ಹವಾನಿಯಂತ್ರಕ ಕೈಕೊಟ್ಟಿತ್ತಂತೆ. ರಿಪೇರಿ ನಡೆದಿದೆಯಂತೆ. ನಾವು ದ್ವೀಪ ಸುತ್ತಿ ಬರುವಾಗ ಎಲ್ಲ ಕೂಲಿರುತ್ತಂತೆ. ಸಂಜೆ ಬಂದಾಗ ಅಂತೆಗೆ ಮತ್ತಷ್ಟು ಕಂತೆ - ಅರ್ಧಕ್ಕರ್ಧ ಸರಿಯಾಗಿಯಾಗಿದೆಯಂತೆ. ಇನ್ನೇನು ಒಂದೋ ಎರಡೋ ಗಂಟೆ, ಅಬ್ಬಬ್ಬಾಂದ್ರೆ ನಮ್ಮನ್ನು ಮಲಗಿಸಲು ಶೀತಮಾರುತ ಬರುವುದು ಖಾತಿ, ಅಂತೆ! ಪ್ರಸನ್ನನಿಗೆ ಮೆಟ್ಟಿಲ ಓಣಿಯಲ್ಲಿ ತಣ್ಣಗೆ ಗಾಳಿ ಬಂದಂತನ್ನಿಸಿತು. ವಾಸ್ತವದಲ್ಲಿ ನಡೆದಾಡುವ ಓಣಿಗಿಂತ ವಿಶಾಲವಾಗಿದ್ದ ಅಲ್ಲಿ ಹೊತ್ತಿಗೊಂದೊಂದು ಸಲ ಆ ಭ್ರಮೆ ಬರುತ್ತಿದ್ದದ್ದು ನಿಜ. ಭಾ(ಬ)ರೀ ಮೀಸೆಯವರು ಪತ್ನಿಯ ಬಯಕೆ ನಡೆಸಿಕೊಡಲು ಗಂಧಮಾದನ ಪರ್ವತಕ್ಕೆ ಲಗ್ಗೆಯಿಕ್ಕಿದವನಿಗೆ ಕಡಿಮೆಯಿಲ್ಲದ ಭೀಮಗತಿಯಲ್ಲಿ ಕುರ್ಚಿಹತ್ತಿ (ಪುಣ್ಯಕ್ಕದು ಮುರಿದು ಬೀಳಲಿಲ್ಲ), ಕೋಣೆಯೊಳಗಿನ ಶೀತಲ ಮಾರುತ ಬರುವ ಕಿಂಡಿ ಕಲಕಿದರು. ತಡವಾಗಿ ತಿಳಿಯಿತು, ಅದು ರಾಂಗ್ ಅಡ್ರೆಸ್ಸು; ಆತ ರಿಪೇರಿಗೆ ಹಿಡಿದದ್ದು ಒಂದು, ನಿಜ ಕಿಂಡಿ ಬೇರೊಂದು! ಸಿನಿಕರು ಎಲ್ಲರನ್ನೂ ಎಲ್ಲವನ್ನೂ ಬಯ್ದು, ಬಳಕೆದಾರರ ಹಕ್ಕು, ಮಾಹಿತಿ ಹಕ್ಕುಗಳೇ ಮೊದಲಾದ ಶಸ್ತ್ರಗಳನ್ನು ವೀರಾವೇಶದಲ್ಲಿ ಝಳಪಿಸಿ (ಊರು ತಲಪಿದ ಮೇಲೆ ಎಲ್ಲ ಮರೆತು!), ಸೋಮಾರಿಗಳ ಜೊತೆ ತಾರಸಿಯಲ್ಲೋ ಕೋಣೆಯಲ್ಲೋ ಸುಧಾರಿಸಿಕೊಂಡರು. ಮತ್ತಿನ ಪ್ರವಾಸದುದ್ದಕ್ಕೂ ಗಾಳಿಮಾತುಗಳನ್ನು ನಾವು ಹೆಕ್ಕುತ್ತಲೇ ಇದ್ದೆವು. ಹವಾನಿಯಂತ್ರಕದ ಬಿಡಿ ಭಾಗ ಕೊಚ್ಚಿ, ಮುಂಬೈಗಳಲ್ಲಷ್ಟೇ ಲಭ್ಯ - ಲಕ್ಷದ್ವೀಪದಲ್ಲಿ ಸುಳ್ಳು. ಸರಕಾರೀ ನಿರ್ವಹಣೆಯಲ್ಲಿ ಇದು ಹೀಗೆ ಬಹಳ ಕಾಲದಿಂದ ಕೈಕೊಡುತ್ತಲೇ ಇದೆ. ಮೇಲಿನವರದು ‘ಚಲ್ತಾ ಹೈ’ ಧೋರಣೆ. ಡೀಸೆಲ್ ಉಳಿತಾಯಕ್ಕಿದು ಒಳದಾರಿ ಎಂದಿತ್ಯಾದಿ ಪ್ರವಾಸ ಮುಗಿಯುವಾಗ ಅಂತೆಗಳ ಬೊಂತೆ ಬೆಳೆದದ್ದೇ ಲಾಭ.
