿಮೀ ಉದ್ದವಿದೆ. (ಬೆಟ್ಟಗುಡ್ಡಗಳ ಚಾರಣದಲ್ಲಿ ಅಂತರವನ್ನು ಕೇವಲ ಎರಡುಬಿಂದುಗಳ ವ್ಯತ್ಯಾಸವೆಂದು ಲೆಕ್ಕ ಹಾಕುವುದೇ ಸರಿಯಲ್ಲ) ಅದನ್ನು ನಡೆದು ನೋಡುವ ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ತಂಡದ ಉತ್ಸಾಹಕ್ಕೆ (೧೯೮೯ರ) ಕ್ರಿಸ್ಮಸ್ ಹಿಂದಿನ ಸೋಮವಾರ ಮತ್ತು ಆದಿತ್ಯವಾರದ ಬಿಡುವುಗಳನ್ನು ಹೊಂದಿಸಿಕೊಂಡೆವು. ಆ ದಿನಗಳಲ್ಲಿ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ವಿರಳ ಬಸ್ ಸಂಚಾರವಿದ್ದರೂ ರಾತ್ರಿ ಎಂಟೊಂಬತ್ತು ಗಂಟೆಗಷ್ಟೇ ಹೊರಡಬಹುದಾಗಿದ್ದ ನಮ್ಮ ಅನುಕೂಲಕ್ಕೆ ಯಾವುದೂ ದಕ್ಕುವಂತಿರಲಿಲ್ಲ. ಮತ್ತೆ ನಮ್ಮ ಚಾರಣದ ನಿಜ ಆರಂಭ ಬಿಂದು ಬೂದಿಚೌಡಿ (ಸುಬ್ರಹ್ಮಣ್ಯದಿಂದ ಸುಮಾರು ಒಂಬತ್ತು ಕಿಮೀ). ನನ್ನ ಹಿಂದಿನ ಕಥಾನಕಗಳಲ್ಲಿದ್ದದ್ದಕ್ಕಿಂತ ದಾರಿ ಜೀರ್ಣೋದ್ಧಾರವಾಗಿತ್ತು. ಆದರೆ ನಾವು ತಿಳಿದಂತೆ ಶಿರಾಡಿ ಘಾಟಿಯ ವಾಣಿಜ್ಯ ಇಲಾಖೆಯ ತಪಾಸಣಾ ಠಾಣೆಯಲ್ಲಿ ಕೊಡಬೇಕಾದ ಲಂಚದ ಹಣವನ್ನೂ ತಪ್ಪಿಸಬಯಸುವ ಲಾರಿಗಳು ಮುಖ್ಯವಾಗಿ ಬಳಸುತ್ತಿದ್ದವು. ಅವುಗಳಲ್ಲೂ ಮುಖ್ಯ ಮೂರೂ ದಿಕ್ಕುಗಳಲ್ಲಿ ಭಾರೀ ಹೊರಚಾಚಿಕೆಯಲ್ಲಿ ತುಂಬಿ ಬರುವ ಹುಲ್ಲ ಲಾರಿಗಳಂತೆ. ಸಹಜವಾಗಿ ದಾರಿಯ ಹರಹು ಕಡಿಮೆಯಿದ್ದಲ್ಲಿ, ತೀರಾ ಆಕಸ್ಮಿಕವಾಗಿ ಎದುರು ವಾಹನ ಸಿಕ್ಕಲ್ಲಿ ಇವು ನುಗ್ಗಿದ್ದಕ್ಕೆ ಧಾರಾಳ ಹುಲ್ಲು ಉದುರಿದ್ದು, ಮರಗಿಡಗಳ ಮೇಲೆಲ್ಲಾ ನೇಲುತ್ತಿದ್ದದ್ದು ನೋಡಬಹುದಿತ್ತು. ನಂಬಿದರೆ ನಂಬಿ, ಕುಳ್ಕುಂದದ ಒಂದು ಸಣ್ಣ ಟೆಂಪೋದವನು ಬೆಳಿಗ್ಗೆ, ಸಂಜೆ ಒಮ್ಮೆ ಘಾಟಿಯುದ್ದಕ್ಕೆ ಉದುರುಹುಲ್ಲು ಸಂಗ್ರಹಿಸಲು ಟ್ರಿಪ್ ಹಾಕಿ ಭರ್ತಿ ಲೋಡ್ ತರುತ್ತಿದ್ದನಂತೆ! (ಹುಲ್ಲಿನ ಲಾರಿ ಅಟಕಾಯಿಸಲು ಕಾಡಾನೆಗಳೂ ಬರುತ್ತಿದ್ದವು ಎನ್ನುವ ಇನ್ನೊಂದು ಕತೆ ನನಗಂತೂ ಅಷ್ಟೇನೂ ವಿಶ್ವಾಸಾರ್ಹವಾಗಿ ಕೇಳಲಿಲ್ಲ.) ಅವೆಲ್ಲಾ ಏನಿದ್ದರೂ ಯಾವ ವೇಳೆಯಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾತ್ರ ಇಲ್ಲದ ದಿನಗಳವು. ಹಾಗಾಗಿ ತಂಡ ಸ್ವಂತ ದ್ವಿಚಕ್ರ ವಾಹನಗಳಲ್ಲಿ ಮೊದಲು ಸುಬ್ರಹ್ಮಣ್ಯಕ್ಕೆ ಹೋಗಿ ಮತ್ತೆ ಬಾಡಿಗೆ ವಾಹನವನ್ನೇನಾದರೂ ಹಿಡಿದು ಬೂದಿಚೌಡಿ ತಲಪುವುದೆಂದು ನಿಶ್ಚಯಿಸಿಕೊಂಡೆವು.
