17 May 2013

ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ


ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ. ಪುಸ್ತ್ಕಾ ಪ್ರಕಟಿಸ್ಬೇಕು ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ ಸಾಹಿತಿಗಳಿಂದು ಕಳಚಿಕೊಳ್ಳಬೇಕು. ಇಂದು ಪುಸ್ತಕ ಪ್ರಕಾಶನ ಅಪ್ಪಟ ವಾಣಿಜ್ಯ ಕಲಾಪ. ಪ್ರಕಾಶನ ಸಂಸ್ಥೆಗಳಿಗೆ ಎರಡೇ ಲಕ್ಷ್ಯ. ಒಂದು ಅಪ್ಪಟ ಪಠ್ಯ ಇವು ನೇರ ಫಲಪ್ರಾಪ್ತಿಗಾಗಿ ಅನಿವಾರ್ಯ ಓದಿನ ಸಂಗಾತಿಗಳು. ಇದರಲ್ಲಿ ನೇರ ಪಠ್ಯ ಪುಸ್ತಕಗಳೂ ವಿವಿಧ ಪರೀಕ್ಷೆಯ ಗೈಡುಗಳೂ ಸೇರಿವೆ. ಮತ್ತೆ ಇದನ್ನು ಹೆಚ್ಚಾಗಿ ಸ್ವಪ್ರಭಾವ ಮತ್ತು ವಾಣಿಜ್ಯ ಆಯಾಮ ತಿಳಿದಿರುವ ಲೇಖಕರೇ ಪ್ರಕಟಿಸುತ್ತಾರೆ.

ಇನ್ನೊಂದು ಸರಕಾರ ಸೇರಿದಂತೆದಾನ, ಅನುದಾನಗಳ ಹಣವಿನಿಯೋಗಕ್ಕೆ ಸತ್ಪಾತ್ರರಾಗುವವರ ಕರಾಮತ್ತು. ಇದೇ ಇಂದು ಪುಸ್ತಕೋದ್ಯಮ ಎಂಬ ಮಹಾಭ್ರಮೆಯಾಗಿ ಭೂಮಗಾತ್ರಕ್ಕೆ ಬೆಳೆದು ನಿಂತು, ಸಾರ್ವಜನಿಕ ಹಣವಿನಿಯೋಗಕ್ಕೆ ಭಾರೀ ಸೋರುಗಂಡಿಯಾಗಿ ಪರಿಣಮಿಸಿದೆ. ಓದುಗನ ಲೆಕ್ಕಕ್ಕೆ ನಿಮಿತ್ತ ಮಾತ್ರವಾಗಬೇಕಾದ ಬಾಹ್ಯರೂಪ (ಕಾಗದ, ಗಾತ್ರ, ಚಿತ್ರ, ವರ್ಣ, ಮುದ್ರಣ ಇತ್ಯಾದಿ) ಮತ್ತು ಘೋಷಿತ ಸತ್ಯಗಳು ಇಲ್ಲಿವೈದಿಕ ಪಾವಿತ್ರ್ಯವನ್ನೇ ಗಳಿಸಿಬಿಟ್ಟಿವೆ! ಇದನ್ನೇ ಆಡುಮಾತಿನಲ್ಲಿ ಪುಸ್ತ್ಕದ ಕಂಟೆಂಟ್ಸ್ ಎಂಥ ಬೇಕಾದ್ರೂ ಸಾಯಲಿ ಮಾರಾಯ್ರೇಪುಸ್ತ್ಕನೀತಿ (ಸರಕಾರೀ ಖರೀದಿಗೆ ಇರುವ ನಿಯಮಗಳ ಪಟ್ಟಿ) ಮಾತ್ರ ಕರೆಕ್ಟ್ ಇದ್ರಾಯ್ತು. ಇದರ ಕುರಿತು ಸ್ವಲ್ಪ ವಿವರಣೆ ಇಲ್ಲಿ ಕೊಡುವುದು ಅನಿವಾರ್ಯ. (ಹೆಚ್ಚಿನ ಓದಿಗೆ ನನ್ನ ಜಾಲತಾಣದಪುಸ್ತಕೋದ್ಯಮ ಲೇಖನಗಳನ್ನು ನೋಡಬಹುದು)