ಕೈತೋಟದ ಹಸಿರು ಬೇಲಿಗೆ ಸಮವಾಗಿಯೇ ಇದ್ದ ಕಡಲಕಿನಾರೆ ಹೆಚ್ಚುಕಡಿಮೆ ನೇರವಾಗಿ ಎರಡೂ ದಿಕ್ಕಿಗೆ ಹಬ್ಬಿತ್ತು. ಅವರಿವರ ಮುಖ ನೋಡಿ, ನಮ್ಮಷ್ಟಕ್ಕೇ ಬಟ್ಟೆ ಬದಲಿಸಿ, ಎಲ್ಲರೂ ಕಡಲಪಾಲಾದೆವು. ಇಲ್ಲೂ (ಮರುದಿನದ ಕವರಟ್ಟಿ ದ್ವೀಪದಲ್ಲೂ) ಕಲ್ಪೆನಿಯ ಲಗೂನಿನ ಆವೃತ ಸ್ವರೂಪ ಇಲ್ಲವಾಗಿ ಅಚ್ಚ ಬಿಳಿ ಮರಳು (ಹವಳದ ಹುಡಿ), ಸ್ವಚ್ಛ ನೀಲ ಕಾಣಿಸುವ ನೀರು ನಮ್ಮ ವಿಹಾರಕ್ಕೆ ಮೀಸಲು. ಮೊಣಕಾಲಾಳ ಮೀರದ ಹವಳದ ನೆಲಗಟ್ಟು, ದೂರದಲ್ಲೇ ‘ಸೊಕ್ಕು’ಕಳಚಿಕೊಂಡು ಕೇವಲ ಆಟಕ್ಕೆಳಸುವ ತೆರೆಗಳು ನಮಗೆ ಯಾವ ದಿಕ್ಕಿನಲ್ಲೂ ಎಷ್ಟು ದೂರಕ್ಕೂ ಓಡಾಡಲು ಅವಕಾಶ ಮಾಡಿಕೊಡುತ್ತದೆ. ಆದರೆ ಲಗೂನಿನ ಜಲಸಸ್ಯಗಳ, ಮುಳುಗುನೋಟಕ್ಕೆ ವಿಶೇಷ ರಂಗೇರಿಸುವ ಹವಳ ಮತ್ತು ಮೀನುಗಳ ವೈವಿಧ್ಯ ಇರಲಿಲ್ಲ. ಅಶ್ಚರ್ಯಕರವಾಗಿ ಇಲ್ಲಿ, (ಮರುದಿನದ ಕವರಟ್ಟಿಯಲ್ಲೂ) ಸಾಮಾನ್ಯ ವಿಹಾರದ ಕಡಲಿನಾಳದಲ್ಲಿ ನೋಡಲೇನೂ ಇರದ ಸ್ಥಿತಿ. ಆದರೂ ಬೇಕೆಂದರೆ ಸ್ನಾರ್ಕೆಲ್ಲಿಗೆ ಪ್ರತ್ಯೇಕ ಬಾಡಿಗೆಯಂತೆ! (ಕಲ್ಪೆನಿಯಲ್ಲಿ ಉಚಿತ!) ಎಲ್ಲರಿಗೂ ಕಿನಾರೆಯ ಕಣ್ಣುಕುಕ್ಕುವ ಬಿಳಿ ಸೇರಿ, ಬಿಸಿಲ ಖಾರ ಹೆಚ್ಚಿದಂತನಿಸಿತ್ತು. ಮತ್ತೆ ಕಲ್ಪೆನಿಯ ಲಗೂನಿನ ರುಚಿಯ ಮುಂದೆ ಇದು ತುಂಬ ಚಪ್ಪೆಯೂ ಆಯ್ತು! ದಂಡೆಯಲ್ಲಿ ನೆರಳಿಗೆ ಒಂದೆರಡು ಮರ ಬೆಳೆಸಿದ್ದರು, ತೆಂಗಿನ ಗರಿ ಹೊದೆಸಿದ ಚಪ್ಪರವನ್ನೂ ನಿಲ್ಲಿಸಿ, ಕುರ್ಚಿ, ಸಲಿಕೆಯ ಮಂಚ ಹಾಕಿದ್ದರು. ಏನಲ್ಲದಿದ್ದರೂ ಇಲ್ಲಿನ ಸಮುದ್ರದ ಪ್ರಾಕೃತಿಕ ಶುಚಿ ಮತ್ತು ಭದ್ರತೆಯ ಸ್ಥಿತಿ ಮಂಗಳೂರಿನಲ್ಲಿ ಇಲ್ಲವೆನ್ನುವ ಸಂಕಟಕ್ಕೋ ಕೊಟ್ಟ ದುಡ್ಡಿಗೆ ಇಷ್ಟಾದರೂ ದಕ್ಕಲಿ ಎಂಬ ಹಠಕ್ಕೋ ಹೆಚ್ಚಿನವರು ಊಟದ ಕರೆ ಬರುವವರೆಗೂ ನೀರಿನಲ್ಲಿ ಹೊರಳಾಡಿದೆವು, ಕಯಾಕ್ ಚಾಲನೆ ನಡೆಸಿದೆವು.