ಅಪರಾತ್ರಿಯಲ್ಲಿ ಕಾಡು ನುಗ್ಗಿ ಶಿಬಿರಹೂಡುವುದು ಕಷ್ಟ. ಇದನ್ನು ತಪ್ಪಿಸಲು ಶನಿವಾರ ಅಪರಾಹ್ನವೇ ಬಿಡುವು ಮಾಡಿಕೊಳ್ಳಬಹುದಾಗಿದ್ದ ನಾಲ್ವರು ಮುಂದಾಗಿ ಹೊರಟರು. ಅರವಿಂದರ ಬೈಕಿಗೆ ಅವರ ಭಾವ ಪಮ್ಮಣ್ಣನೇ (ಪರಮೇಶ್ವರ) ಸಂಗಾತಿ. ಪ್ರಸನ್ನನ ಸ್ಕೂಟರಿಗೆ ಸಮೀರನ ಜೋಡಿ. ಸಂಜೆ ಸುಬ್ರಹ್ಮಣ್ಯದ ಡಾ| ಹೆಗಡೆಯವರಲ್ಲಿ ಸ್ವಂತ ವಾಹನ ಬಿಟ್ಟು, ಹೊಟೆಲಿನಲ್ಲಿ ಮುಂಗಡವಾಗಿ ರಾತ್ರಿ ಊಟ ಮುಗಿಸಿಕೊಂಡರು. ಅನಂತರ ವಟವೃಕ್ಷ (ಮುದ್ರಾ ರಾಕ್ಷಸನಿಗೆ ಕ್ಷಮೆಯಿರಲಿ, ಅದು ಆಟೋರಾಕ್ಷಸ, ಅರ್ಥಾತ್ ಒಟ್ಟೆ ರಿಕ್ಷಾ) ಏರಿ ಹೋದರು. ವಾಸ್ತವದಲ್ಲಿ ನಾವು ‘ಜಲಪಾತದ ಬೆಂಬತ್ತಿ’ ಮರಳಿದಾಗ ಹೊಳೆ ದಾಟಿದ್ದು ‘ಸಂಗಮ’ದ ಬಳಿ, ಅಂದರೆ ಬೂದಿಚೌಡಿ ಮಂಟಪದಿಂದಲೂ ಸ್ವಲ್ಪ ಕೆಳಪಾತ್ರೆಯಲ್ಲಿ. ಬೂದಿಚೌಡಿಯ ಎದುರಿನ ಜೀರ್ಣಾವಸ್ಥೆಯ ಕಾಡುದಾರಿ ಮುಟ್ಟಿಸುವುದು ಅಡ್ಡಹೊಳೆಯ ದಂಡೆ. ನಮ್ಮ ತಂಡ ಮೊದಲು ಅಲ್ಲೊಂದು ಪ್ರಶಸ್ತ ಜಾಗ ನಿಷ್ಕರ್ಷಿಸಿಕೊಂಡರು. ಮತ್ತೆ ರಾತ್ರಿ ಕಳೆಯುವಲ್ಲಿ ವನ್ಯಜೀವಿಗಳನ್ನು ದೂರವಿಡಲು ಮತ್ತು ಚಳಿ ನಿಭಾಯಿಸಲು ಶಿಬಿರಾಗ್ನಿ ಅವಶ್ಯ. ಅಡುಗೆಗೆ ಕಾಡುಕಲ್ಲು ಹೂಡಿ ಒಲೆಮಾಡುವುದು ಅನಿವಾರ್ಯ. (ಎಷ್ಟು ಪುಟ್ಟದೆಂದರೂ ಐದೋ ಮೂರೋ ಕಿಲೋ ತೂಕದ ಗ್ಯಾಸ್ ಅಂಡೆ ನಮಗೆ ಹೆಚ್ಚಿನ ಭಾರವೆಂದೇ ನಾವು ಒಪ್ಪಿಕೊಂಡಿರಲಿಲ್ಲ) ಅದಕ್ಕೆಲ್ಲ ಆಸುಪಾಸಿನ ಒಣ, ಉದುರು ಸೌದೆಗಳನ್ನು ಅಂದಾಜಿನಲ್ಲಿ ಒಟ್ಟು ಮಾಡಿ, ಮಲಗುವ ಜಾಗದ ಕಲ್ಲು ಮುಳ್ಳು ದೂರಮಾಡಿ, ಹೊಳೆಯಿಂದ ಅಗತ್ಯದ ನೀರೂ ಹಿಡಿದಿಟ್ಟು ಬೀಡುಬಿಟ್ಟರು.