ಸ್ನಾನ, ಊಟ ಮತ್ತೆ fake dance. ಇಲ್ಲಿ ಜನಪದ ನೃತ್ಯ ಕಲ್ಪೆನಿ ತಂಡಕ್ಕಿಂತ ಹೆಚ್ಚು ಆಧುನಿಕಗೊಂಡಂತಿತ್ತು (ಅಂದರೆ ಗುಣವೋ ಅವಗುಣವೋ ನೀವೇ ಅಂದಾಜಿಸಿಕೊಳ್ಳಿ). ಮತ್ತೆ ಅಲ್ಲಿನ ದೀಪಸ್ತಂಭ ದರ್ಶನಕ್ಕೆ ನಮ್ಮನ್ನು ಒಯ್ದರು. ಇದರ ಇತಿಹಾಸ ಮತ್ತು ಮಹಿಮೆ ಬಗ್ಗೆ ಈಗಾಗಲೇ ಗೆಳೆಯ ಕೃಶಿ ತಮ್ಮ ಬ್ಲಾಗಿನಲ್ಲಿ ಸುಂದರ ಚಿತ್ರಗಳೊಂದಿಗೆ ಹಾಕಿರುವುದರಿಂದ ನೀವು ಈ ಅಂಕದ ಕೊನೆಯಲ್ಲಿ ಕೊಟ್ಟ ಸೇತು ಬಳಸಿ ಒಂದು ಸಣ್ಣ ಬ್ರೇಏಏಏಏಕ್ ತೆಗೆದುಕೊಂಡು ಮರಳುವುದುತ್ತಮ!
ದೀಪ ಸ್ತಂಭಕ್ಕೆ ನಮಗಿಂತ ಮೊದಲೇ ನಾನು ಹಿಂದೆಯೇ ಹೇಳಿದ ‘ನಮ್ಮೊಡನಿದ್ದೂ ನಮ್ಮಂತಾಗದ’ ಅಧಿಕಾರಿ ಮಹಾಶಯನ ಕುಟುಂಬ ತಲಪಿತ್ತು. ಖಾವಂದರ ಎಂಜಾಯ್ಮೆಂಟಿಗೆ ನಮ್ಮಂತ ಹುಲುಮಾನವರು ಅಡ್ಡಿಯಾಗದಂತೆ ಸ್ಥಳೀಯ ಆಡಳಿತಗಾರರು ನಮ್ಮನ್ನೆಲ್ಲ ಬಾಗಿಲಲ್ಲೇ ತಡೆಹಿಡಿದದ್ದು ನಿಜಕ್ಕೂ ಅವಮಾನಕಾರಿ. ನೂರಿಪ್ಪತ್ತೈದು ವರ್ಷಪ್ರಾಯದ (೧೮೮೫) ದೀಪಸ್ತಂಭವೇನಾದರೂ (ನೆನಪಿನ ಶಕ್ತಿಯಿದ್ದು) ಮಾತಾಡಬಹುದಾಗಿದ್ದರೆ, ಸೌಲಭ್ಯಗಳ ಭಾರೀ ಕೊರತೆಯ ದಿನಗಳಲ್ಲೂ ಅದರ ರಚನೆಯ ಅಗತ್ಯವನ್ನು ಮನಗಂಡ, ರಚಿಸಿದ, ಪ್ರಾಕೃತಿಕ ವೈಪರೀತ್ಯಗಳಲ್ಲೂ ಊರ್ಜಿತಲ್ಲಿಟ್ಟ, ಕಾಲಮಾನಕ್ಕೆ ತಕ್ಕಂತೆ ನವೀಕರಿಸಿದ, ರಾಷ್ಟ್ರ-ಅಂತಾರಾಷ್ಟ್ರ ಮಟ್ಟದದಿಂದಲೂ ಈ ದೀಪಸ್ತಂಭವನ್ನು ನೋಡಿಹೋಗಲೆಂದೇ ಬಂದ ನಿಜ ಮಹಾತ್ಮರ ಹೆಸರುಗಳ ಪಟ್ಟಿಯನ್ನೇ ಈ ಸಾಹೇಬನ ಮುಖಕ್ಕೆ ನಿವಾಳಿಸುತ್ತಿತ್ತೋ ಏನೋ. ದೀಪಸ್ತಂಭ ಪ್ರವೇಶಕ್ಕೆ ವ್ಯಕ್ತಿಗೆ, ಕ್ಯಾಮರಾಕ್ಕೆ ಮತ್ತೆ ವಿಡಿಯೋಗೆ ಪ್ರತ್ಯೇಕ ದರಗಳಲ್ಲದೆ ವಿದೇಶೀಯರಿಗೆ ಹೆಚ್ಚುವರಿ ದರವೂ ನಿಯಮಾನುಸಾರ ವಸೂಲಾಗುತ್ತಿತ್ತು. ಇವುಗಳ ಸರಿತಪ್ಪನ್ನೇನೋ ನಾವು ಕಾನೂನು ಮತ್ತು ನೈತಿಕ ಮಟ್ಟಗಳಲ್ಲಿ ಚರ್ಚಿಸಲು ಬರುತ್ತದೆ. ಆದರೆ ಈ some are more equals ಎಂದು ನಡೆಯುವವರು, ನಡೆಸಿಕೊಳ್ಳುವವರು ಇರುವವರೆಗೆ ಎಲ್ಲಾ ಚರ್ಚೆಗಳು ಕೇವಲ ಅಕಾಡೆಮಿಕ್ ಮಾತ್ರ ಆಗಿ ಉಳಿಯುತ್ತವೆ! ಪರಿಸರ ರಕ್ಷಣೆ ಬಗ್ಗೆ ಅಂಗಡಿಯಲ್ಲಿ ನನಗೇ ಕೊರೆದು ಕೊನೆಯಲ್ಲಿ ನನ್ನಲ್ಲೇ “ಒಂದು ಪ್ಲ್ಯಾಸ್ಟಿಕ್ ಕವರ್ ಕೊಡೀ” ಎಂದು ಕೇಳಿದ ಹಾಗಿರುತ್ತದೆ.