ಶಿಬಿರಾಗ್ನಿ ಸೌಮ್ಯವಾಗಿ ಉರಿದಿತ್ತು. ಅಡ್ಡಹೊಳೆಯ ನಿತ್ಯನೂತನ ಧಾರಾವಾಹಿಯಲ್ಲಿ ಎಲ್ಲಿನದೋ ಕುಲುಕು, ಇನ್ನೆಲ್ಲಿನದೋ ಬೀಳು, ಮತ್ತೆಲ್ಲೆಲ್ಲಿನದೋ ಜೀವಜಾಲದ ವಟರು, ಗೊಟಕ್ ನಡೆದೇ ಇತ್ತು. ಕಣಿವೆಗಿಳಿದ ಮಂಜು ಎಲೆಗಳ ಮೇಲೆ ಹನಿಗಟ್ಟಿ, ಜಾರಿ ತಟಕುವ ಅನಿಶ್ಚಿತತೆಗೆ ಜಾಗೃತನಾಗಿ ಸರದಿಯಲ್ಲಿ ಅರವಿಂದರ ಪಹರೆ ನಡೆದಿತ್ತು. ಉಳಿದ ಮೂವರು ಬೆಂಕಿಯತ್ತ ಕಾಲು ಚಾಚಿ ನಿದ್ರೆಯಲ್ಲಿದ್ದರು. ನಮ್ಮಲ್ಲಿದ್ದ ಎರಡು ಪುಟ್ಟ ಗುಡಾರಗಳನ್ನು ಹೆಚ್ಚು ಗದ್ದಲಮಾಡದೆ ಬಳಿಯಲ್ಲೇ ಅರಳಿಸಿ, ಪಹರೆಯ ಸರದಿ ಮತ್ತು ಬೆಳಗಿನ ವ್ಯವಸ್ಥೆಗಳ ಕುರಿತು ಸಣ್ಣ ಮಾತಾಡಿಕೊಂಡು ವಿಶ್ರಮಿಸಿದೆವು. ನಮ್ಮಿಂದ ಸ್ವಲ್ಪ ಕೆಳದಂಡೆಯಲ್ಲಿ, ದಾರಿ ಕೆಲಸ ಮಾಡಲು ಬಂದ ಕೂಲಿಕಾರರ ದಂಡೊಂದು ತಂಗಿತ್ತು. ಅವರಲ್ಲಿ ಕೆಲವರು ನಮ್ಮವರು ಶಿಬಿರ ಹೂಡುವಾಗಲೇ ಬಂದು ಮಾತಾಡಿದ್ದರಂತೆ. ‘ಕ್ರೂರಮೃಗ’ಗಳ ಬಗ್ಗೆ ಅಯಾಚಿತವಾಗಿ ತಮ್ಮದೇ ಅನುಭವವೆಂಬಂತೆ ಜ್ಞಾನಪ್ರಸಾರ ಮಾಡಿದ್ದರು. ಇದರಲ್ಲಿ ಅವರ ಉಪವೃತ್ತಿಯ (ಕಳ್ಳಬೇಟೆ) ಅಡ್ಡಿನಿವಾರಣೆಯ ಜಾಣ್ಮೆ ನಮಗೆ ಅರ್ಥವಾಗದ್ದೇನೂ ಅಲ್ಲ. ಮತ್ತೂ ಅಪರಾತ್ರಿಯಲ್ಲಿ (ನಮ್ಮ ಶಿಬಿರ ಪೂರ್ಣಗೊಂಡ ಮೇಲೆ) ಇನ್ನೊಂದೇ ತಂಡ ಒಂದೆರಡು ಕೋವಿ ಹಿಡಿದುಕೊಂಡು ಬಂದು ನಮ್ಮನ್ನು ವಿಚಾರಿಸಿಕೊಂಡರು. ಅವರು ಬೂದಿಚೌಡಿಗೆ ಕೋಳಿ ಹರಕೆ ಸಲ್ಲಿಸಲು (ದೊಡ್ಡಬೇಟೆಯ ಯಶಸ್ಸಿಗೆ?) ಬಂದವರಂತೆ. ಆ ವಲಯದ ಕುಖ್ಯಾತ ಸಲಗನನ್ನು ಬೆದರಿಸಲಷ್ಟೇ ಅವರು ಕೋವಿ ಹೊತ್ತದ್ದಂತೆ. ಆ ಆನೆ ಬೂದಿ ತಿನ್ನಲು ಬರುವ (ಅಜ್ಜಿ)ಕತೆಯನ್ನು ಪ್ರತ್ಯಕ್ಷದರ್ಶಿಗಳಂತೇ ನಮ್ಮಲ್ಲಿ ಭಯಹುಟ್ಟಿಸಲು ಹೇಳಿ (ವಾಸ್ತವದಲ್ಲಿ ರಂಜಿಸಿ,) ಹೋದರು. ಮರುದಿನ ದಟ್ಟ ಕಾಡಿನೊಳಗೆ ಮುಂದುವರಿಯುವ ನಮ್ಮ ಯೋಜನೆ ತೀರಾ ಅಪಾಯಕಾರಿ ಎಂದು ಎಚ್ಚರಿಸಲು ಅವರು ಮರೆಯಲಿಲ್ಲ!
ಅನಪೇಕ್ಷಿತ ಘಟನೆಗಳೇನೂ ಇಲ್ಲದೆ ರಾತ್ರಿ ಕಳೆಯಿತು. ಪಹರೆಯ ಕೊನೆಯ ಜೋಡಿ ಸಮೀರ ಅರವಿಂದರದು. ಅವರು ಬಟಾಟೆ ಪಲ್ಯಮಾಡಿ, ಚಾ ಕಾಸಿ ಉದಯರಾಗ ಹಾಡಿದರು. ಊರಿಂದಲೆ ತಂದಿದ್ದ ಚಪಾತಿಗಳನ್ನು ಬಿಸಿ ಪಲ್ಯದಲ್ಲಿ ಹದಬರಿಸಿ ಹೊಟ್ಟೆಗಿಳಿಸಿ, ಎಡೆಗಳಿಗೆ ಚಾ ಹೊಯ್ದೆವು. ಏಳೂವರೆಗೆ ಶಿಬಿರ ಸ್ಥಾನ ಹಿಂದಿನ ವನ್ಯ ಸ್ಥಿತಿಯಲ್ಲೇ ಇರುವಷ್ಟು ಶುಚಿಗೊಳಿಸಿ, ಭಾರದ ಚೀಲಗಳನ್ನು ಬೆನ್ನಿಗೇರಿಸಿದೆವು. ಶೂ ಕೈಯಲ್ಲಿ ಹಿಡಿದು, ಸುಮಾರು ಇಪ್ಪತ್ತು ಮೀಟರ್ ಅಗಲದ ಹೊಳೆಗೆ ಇಳಿದೆವು. ಕೆಲವು ವರ್ಷಗಳ ಹಿಂದೆಯೇ ಕೂಪಿನವರು ಇಲ್ಲಿ ಹೊಳೆಪಾತ್ರೆಯನ್ನೂ ಲಾರಿಗಾಗಿ ಹಸನುಗೊಳಿಸಿದ್ದು ನಮ್ಮನುಕೂಲಕ್ಕೆ ಒದಗಿತು. ನೀರೇನೋ ಮೊಣಕಾಲಾಳ ಮತ್ತು ಒಳ್ಳೆಯ ಸೆಳವಿನದ್ದೇ ಆದರೂ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟು ಸುಲಭವಾಗಿಯೇ ದಾಟಿದೆವು. ಮತ್ತೆ ಅವಸರವಸರವಾಗಿ ಕಾಲೊಣಗಿಸಿಕೊಂಡು ಶೂ ಬಿಗಿದು ಕೂಪು ದಾರಿಯಲ್ಲೇ ಮುಂದುವರಿದೆವು.
ಕೂಪುದಾರಿ ಇಲ್ಲಿ ನಮಗೆ ಎರಡು ಸಾಧ್ಯತೆಯನ್ನು ತೋರಿತು. ನಕ್ಷೆ ಮತ್ತು ಆಮೇಲೆ ನಮಗೆ ತಿಳಿದಂತೆ ಎಡದ ಜಾಡು ಹೊಳೆದಂಡೆಯಲ್ಲೇ ಮುಂದುವರಿದು ಮೇಲೆಲ್ಲೋ ಬಿಸ್ಲೆಘಾಟಿದಾರಿಯನ್ನು ಸೇರುತ್ತದೆ. ಅದರಲ್ಲಿ ಮುಖ್ಯದಾರಿಯಂತೆ ವಾಹನ ಸಂಚಾರವಿಲ್ಲದ್ದರಿಂದ ಕಳ್ಳಬೇಟೆಯವರಿಗೆ ಬಲುಪ್ರಿಯವಂತೆ. ಸಹಜವಾಗಿ ದಾರಿಯ ಪೂರ್ಣ ಹರಹು ತೆರವಿತ್ತು ಮತ್ತು ಒಳ್ಳೇ ಸವೆದಿತ್ತು. ಆದರೆ ನಮ್ಮದು ಬಲಪಕ್ಷ. ಇದು ಹೊಳೆ ದಂಡೆ ಬಿಟ್ಟು ದೂರ ಸರಿಯುತ್ತದೆ. ಸಣ್ಣಪುಟ್ಟ ಪೊದರು ಕವಿದು, ಒಣಕೊಂಬೆ, ಮರ ಬಿದ್ದು ಕೂಪು ದಾರಿಯ ಹರಹು ಅಸ್ಪಷ್ಟವಿದ್ದರೂ ಕಾಲುದಾರಿಯಂತೆ ಸ್ಪಷ್ಟ ಸವಕಲು ಜಾಡಿತ್ತು. ನಾವು ತುಟಿಬಿಗಿಹಿಡಿದು ಅನುಸರಿಸಿದೆವು. ಅಡ್ಡಬಿದ್ದ ಮರ, ನೇತುಬಿದ್ದ ಬೀಳಲು, ಬಾಗಿನಿಂತ ಪೊದರು, ಕೊರೆದುಹೋದ ನೆಲ, ಮಡ್ಡಿನಿಂತ ತಗ್ಗು, ಕಲ್ಲು ಕಸ ನಿಗಿದು ಅಡ್ಡಲಾಗುವ ಸಣ್ಣ ಒಣ ಹಳ್ಳಗಳೆಲ್ಲವೂ ಪ್ರಕೃತಿಯ ವಿಕಾಸಪರವಾದ ಮನವಿಗಳು. ಕತ್ತಿ, ಗುದ್ದಲಿಗಳ ಕ್ರಾಂತಿಯನ್ನು ಅಳಿಸುವ ನಿರಂತರ ಪ್ರಯತ್ನಗಳು. ನಾವು ತುರ್ತುಪರಿಸ್ಥಿತಿಗೆಂದು ಒಂದೆರಡು ಕತ್ತಿ ಇಟ್ಟುಕೊಂಡಿದ್ದರೂ ಕುರುಚಲು ಹಸಿರನ್ನು ಕಡಿಯುವ ಗೋಜಿಗೆ ಹೋಗದೆ (ವಿಶೇಷ ಸದ್ದಾಗದಂತೆ) ಓಸರಿಸಿ ಸಾಗಿದೆವು. ಅಡ್ಡಬಿದ್ದ ಮರ, ಒಣಕಡ್ಡಿ, ತರಗೆಲೆಗಳನ್ನು ಆದಷ್ಟು ನಿಶ್ಶಬ್ದದಲ್ಲೇ ನಿವಾರಿಸಿದರೂ ಚುರುಕು ಹೆಜ್ಜೆಗಳನ್ನು ಮರೆಯಲಿಲ್ಲ. ಪಕ್ಷಿಲೋಕದ ಆಕಾಶವಾಣಿಯಲ್ಲಿ ಎಲ್ಲವೂ ಮಂಗಳ ಗೀತೆಗಳು, ನಾವೋ ಶ್ರದ್ಧಾವಂತ ಶೋತೃಗಳು. ಪ್ರಾಣಿಪ್ರಪಂಚದ ನಾಟಕಗಳೇನಾದರೂ ಇದ್ದರೆ ಪ್ರೇಕ್ಷಕರೂ ಆಗುವ ಆಸೆ ನಮ್ಮದು. ನಿರೀಕ್ಷೆ ಹುಸಿಯಾಗದಂತೆ ಅರ್ಧ ಗಂಟೆಯೊಳಗೇ ದೊಡ್ಡ ಕರಡಿಯೊಂದನ್ನು ಬಹಳ ಹತ್ತಿರದಿಂದಲೇ ನೋಡಿದೆವು. ಕಪ್ಪು ಕಂಬಳಿಕುಪ್ಪೆ ಹೊತ್ತ ಗೂನುಬೆನ್ನಿನವ ಉರುಳುರುಳಿ ಹೋದಂತೆ ಅದು ಓಡಿ ಮರೆಯಾಯ್ತು.