ಮೊದಲ ಐದೋ ಆರೋ ಅಂತಸ್ತುಗಳಲ್ಲಿ ವಿಸ್ತಾರ ಸ್ತಂಭದ ನಡುವೆ ತಲಾ ಸುಮಾರು ಇಪ್ಪತ್ತೊಂಬತ್ತು ಮೆಟ್ಟಿಲುಗಳ ಸುರಳಿ ಮೆಟ್ಟಿಲು ಕೊಟ್ಟಿದ್ದಾರೆ. ಮೇಲೆ ಹೋದಂತೆ ಸ್ತಂಭ ಸಪುರವಾದ್ದರಿಂದ ಮತ್ತೆ ಎರಡಂತಸ್ತು ಓರೆಯಲ್ಲಿಟ್ಟ ಏಣಿಗಳು. ದೀಪದ ಕೋಣೆ, ಹೊರಗಿನ ಬಾಲ್ಕನಿ ಸುತ್ತಿ ಮರಳಿದೆವು. ಅಲ್ಲಿ ದೀಪ ರಾತ್ರಿ ಮಾತ್ರ ಉರಿದು, ಹತ್ತೆಂಟು ಮೈಲಿನ ವ್ಯಾಪ್ತಿಯಲ್ಲಿ ಸಮುದ್ರಯಾನಿಗಳಿಗಷ್ಟೇ ಮಾರ್ಗದರ್ಶಿಸುತ್ತದೆ. ಆದರೆ ಒಂದೂಕಾಲು ಶತಮಾನ ಪ್ರಾಯದ ಆ ಸ್ತಂಭ ಕಂಡು, ಏರಿ ಮತ್ತು ದ್ವೀಪ ದರ್ಶಿಸಿದ ನೆನಪು ನಮ್ಮಲ್ಲಿ ಬಹುಕಾಲದವರೆಗೆ ನಂದಾದೀಪವಾಗುವುದರಲ್ಲಿ ಸಂಶಯವಿಲ್ಲ.
ಪ್ರವಾಸದ ಮೂರನೇ ಬೆಳಗು ದ್ವೀಪಸ್ತೋಮದ ರಾಜಧಾನಿ, ಕವರಟ್ಟಿಯಲ್ಲಾಯ್ತು. ಇಲ್ಲಿ ನಾವು ಬೋಟಿಳಿವ ದಕ್ಕೆಯ ಒತ್ತಿನಲ್ಲೇ ನಮ್ಮ ವಿಹಾರದ ರಿಸಾರ್ಟೂ ಇತ್ತು (ಸಾರೋಟು ಸವಾರಿ ಇರಲಿಲ್ಲ). ಮಿನಿಕಾಯ್ ಹಾಗೇ ಇಲ್ಲೂ ಸ್ವತಂತ್ರ ಪುಟ್ಟ ಮನೆಗಳ ವ್ಯವಸ್ಥೆಯಿದ್ದರೂ ಎಲ್ಲ ಸೇರಲೊಂದು ಪ್ರತ್ಯೇಕ ನೆಲೆ (ಕೈತೋಟವೂ) ಇರಲಿಲ್ಲ. ಪ್ರವಾಸೀ ಋತುಮಾನಕ್ಕೊದಗುವಂತೆ ತೆಂಗಿನ ಗರಿಗಳ ಚಪ್ಪರ ನಿಲ್ಲಿಸಿದ್ದಲ್ಲೇ ಕುರ್ಚಿ ಮೇಜು ಜೋಡಿಸಿ, ನಮಗೆ ಉಪಚಾರ ನಡೆಸಿದರು. ಇಲ್ಲಿನ ಕಾರ್ಯಕ್ರಮ ಪಟ್ಟಿಯಲ್ಲಿ ಗಾಜಿನ ತಳದ ದೋಣಿ ಸವಾರಿ, ಸ್ನಾರ್ಕೆಲ್, ಸ್ಕೂಬಾ ಮತ್ತು ಊಟ ಪೂರ್ವಾಹ್ನಕ್ಕೆ ನಿಗದಿಯಾಗಿತ್ತು. ಮಿನಿಕಾಯ್ ಸೋಲಿನಿಂದ ಪಾಠ ಕಲಿತ ಪ್ರಸನ್ನ ಇಲ್ಲಿ ಸ್ಕೂಬಾಕ್ಕೆ ಹೆಸರು ನೊಂದಾಯಿಸುವಲ್ಲಿ ಸರ್ವಪ್ರಥಮನಾಗಿದ್ದ. ಆದರೆ ಮಿನಿಕಾಯ್ನಲ್ಲಿ ಒಂದು ಗಂಟೆಗಿದ್ದ ಬಾಡಿಗೆ ಇಲ್ಲಿ ದ್ವಿಗುಣಗೊಂಡದ್ದು ತಿಳಿಯುತ್ತಲೇ (ರೂ ಒಂದೂವರೆ ಸಾವಿರ) ಅಷ್ಟೇ ಚುರುಕಾಗಿ ಹಿಂದೆ ಸರಿದ. (ಆದರೆ ಎಲ್ಲ ಮುಗಿದಮೇಲೆ ಸ್ಕೂಬಾದಲ್ಲಿ ಭಾಗಿಗಳಾದವರು ಯಾರೋ ಆಕ್ಷೇಪಿಸಿದ್ದಕ್ಕೆ ಸಮಜಾಯಿಸುವಂತೆ ಸಂಘಟಕರು ಅರ್ಧ ಹಣ ವಾಪಾಸು ಕೊಟ್ಟಾಗ ಪಶ್ಚಾತ್ತಾಪಪಡುವಲ್ಲೂ ಪ್ರಸನ್ನ ಪ್ರಥಮ!)