ಈಗ ನಮ್ಮ ಜಾಡಿನ ಬಲಕ್ಕೆ ಸಮರೇಖೆಯಲ್ಲಿ ಕುಮಾರಧಾರ ಹೊಳೆ ಪ್ರತ್ಯಕ್ಷವಾಯ್ತು. ವಿರಳ ಮರ, ಪೊದರುಗಳೆಡೆಯಿಂದ ನಲ್ವತ್ತೈವತ್ತಡಿ ದೂರದಲ್ಲಿ ಅಸ್ಪಷ್ಟ ನೋಟ. ಬರಬರುತ್ತಾ ಜಾಡು ಹೊಳೆಗಿಳಿಯಿತು. ಅದು ಕುಮಾರಧಾರೆಯ ಬಲದಂಡೆ. ಭಾರೀ ಬಂಡೆಗುಂಡುಗಳ ರಾಶಿಯೇ ಹರಿದುಬಂದಂಥ ನೋಟ. (ಹಿಂದಿನ ಕಥನದಲ್ಲಿ ನಾವು ‘ಜಲಪಾತದ ಬೆಂಬತ್ತಿ’ ಇಳಿದಾಗಿನದೇ ಒಂದು ಭಾಗ) ಮಳೆಗಾಲದ ಪ್ರವಾಹ ಅವನ್ನೆಲ್ಲ ಮುಳುಗಿಸಿ ವಿಜೃಂಭಿಸುವ ಪಾತ್ರೆ ಭಾರಿಯೇ ಕಾಣುತ್ತಿತ್ತು. ಸದ್ಯ ಹೊಳೆ ಅಸಂಖ್ಯ ಧಾರೆಗಳಲ್ಲಿ ಬಂಡೆಗಳ ಎಡೆಯಲ್ಲಿ ಹಂಚಿ ಹರಿದರೂ ನಮ್ಮ ಜಾಡು ಇಳಿದ ಜಾಗದಲ್ಲಿ ಸಾಕಷ್ಟು ಆಳವೇ ಇತ್ತು. ಮತ್ತೆ ನಮ್ಮದೋ ಹೆಚ್ಚುಕಡಿಮೆ ಎರಡು ದಿನದ, ಪ್ರವಾಹದ ಎದುರುಮುಖೀ ನಡಿಗೆ. ಆಗಲೇ ಬಂಡೆಯಿಂದ ಬಂಡೆಗೆ ಜಾಡು ಮಾಡುತ್ತಾ ನಿಧಾನಿಸುವುದು ನಮಗೆ ಬೇಕಿರಲಿಲ್ಲ. ಹಾಗಾಗಿ ಸ್ವಲ್ಪ ಪೊದರು ನುಗ್ಗಿ, ದರೆ ಏರಿ ಇನ್ನೊಂದೇ ಮಾಸಿದ ಜಾಡು ಕಂಡುಕೊಂಡೆವು. ಕೊಳ್ಳದ ಹೊಳೆಯ ಕಲರವ ತಪ್ಪದಷ್ಟುಸಮೀಪ, ಜಾರುನೆಲ ಮತ್ತು ಅಗಮ್ಯ ಪೊದರುಗಳ ಕೋಟೆಯಲ್ಲಿ ಬೀಳದಷ್ಟು ದೂರ ಸುಮಾರು ಸಾಗಿದೆವು. ಅಲ್ಲಿ ವನೋತ್ಪತ್ತಿ ಸಂಗ್ರಹಿಸುವವರ ಹಳೆಯ, ಮುರುಕಲು ಜೋಪಡಿ ಸಿಕ್ಕಿತು. ಅದರಿಂದ ಸ್ವಲ್ಪ ಮುಂದೆ ಮೊದಲ ವಿಶ್ರಾಂತಿ; ಪಾನಕ ವಿರಾಮ.
ನಮ್ಮ ಮೊದಲ ಸಾಹಸಯಾತ್ರೆಗಳಲ್ಲಿ ಗಂಜಿ, ಉಪ್ಪಿಟ್ಟು, ಸಾರೋ ಸಾಂಬಾರೋ ಬೇಯಿಸುವುದು, ಹಸಿ ತರಕಾರಿ ಖಿಚಡಿ ಮಾಡುವುದು ಎಂದಿತ್ಯಾದಿ ಊಟಪಟ್ಟಿ ಮಾಡಿ ನೂರೊಂದು ಜಿನಸು, ನಾಲ್ಕೈದು ಪಾತ್ರೆ ಪರಡಿ ಹೊತ್ತು ಕಷ್ಟಪಡುತ್ತಿದ್ದೆವು. ಪ್ರಯೋಗಶೀಲತೆ ಸಮೀರನಿಗೆ ಅಪ್ಪ - ವಿಠಲ ರಾಯರಿಂದ ಧಾರಾಳ ಮೈಗೂಡಿತ್ತು. ಹಾಗಾಗಿ ಈ ಸಲದ ಊಟಪಟ್ಟಿಯ ತಯಾರಿ ಮತ್ತು ನಿರ್ವಹಣೆ ಆತನದ್ದೇ. ಸಮೀರ ಸಾಕಷ್ಟು ಚರ್ಚಿಸಿ, ದಿನ ಮತ್ತು ಜನ ಅಂದಾಜು ಮಾಡಿಯೇ ಶನಿವಾರ ಬೆಳಿಗ್ಗೆ ಬೇಕುಬೇಕಾದ ಕಚ್ಚಾ ಸಾಮಗ್ರಿಗಳನ್ನು ಒಟ್ಟು ಮಾಡಿದ. ಅವನ್ನೆಲ್ಲಾ ಬೇರೆ ಬೇರೆ ಹದಗಳಲ್ಲಿ ಮಿಶ್ರ ಮಾಡಿ ಎಲ್ಲರಿಗೂ ಮೂರು ಮೂರು ಪೊಟ್ಟಣ ಕೊಟ್ಟಿದ್ದ. ಅದರಲ್ಲಿ ಒಂದು ಅಡುಗೆಗೇ ಇದ್ದ ಸುಲಭ ಮಿಶ್ರಣ. ಇದು ಹೊರೆಯ ಹಂಚಿಕೆ ಮಾತ್ರ. ದೊಡ್ಡ ವಿರಾಮದಲ್ಲಿ ಒಲೆ ಹೂಡಿ, ಬೇಯಿಸಿ ತಿನ್ನುವಂತದ್ದು. ಇನ್ನೆರಡು ಎಲ್ಲರ ಸಾರ್ವಕಾಲಿಕ ಹಸಿವು, ಬಾಯಾರಿಕೆಗಳಿಗೆ ಸಿದ್ಧಪಾಕ. ಪ್ರೋಟೀನಿಗಾಗಿ ಹಲವು ಧಾನ್ಯಗಳ ಪುಡಿ, ಕೆಲವು ಬೀಜಗಳು ಇಡಿ, ಕೊಬ್ಬಿಗಾಗಿ ಹಾಲಿನ ಹುಡಿ, ನಾರಿಗಾಗಿ ಖರ್ಜೂರದ ಸೀಳು, ಗಾತ್ರಕ್ಕಾಗಿ ಅವಲಕ್ಕಿ, ರುಚಿಗಾಗಿ ಒಣ ದ್ರಾಕ್ಷಿ, ಶೀಘ್ರ ಚೈತನ್ಯಕ್ಕಾಗಿ ಗ್ಲುಕೋಸ್ ಪುಡಿ, ಇತ್ಯಾದಿಗಳ ಅದ್ಭುತ ಮಿಶ್ರಣ (ಅನಂತರದ ದಿನಗಳಲ್ಲಿ ಗನ್ ಪೌಡರ್ ಎಂದೇ ಖ್ಯಾತವಾಯ್ತು!). ಇದು ಹುಡಿಯಾಗಿಯೂ ಗಂಟಲಲ್ಲಿಳಿಯದಿದ್ದರೆ ತುಸುವೇ ನೀರು ಬೆರೆಸಿಕೊಂಡು ‘ಹಸಿ ಉಪ್ಪಿಟ್ಟಿನಂತೆಯೂ’ ಊಟ ತಿಂಡಿಗೆ ಬದಲಿಯಂತೆ. ಇನ್ನೊಂದು ಪಾನಕದ ಸಾಂದ್ರ ಪಾಕ. ಸ್ವಲ್ಪೇ ಪುಡಿ ಲೋಟ ನೀರಿಗೆ ಹಾಕಿ, ಹೆಚ್ಚಿನ ರುಚಿ ಸಮತೋಲನಕ್ಕೆ ಸಕ್ಕರೆಯೋ ನಿಂಬೆ ಹುಳಿಯೋ ಹಿಂಡಿಕೊಂಡರೆ ಪಾನಕ. ತತ್ವ ಸರಿ, ಸಮೀರನ ಶ್ರದ್ಧೆ, ಪ್ರಾಮಾಣಿಕತೆ ಪ್ರಶ್ನಾತೀತ. ಆದರೆ ‘ಆಚಾರವಿಲ್ಲದ ನಾಲಗೆ’ಗೆ ಏನು ಮಾಡ್ತೀರಿ! ಪ್ರಯೋಗದ ಯಶಸ್ಸು ಮಾತ್ರ ಸಂಶಯಾಸ್ಪದ ಎನ್ನುವಂತೆ ಬಹುತೇಕ ಪಾನಕ ಲೋಟಗಳು ಗುಟ್ಟಾಗಿ ಹೊಳೆಗೇ ಖಾಲಿಯಾದವು!
******

(ಮುಂದುವರಿಯಲಿದೆ)
Very very interesting & awe inspiring!
ReplyDeleteLooking forward to the next profile on " Veerappan's Kumaradhareya episode"
---Raghu Narkala
ಓದಿಸಿಕೊಂಡು ಹೋಗುವ ಲೇಖನ, ಹೀಗೆಯೇ ಮುಂದುವರಿಯಲಿ.
ReplyDeleteಹೆಚ್ಚಿನ ಚಾರಣಿಗರಿಗೆ ಕಾಡು ಒಂದು ಪಿಕ್ನಿಕ್ ಸ್ಪಾಟ್! ಶಬ್ದ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಮಾಡುವುದು (ಕಸ ಎಸೆಯುವುದು) ಅವರ ಹಕ್ಕು! - ಎಂಬ ಭಾವನೆ.
ReplyDeleteಕಾಡಿನೊಳಗೆ ಹೈ ಫೈ ಸಂಗೀತ ಕೇಳಿದರೆ ಅಲ್ಲಿ ಚಾರಣಿಗರ ನೃತ್ಯ ಮತ್ತು ಬೋಜನ ನಡೆಯುತ್ತಾ ಇದೆ ಎಂಬ ವಿಷಯ ಖಾತ್ರಿ! ಈ ರೀತಿ ನೀತಿ ಎಂದು ಬದಲಾಗುವುದೋ? - ಗೊತ್ತಿಲ್ಲ.
ಇನ್ನು ಕಳ್ಳ ಬೇಟೆಗಾರರ ಸುದ್ದಿ ಬಿಡಿ! ಅವರ ಸುದ್ದಿ ನಮಗ್ಯಾಕೆ?
ಪರಸರ ಕಾಳಜಿಯ ಉಲ್ಲೇಖ ಓದಿ ಸಂತಸ ಆಯಿತು.
ಮುಂದಿನ ವಾರ ಬರಲಿ ನಮ್ಮ ವೀರಪ್ಪನ್! - ಆ ಮೇಲೆ ಪ್ರತಿಕ್ರಯಿಸುವೆ. ಸದ್ಯ್ಯಕ್ಕೆ ನಮಸ್ಕಾರಗಳು. - ಪೆಜತ್ತಾಯ ಎಸ್, ಎಮ್.