ಕಾರ್ಯರಂಗಕ್ಕೆ ತೊಡಗುವಲ್ಲಿ ಈ ಸಂಘಟಕರ ಜಡ ಹಿಂದಿನೆರಡು ದ್ವೀಪದವರಿಗೇನೂ ಬಿಟ್ಟಿರಲಿಲ್ಲ! ಗಾಜಿನ ತಳದ ದೋಣಿಯಾನ ಒಟ್ಟು ಪ್ರವಾಸ ಯೋಜನೆಯ ಅಂಗವಾಗಿ ಎಲ್ಲರಿಗೂ ಉಚಿತವಾಗಿ ಸಿಗುವುದಿತ್ತು. ಆದರೆ ಆ ದೋಣಿಯ ಬರವನ್ನು ಅನಿರ್ದಿಷ್ಟ ಕಾಯುವ ಸಂಕಟ! ಅಲ್ಲೇ ತೆರೆಯುರುಳಿಸುತ್ತಾ ಕಡಲು ಕರೆದಾಗ, “ಇಲ್ಲ, ಗಾಜಿನ ದೋಣಿ ತಪ್ಪೀತು” ಎಂದೆವು. ನೀಲಬಣ್ಣದ ಕಯಾಕುಗಳು ಹೊಯ್ಗೆಗೆ ಮೂಗೊರಸುತ್ತಾ ಅನುನಯಿಸಿದಾಗ “ಇಲ್ಲ, ಮತ್ತೆ ಸ್ನಾರ್ಕೆಲ್ಗೆ ದಮ್ಮು ಕಡಿಮೆಯಾದೀತು” ಎಂದೆವು. ಮೊದಲೇ ಸುಟ್ಟ ಮೈಯಿದ್ದರೂ ನಿರ್ದಯಿ ಸೂರ್ಯನನ್ನು ತೆಂಗಿನ ಮರಗಳ ನೆಪದಲ್ಲಿ ಮರೆತಂತೆ ಮಾಡಿ ಬೀಚ್ ವಾಲಿಬಾಲ್ ಆಡಿದೆವು. ಹಿರಿಯರು ಕಳೆದುಹೋದ ಬಾಲ್ಯ ಶೋಧಿಸುವಂತೆ, ಕಿರಿಯರು ಇರಬೇಕಾದ್ದೇ ಹೀಗೆಂಬಂತೆ ಮರಳಿನಾಟ ಆಡಿದೆವು. ಕಪ್ಪೆಗೂಡು ತೋಡಿದೆವು, ಅವರಿವರ ಕಾಲು ಹೂಳಿದೆವು, ಮರಳ ಕೋಟೆ ಎಬ್ಬಿಸಿ ಕಹಳೆ ಬಾರಿಸಿದೆವು. ಇನ್ನು ಯುದ್ಧವೇ ಸರಿ ಎನ್ನುವಾಗ ಗಾಜಿನತಳದ ದೋಣಿ ಬಂದದ್ದು ಬರಿಯ ಕಾಕತಾಳೀಯವಿರಲಾರದು!
ಗಾಜಿನತಳದ ದೋಣಿಯಲ್ಲಿ ನೋಡಿದ ಆಳದಲ್ಲೇ ಸ್ನಾರ್ಕೆಲ್ ಬಳಸುವ ಅವಕಾಶ ಇಲ್ಲಿತ್ತು. ರುಸುಮು ಮಾತ್ರ ತಲಾ ರೂ ಇನ್ನೂರು. ಅನಂತನಿಗೆ ಗಾಜಿನ ತಳದಿಂದ ನೋಡಿದ್ಮೇಲೆ ಇನ್ಯಾಕೆ ಸ್ನಾರ್ಕೆಲ್ ಎಂಬ ಉಡಾಫೆ. ಬಸವರಾಜರಿಗೆ ಬದಲಿ ಬಟ್ಟೆ ತಂದಿಲ್ಲ ಎಂಬ ನೆಪ, ವಾಸುದೇವರಾಯರಿಗೆ ಸ್ಪಷ್ಟ ಭಯ. ಆದರೆ ಎಲ್ಲ ವಿಶೇಷ ಒತ್ತಾಯ ಹೇರಿ ಮೂವರನ್ನೂ ಹಿಂದುಳಿಯಲು ಬಿಡಲಿಲ್ಲ. ಅಜ್ಜ, ಅಜ್ಜಿ, ಸಣ್ಣ ಮೂರು ಪುಳ್ಳಿಯಂದಿರು ಮತ್ತು ನೀತಿ ಮಾತ್ರ ಹಿಂದುಳಿದರು. ಸ್ನಾರ್ಕೆಲ್ಲಿಗೆ ಒಬ್ಬ ಒಳ್ಳೆಯ ಶಿಕ್ಷಕ ಮತ್ತು ಕೆಲವು ಸಹಾಯಕರೂ ಸ್ನಾರ್ಕೆಲ್ ಕಟ್ಟಿಕೊಂಡೇ ಜೊತೆಗೊಟ್ಟರು. ಸ್ನಾರ್ಕೆಲ್ ನೋಡಲು ಬಹಳ ಸರಳವಾಗಿ ಕಂಡರೂ ಆ ಕನ್ನಡಕ ಮತ್ತು ಬಾಯಿಕೊಳವೆಯ ಸಂಯೋಜನೆಯ ಯೋಗ್ಯತೆ ಮತ್ತು ಮಹತ್ವ, ಶುಚೀಕರಣ ಮತ್ತು ಬಳಕೆಯನ್ನು ದೋಣಿ ಹೋಗುತ್ತಿದ್ದಂತೆಯೇ ಶಿಕ್ಷಕ ಚೆನ್ನಾಗಿಯೇ ಕಲಿಸಿದ. ಮತ್ತೆ ಯೋಗ್ಯ ಕೊರಕಲೊಂದರ ಬಳಿ ದೋಣಿಯ ಲಂಗರು ಇಳಿಬಿಟ್ಟು ನಿಲ್ಲಿಸಿದರು. ಅಲ್ಲಿ ನೀರೊಳಗೇ ಇದ್ದ ಎತ್ತರದ ಬಂಡೆ ಮಂಡೆಗೆ, ಅಂದರೆ ದೂರದಿಂದ ಕಾಣುವಂತೆ ನಮ್ಮ ಮೊಣಕಾಲಾಳದ ನೀರಿಗೇ ನಮ್ಮನ್ನು ಇಳಿಸಿಕೊಂಡರು.
ನಾನು ಪಾಠ ನೆನಪಿಸಿಕೊಂಡೆ. ಬಾಯಲ್ಲಿ ಉಸಿರಾಟ, ತೇಲ್ಗವಚದವಿರುವುದರಿಂದ ಈಜುಹೊಡೆಯುವ ಆವಶ್ಯಕತೆಯಿಲ್ಲ. ದೋಣಿಯಂಚಿನ ಪುಟ್ಟ ಏಣಿ ಇಳಿದೆ. ಇಂಜಿನ್ ಆರಿಸಿ, ಲಂಗರ್ ಕಚ್ಚಿದ ದೋಣಿ ಸ್ಥಿರವೆಂದರೂ ಅಲೆಯೊಲೆತದಲ್ಲಿ ಒಮ್ಮೆ ಒಂದಡಿ ಮೇಲೆ ಮರುಕ್ಷಣದಲ್ಲಿ ಎರಡಡಿ ಕೆಳಕ್ಕಿಳಿಯುತ್ತಿತ್ತು. ಏಣಿಯಂಚಿಗೇ ಇದ್ದ ಸಹಾಯಕನ ಕೈ ನಿರಾಕರಿಸಿ, ನೀರಿನ ಮೇಲೆ ಮೈಚಾಚಿದೆ. ಸುಮಾರು ಇಪ್ಪತ್ತಡಿ ದೂರದಲ್ಲೇ ಮೊಣಕಾಲಾಳದ ನೀರಲ್ಲಿ ನಿಂತ ಶಿಕ್ಷಕನನ್ನು ಗುರಿಮಾಡಿ, ಮುಖ ನೀರೊಳಗೆ ಮುಳುಗಿಸಿ, ಏಣಿಯನ್ನೇ ಕಾಲಲ್ಲಿ ನೂಕಿ ಹಗುರವಾಗಿ ಈಜತೊಡಗಿದೆ. ನೀರ ಪಾರದರ್ಶಕತೆ ಮತ್ತು ಭೂತಗನ್ನಡಿಯಂತೆ ವರ್ತಿಸುವ ಗುಣ ವಾಸ್ತವದ ಅಂತರವನ್ನು ಕಡಿಮೆ ಮಾಡುತ್ತದೆ, ಗಾತ್ರಗಳನ್ನು ದ್ವಿಗುಣಗೊಳಿಸುತ್ತದೆ! (ಇದರ ಅರಿವಿಲ್ಲದೆ ನಾನು ಕಲ್ಪೆನಿಯ ಲಗೂನಿನಲ್ಲಿ ಕಣ್ಗಾಪನ್ನು ನನ್ನ ಕನ್ನಡಕದ ಮೇಲೇ ಅಳವಡಿಸಲು ಒದ್ದಾಡಿದ್ದೆ) ನಾನೋ ಡಾಗ್ ಪೆಡಲ್ ಸ್ಪೆಶಲಿಸ್ಟ್; ಕಾಲು ಬಡಿಯುವಲ್ಲಿ ಗದ್ದಲ ಮಾತ್ರ, ಕೈ ತೊಳಸುವಲ್ಲಿ ಮುನ್ನೂಕು ಕಡಿಮೆ! ಕಿವಿಮುಳುಗಿದ್ದೇ (ಕೆಲವರು ಹೆದರಿದಂತೆ ಕಿವಿಯೊಳಗೆ ನೀರು ಸೇರುವುದಿಲ್ಲ) ಜನರ ಕರೆ ಸೂಚನೆಗಳು, ಅಲೆಯಪ್ಪಳಿಕೆಗಳು ಕೇಳುವುದಿಲ್ಲ. ನೀರಘನತೆಯಲ್ಲಿ ಸೇರಿಹೋದ ದೃಷ್ಟಿಗೆ ಮೇಲೆ ಕಾಣುವ ತೂಗುತುಯ್ತಗಳಿಲ್ಲ. ತೆಳು ನೀಲ ಬೆಳಕಿನ ಲೋಕ. ಅಲ್ಲಿ ಹಗುರವಾಗಿ ಬಳಕುವ ಹಸಿರು, ನಿತ್ಯ ಓಡಾಟದ ಮೀನು, ದೃಷ್ಟಿ ಹರಿದಲ್ಲೆಲ್ಲ ಅಜ್ಞಾತ ಸೂತ್ರದಾಟದ ವೈಭವ. ಒಮ್ಮೆ ನೀರ ನಡುವೆ, ದೋಣಿಯಿಂದ ದೂರ ನಿಂತು ಸಾವರಿಸಿಕೊಂಡು ಬರುತ್ತೇನೆ ಎಂದುಕೊಂಡೆ. ಭಾರೀ ಗೋಧೀ ಮುದ್ದೆಯ ಮೇಲೆ ಮುದ್ದೆಯನ್ನು ಪೇರಿಸಿಟ್ಟಂತ ಬಂಡೆಯ ಅಂಚು ನೋಡಿ “ಓ ಬಂತು” ಎಂದು ಕಾಲು ಇಳಿಬಿಟ್ಟರೆ ಬಂಡೆ ಸಿಗಲೇ ಇಲ್ಲ. ಮತ್ತಷ್ಟು ಮುಂದುವರಿಯೋಣವೆಂದು ಹೆಚ್ಚಿನ ನೂಕುಬಲಕ್ಕೆ ಕೈ ಚಾಚಿದಾಗ ಇನ್ಯಾರದೋ ದಪ್ಪದ ಕೈ ಕಣ್ಣೆದುರು ಸುಳಿದಂತನ್ನಿಸಿ, ತುಸು ಗಾಬರಿಯಲ್ಲೇ ಮುಖ ಎತ್ತಿ ನೋಡಬೇಕಾಯ್ತು! ಶಿಕ್ಷಕ ನಸುನಕ್ಕು, ನನಗೆ ಜಾಗ ತೆರವುಮಾಡಿ ಇನ್ಯಾರದೋ ಸಹಾಯಕ್ಕೆ ಈಜಿ ಹೋದರು.