ಕಳ್ಳ ಬೇಟೆಗಾರರ ಜೊತೆ ನಿಮಗಾದ "ಎನ್ಕೌಂಟರ್" ಓದಿ ಎಂದೋ ಓದಿದ, "ದ ವಿಲ್ಡರ್ನೆಸ್ಸ್ ಫ್ಯಾಮಿಲಿ" ಪುಸ್ತಕದಲ್ಲಿ ದಕ್ಷಿಣ ಆಫ್ರಿಕಾದ "ಕ್ರುಗರ್ ನ್ಯಾಷನಲ್ ಪಾರ್ಕ್"ನ "ಗೇಮ್ ವಾರ್ಡನ್ ಆಗಿದ್ದ "ಕೊಬುಸ್ ಕ್ರುಗರ್" ಎಂಬವನ ಪತ್ನಿ "ಕೋಬಿ ಕ್ರುಗರ್" ತನಗಾದ ಅನುಭವವೊಂದನ್ನು ವಿವರಿಸಿದ್ದು ನೆನಪಾಯಿತು.
ReplyDeleteಕೋಬಿ ರಜೆಯಲ್ಲಿ ತಮ್ಮ ಜೊತೆಗೆ ಉಳಿದಿದ್ದ ಮಕ್ಕಳನ್ನು ಸಂಜೆ ಹೊತ್ತಿನಲ್ಲಿ ಅಭಯಾರಣ್ಯ ಸುತ್ತಿಸುತ್ತಿರಬೇಕಾದರೆ ಜೀಪು ಕೆಟ್ಟು ಹೋಗುತ್ತದೆ, ಸಂಪರ್ಕ ಸಾಧನಗಳನ್ನು ಅವಳು ತಂದಿರುವುದಿಲ್ಲ. ಜೀಪಿನಿಂದ ಇಳಿದು ನಡೆದುಕೊಂಡು ಹೋಗೋಣವೆಂದರೆ ಸಂಜೆ ಹೊತ್ತು ವನ್ಯ ಪ್ರಾಣಿಗಳು ಬೇಟೆಗೆ ಹೊರಡುವ ಹೊತ್ತು, ತಾನು ಅನುಭವಸ್ತೆಯಾಗಿದ್ದರೂ ಜೊತೆಗಿಬ್ಬರು ಪುಟ್ಟ ಮಕ್ಕಳಿದ್ದಾರೆ, ರಾತ್ರಿ ಜೀಪಿನಲ್ಲೇ ಉಳಿಯಲು ಆಹಾರ ನೀರು ಯಾವುದೂ ಇಲ್ಲ.
ಈ ಸಂದಿಗ್ದ ಪರಿಸ್ತಿತಿಯಲ್ಲಿ ಅವಳಿಗೆ ಹತ್ತಿರದಲ್ಲೆಲ್ಲೋ ಇನ್ನೊಂದು ವಾಹನದ ಸದ್ದು ಕೇಳಿಸುತ್ತದೆ , ಆ ಕಡೆಗೆ ಓಡಿ ಆ ವಾಹನವನ್ನು ನಿಲ್ಲಿಸುತ್ತಾಳೆ, ಡ್ರೈವರನಿಗೆ ತಾವಿಲ್ಲಿ ಸಿಕ್ಕಿಬಿದ್ದಿರುವುದನ್ನು ಗೇಟಿನಲ್ಲಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಾಳೆ. ಡ್ರೈವರ ಆಯಿತೆಂದು ತಲೆಯಾಡಿಸುತ್ತಾನೆ.
ಆದರೆ ತನ್ನ ಸಮವಸ್ತ್ರ ಮತ್ತು ಕೈಯಲ್ಲಿರುವ ಪಿಸ್ತೂಲನ್ನು ನೋಡಿ ಆ ವಾಹನದ ಡ್ರೈವರ್ ಮತ್ತು ಇನ್ನಿತರ ಪ್ರಯಾಣಿಕರು ಯಾಕೆ "ನರ್ವಸ್ ನಾರಾಯಣ"ರ ರೀತಿ ವರ್ತಿಸುತ್ತಿದ್ದಾರೆ ಎಂದು ಅವಳಿಗೆ ಅರ್ಥವೇ ಆಗುವುದಿಲ್ಲ.
ಆ ವಾಹನ ಸಾಗುತ್ತಿದ್ದಂತೆ ಅದರ ಹಿಂಭಾಗದಲ್ಲಿ ರಕ್ತಸಿಕ್ತ ಟಾರ್ಪಾಲಿನ್ ಒಂದರಿಂದ ಏನನ್ನೋ ಮುಚ್ಚಿರುವುದು ಕಂಡು ಅವಳಿಗೆ ವಿಷಯದ ಅರಿವಾಗುತ್ತದೆ. ಆ ವಾಹನದಲ್ಲಿದ್ದವರು ಕಳ್ಳಬೇಟೆಗಾರರು!
ಈ ಕಳ್ಳಬೇಟೆಗಾರರು ಅರಣ್ಯ ಇಲಾಖೆಯ ಪರವಾಗಿ ಕೆಲಸ ಮಾಡುವ ತನಗೆ ಸಹಾಯ ಮಾಡಿದಂತೇ ಎಂದುಕೊಂಡು ಕೋಬಿ ನಿರಾಶಳಾಗುತ್ತಾಳೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಆ ಕಳ್ಳಬೇಟೆಗಾರರು ಹೋದ ಕಡೆಯಿಂದ ಧೂಳೆಬ್ಬಿಸಿಕೊಂಡು ಬಂದ ಇಲಾಖೆಯ ವಾಹನ ಅವರೆಲ್ಲರನ್ನೂ ರಕ್ಷಿಸುತ್ತದೆ!
chennagide!
ReplyDeletevanaramani vaasanthikeyaagi viharisudhannu , bhoorameya naguvannu yathechavaagi kanasu sadhyavaaguva "kaadu" aparoopadha sampaththu.Mundhina kanthina nireekshe hechchidhe.
ReplyDeleteVadi
Nice article........