ಮಾತಿನ ಮಿತಿಯಲ್ಲಿ ಕೊರತೆಯಾದ್ದನ್ನು ತುಂಬಿಕೊಳ್ಳಲು ಈಗಷ್ಟೇ ಪ್ರಸನ್ನ ತನ್ನ ಬ್ಲಾಗಿಗೇರಿಸಿದ ಎರಡನೇ ಕಂತಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.
ಕೃಶಿಯಂತೂ ಲಕ್ಷದ್ವೀಪವನ್ನೇ ಆವಾಹಿಸಿಕೊಂಡವರಂತೆ ಈಗಾಗಲೇ ಮೂರು ಕಂತಿನಲ್ಲಿ ಧಾರಾಳ ಚಿತ್ರಗಳನ್ನೂ ಸಾಹಿತ್ಯವನ್ನೂ ಇಂಗ್ಲಿಶ್ನಲ್ಲಿ ಹರಿಬಿಟ್ಟದ್ದನ್ನು ನೀವು ನೋಡಿದ್ದೀರಿ, ಓದಿದ್ದೀರಿ. ನನ್ನ ಭಾವನಾ ಪ್ರಧಾನವಾದ ನಿರೂಪಣೆಗೆ ವಿಭಿನ್ನವಾಗಿ ಅವರದು ಹೆಚ್ಚು ವೈಜ್ಞಾನಿಕ ಮಾಹಿತಿಪೂರ್ಣ ಮತ್ತು ಚಿತ್ರಗ್ರಾಹಿಗಳಿಗಂತೂ ಬಲು ದೊಡ್ಡ ಆಕರಗ್ರಂಥವೇ ಆಗುವ ಅಪಾಯವಿದೆ! ಇನ್ನೂ ಅಲ್ಲಿಗೆ ಹೋಗದವರು ಇದ್ದರೆ (ಇರಲಾರದು!), ಕೂಡಲೇ ಧಾವಿಸಲು ಇಲ್ಲಿ ಕ್ಲಿಕ್ಕಿಸಿ
ಚಿತ್ರ ಲೋಕಕ್ಕೆ ಪಾರುಗಾಣಿಸಿದ ನನ್ನನ್ನು ಗಾದೆ ಮಾತಿನಂತೆ (ನದಿ ದಾಟಿದ ಮೇಲೆ ದೋಣಿಯವ ಮಿಂಡ) ಉಪೇಕ್ಷಿಸದೆ ಮಾತಿನ ಹಾಸಲು ಕೊಟ್ಟೇ ಕೊಡ್ತೀರಲ್ಲಾ?
ನಿಮ್ಮನ್ನು ಉಪೇಕ್ಷಿಸಲುoಟೇ?! ಸ್ವಾರಸ್ಯಪೂರ್ಣ ಬರವಣಿಗೆ, ಪ್ರಸನ್ನ ಹಾಗೂ ಕ್ರುಶಿಯವರ ಚಿತ್ರಗಳೊಂದಿಗೆ ಭರ್ಜರಿಯಾಗಿತ್ತು. ನಮಸ್ಕಾರ.
ReplyDeleteಮಾಲಿಕೆ ತುಂಬಾ ಚೆನ್ನಾಗಿದೆ
ReplyDeleteನೀವು ಹೇಳಿದಂತೆ ಪ್ರವಾಸ ಕಥನದ ಜಾಡು ಬದಲಿಸುತ್ತಿದ್ದೀರಿ
ಇದು ಪ್ರವಾಸ ಕಥನಕ್ಕೂ, ಪರಿಸರ ಕಥನಕ್ಕೂ ಒಳ್ಳೆಯ ಬೆಳವಣಿಗೆ
ನಮಸ್ಕಾರ
ನಿಮ್ಮ ಪ್ರವಾಸ ಕಥನದ ವಿವರಗಳನ್ನು ಓದುತ್ತಾ ಹೋದಂತೆ, ಅವನ್ನೆಲ್ಲಾ ಪ್ರತ್ಯಕ್ಷ ಕಂಡಂತೆ, ಅನುಭವಿಸಿದಂತೆಯೇ ಆಯಿತು. ನಾನೆಲ್ಲಾದರೂ ಮುಂದೆ ಲಕ್ಷದ್ವೀಪಕ್ಕೆ ಹೋದದ್ದಾದರೆ, ಇಲ್ಲಿಗೆ ಹಿಂದೊಮ್ಮೆ ಬಂದಿದ್ದೆನಲ್ಲಾ ಎಂದನಿಸಬಹುದು.