ReplyDeleteರೋಹಿತರ ಪೂರಕ "ಸಾಹಸ"ಕ್ಕೆ ಭೇಷ್! ಕಾಲೇಜಿನ ಎನ್.ಸಿ.ಸಿ. ಅಧಿಕಾರಿಗಳು, ಕೆಡೆಟ್ ಗಳೇ ಹೀಗೆ ಪರಿಸರವನ್ನು "ಶುದ್ಧ"ಗೊಳಿಸಿದರೆ ಉಳಿದವರ ಗತಿ ಗೋವಿಂದ!
ReplyDeleteಹೀಗೆ "ಶುದ್ಧ" ಮಾಡಿದವರು ನಿಮ್ಮ ಲೇಖನವನ್ನು ಓದಿಯಾದರೂ, ಒಮ್ಮೆ ಸಾರ್ವಜನಿಕವಾಗಿ ಮುಖ ತೋರಿಸಿ "ನಾವೇ ಈ ಮಹತ್ಕಾರ್ಯ ಮಾಡಿದವರು" ಎಂದು ಕಾಲರ್ ಸರಿ ಮಾಡಿಕೊಂಡಿದ್ದರೆ, ನೋಡಿ ಸಂತೋಷಪಡಬಹುದಿತ್ತು!
ಮೋಹಿತ್ ಅವರ ಪ್ರತಿಕ್ರಿಯೆ ಓದಿ ತುಂಬಾ ಸಂತಸ ಆಯಿತು. ಎಂದಾದರೊಮ್ಮೆ ಕ್ರೂಗರ್ ಅರಣ್ಯ ನೋಡುವ ಆಸೆ !
ReplyDeleteರೋಹಿತ್ ಮತ್ತು ಗೆಳೆಯರಿಗೆ ಜಯವಾಗಲಿ . ಮು೦ದಿನ ಭಾಗ ಓದುವ ತವಕ, ಎ೦ದಿನವರೆಗೆ ಕಾಯಬೇಕು ?
ReplyDeleteಪೆಜತ್ತಾಯರೇ, ಕ್ರೂಗರ್ ಅರಣ್ಯಕ್ಕೆ ಭೇಟಿ ನೀಡುವ ಮೊದಲು 2004 ರಲ್ಲಿ ಅಲ್ಲಿ ನಡೆದ ಸಿಂಹಗಳ ಬೇಟೆಯ ಅತ್ಯಪರೂಪದ ವೀಡಿಯೋ ಒಂದನ್ನು ನೋಡಿ. ಈ ವೀಡಿಯೋ ತೆಗೆದವರು ಆ ಸಮಯಕ್ಕೆ ಸರಿಯಾಗಿ ಅಲ್ಲಿದ್ದ ಯಾರೋ ಪ್ರವಾಸಿಗರು.
ReplyDeleteಕಾಡುಕೋಣಗಳ ಮಂದೆಯಿಂದ ಸಿಂಹಗಳು ಹೇಗೋ ಕಷ್ಟಪಟ್ಟು ಬೇರ್ಪಡಿಸಿದ ಕರುವೊಂದು ನದಿ ನೀರಿಗೆ ಬಿದ್ದು ಅಲ್ಲಿರುವ ಮೊಸಳೆಗಳು ಅದಕ್ಕೆ ಬಾಯಿಹಾಕಿ ಸಿಂಹಗಳೂ ಆ ಕರುವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಮೊಸಳೆಯ ಜೊತೆಗೆ ನಡೆಸುವ ಜಗ್ಗಾಟ, ಅದರಲ್ಲಿ ಸಿಂಹಗಳು ಯಶಸ್ವಿಯಾದರೂ ಅಷ್ಟು ಹೊತ್ತಿಗೆ ಧೈರ್ಯ ತಂದುಕೊಂಡು ಒಗ್ಗಟ್ಟಾದ ಕಾಡುಕೋಣಗಳು ಸಿಂಹಗಳನ್ನು ಹಿಮ್ಮೆಟ್ಟಿಸಿ ಆ ಕರುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತವೆ.
ಈ ವೀಡಿಯೋದ ವಿಳಾಸ
http://www.youtube.com/watch?v=LU8DDYz68kM
ಪ್ರೀತಿಯ ಮೋಹಿತರೇ!
ReplyDeleteತಮ್ಮ ಪ್ರತಿಕ್ರಿಯೆ ಈಗ ತಾನೇ ಮೋಡಿದೆ.
ತಮಗೆ ಹಾರ್ದಿಕ ಧನ್ಯವಾದಗಳು.
ಒಗ್ಗಟ್ಟಿನಲ್ಲಿ ಬಲ ಇದೆ! - ಎಂಬ ಗಾದೆ ಸರಿ.
ನಮ್ಮ ದೇಶದಲ್ಲಿನ ಗೌರ್ ಎಂಬ ಕಾಡುಕೋಣಗಳು ಆಫ್ರಿಕಾದ ಬಫೆಲೋಗಳಿಗಿಂತ ತುಂಬಾ ಸಾಧು! - ಎಂತ ನನ್ನ ಗೆಳೆಯ ಟಾಮ್ ಹೋಮ್ಸ್ ಹೇಳುತ್ತಾ ಇದ್ದ.
ಆಫ್ರಿಕಾದಲ್ಲಿ ಬಫೆಲೋ ಕಂಡರೆ ಪಲಾಯನವೇ ಒಳ್ಳೆಯ ಉಪಾಯವಂತೆ!
ಆದರೂ, ಬಪೆಲೋಗಳು ಕರುವನ್ನು ರಕ್ಷಿಸಿದ್ದು ಅಸಮಾನ್ಯ ಧೈರ್ಯದ ನಿದರ್ಶನ.
ತಮಗೆ ಹೃತ್ಪೂರ್ವಕ ವಂದನೆಗಳು.
- ಪೆಜತ್ತಾಯ
i liked the article and appreciate your courage and interest .photos are also fine.
ReplyDelete