ReplyDeleteDear Ashoka Vardhanagariki, Vandemataram.
ReplyDeleteI am appreciated by my relatives, well wishers and friends for my patience to read and tour. I undertake on an average 5,000 K.m. journey, by road and rail. My friends call Desa Thimmari- Alemari. In my 7oth year I am reading "The Framing of India's Constitution" in Six Volumes, edited by Benegal Siva Rao, a Journalist and trade union leader and a member of the Constituent Assembly and represented Mangalore in the First Lok Sabha. With all the humility at my command, I tell them admire the patience of the writer of the book. Still more was the labour of the 308 members,( every one of them was a genius) of the Constituent Assembly. How many tons of papers would have been spent in those three years. Siva Rao's brother Justice Narasingha Rao was the Constitutional Advisor to the Constituent Assembly. He was provided a furnished house and drew Rs.250/- as monthly conveyance allowance. Secretary of the Assembly HVR Ayyangar's remuneration was Rs.4,000/- p.m. If you find time please glance at it. Price at Rs.5,000/-. They are published by Universal Law Publishing Co. Pvt. Ltd., Delhi. They had time, talent and treasure. It is all psychological. My social studies teacher in National High School, Barkur Rajeeva Shetty used to say the Lazy people in this country do not find time to die. So their number is increasing.
This long and boring introduction to adore your patience, not only tour, but to write also.
Jai Hind, Kalkura, Kurnooll. 518001.
ಪ್ರವಾಸ ಕಥನ ಹೇಗಿರಬೇಕೋ ಹಾಗೆಯೇ ಇರುವುದರಿಂದ (ಹೆಚ್ಚುಕಮ್ಮಿ) ಐದೂ ಭಾಗಗಳನ್ನು ಅನುಕ್ರಮವಾಗಿ ಒಂದೇ ಪಟ್ಟಿನಲ್ಲಿ ಓದಿದೆ. ಲಕ್ಷದ್ವೀಪಕ್ಕೆ ಒಮ್ಮೆ ಹೋಗಬೇಕು ಎಂದು ಆಲೋಚಿಸುತ್ತಿದ್ದೆ. ಹೋಗುವುದೇ ಬೇಡವೇ ಎಂಬುದನ್ನು ತೀರ್ಮಾನಿಸಲು ಅಗತ್ಯವಾದ ಎಲ್ಲ ಮಾಹಿತಿ ಲೇಖನದಲ್ಲಿ ಸಿಕ್ಕಿತು. ಎಂಥ ಅಭಿರುಚಿ ಉಳ್ಳವರಿಗೆ ಈ ಪ್ರವಾಸ ಯುಕ್ತ ಎಂಬ ಕುರಿತು ೧-೨ ವಾಕ್ಯಗಳೊಂದಿಗೆ, ಈ ಪ್ರವಾಸ ಕೈಗೊಳ್ಳ ಬಯಸುವವರಿಗೆ ಉಪಯುಕ್ತವಾಗಬಹುದಾದ ’Dos & Donts' ಪಟ್ಟಿಯೊಂದನ್ನು ಲಗತ್ತಿಸಿದರೆ ಒಳ್ಳೆಯದು.
ReplyDeleteಪ್ರವಾಸ ಕಥನ ಹೇಗೆ ಇರಬೇಕೋ ಹಾಗೆಯೇ ಇದ್ದದ್ದರಿಂದ ಐದೂ ಕಂತುಗಳನ್ನು ಒಂದೇ ಪಟ್ಟಿನಲ್ಲಿ ಓದಿದೆ. ಧಾರಾವಾಹಿಗಳನ್ನು ನಾನು ಓದುವುದು ಕಡಿಮೆ). ಲಕ್ಷದ್ವೀಪಕ್ಕೆ ಒಮ್ಮೆ ಹೋಗಬೇಕು ಅಂದುಕೊಳ್ಳುತ್ತಿದ್ದ ನನಗೆ ಉಪಯುಕ್ತ ಮಾಹಿತಿಯನ್ನು ಈ ಲೇಖನ ಒದಗಿಸಿತು. ಈ ಪ್ರವಾಸ ಎಂಥ ಮನೋಧರ್ಮ ಉಳ್ಳವರಿಗೆ ಯುಕ್ತ ಹಾಗೂ ಪ್ರವಾಸಿಗರಿಗೆ ಉಪಯುಕ್ತ್ತವಾಗಬಹುದಾದ ’Dos & Donts' ಕೊನೆಯಲ್ಲಿ ಲಗತ್ತಿಸಿದರೆ ಒಳ್ಳೆಯದು.
ReplyDeletenimma pravaasa kathana hosa dhaariyallidhe.
ReplyDeleteandaman prayanadalli naanuu snarkel baLasalilla...gaajina taLada doaniyalli nodi aaitalla,innenu anta udaafe nanguu ittu.tangi aparna nanna magaLu Jyotsnanna karedoidu adara moolaka torisiyebittaLu....avaribbara khushi eegaloo nenapide
ReplyDelete