14 May 2013

ಮೂರು ತಿಂಗಳು ಬಾಳುವ ಹೂವಿನ ಗುಡ್ಡ - ಡಾ| ಕೆ. ಮಹಾಲಿಂಗ ಭಟ್


[ಡಾ| ಕೇಜಿ ಭಟ್ಟರನ್ನು ನಾನು ಮೊದಲು ಪುಸ್ತಕ ವ್ಯಾಪಾರಿಯಾಗಿ ಸಂಪರ್ಕಿಸಿದ್ದೆ. ಮುಂದುವರಿದು ನನ್ನದೇ ಹುಚ್ಚಿನ ಬಿಸಿಲೆ ವಲಯಕ್ಕೆ ಚಾರಣಕ್ಕೆ ಕರೆದಾಗ ಹಿರಿತನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಸರರ ಹಮ್ಮುಗಳೊಂದೂ ಇಲ್ಲದೆ ವಿಜ್ಞಾನಿಯ ಕುತೂಹಲ, ತನಗೆ ತಿಳಿದದ್ದನ್ನು ಇತರರಲ್ಲಿ ಯಾವುದೇ ಕೃಪಣತೆಯಿಲ್ಲದೇ ಹಂಚಿಕೊಳ್ಳುವ ಪ್ರೀತಿ, ಇನ್ನೂ ಮುಖ್ಯವಾಗಿ ತಾನು ಇತರರಿಗೆ ಹೊರೆಯಾಗಬಾರದೆಂಬ ವಿನಯ ಇಟ್ಟುಕೊಂಡು ಬಂದರು. ಆ ಎಲ್ಲದರ ಮತ್ತೂ ಹೆಚ್ಚಿನದರ ಪರಿಚಯಕ್ಕೆ ನನ್ನೊಂದು ಮುಖ್ಯ ಜಾಲಬರಹವನ್ನು ಇಲ್ಲಿ ಚಿಟಿಕೆ ಹೊಡೆದು  ಓದಬಹುದು. ಅಂಥಾ ಕಾಕುಂಜೆ ಗೋಪಾಲಕೃಷ್ಣ ಭಟ್ಟರ ಒಂದು ವೈಶಿಷ್ಟ್ಯವನ್ನು ಮಾತ್ರ ಎತ್ತಿಕೊಂಡು, ಗೆಳೆಯ ಡಾ| ಮಹಾಲಿಂಗ ಭಟ್ಟರು ತಮ್ಮ ವಿಜಯವಾಣಿಯ ಅಂಕಣದಲ್ಲಿ ಬರೆದುಕೊಂಡರು. ಅದರ ಹೆಚ್ಚಿನ ಪ್ರಸರಣಕ್ಕಾಗಿ ಈಗ ನನ್ನ ಜಾಲತಾಣಕ್ಕೂ ಅವಕಾಶಮಾಡಿಕೊಟ್ಟರು. - ಅಶೋಕವರ್ಧನ]

ಮೂರು ತಿಂಗಳು ಬಾಳುವ ಹೂವಿನ ಗುಡ್ಡ
-ಡಾ| ಕೆ. ಮಹಾಲಿಂಗ ಭಟ್

ಕರ್ನಾಟಕದ ಸಸ್ಯತಜ್ಞರಿಗೆ ಉಡುಪಿಯ ಕೆ.ಜಿ.ಭಟ್ ಎಂದರೆ ಗೌರವ, ಅಚ್ಚರಿ ಎಲ್ಲವೂ. ಅಂಥದ್ದೇನು ಅವರ ಮಹತ್ವ? ಎಷ್ಟೋ ಜನ ದಿನನಿತ್ಯ ಕಾಲುದಾರಿಯ ತುಳಿದು ನಡೆಯುತ್ತಾರೆ, ಅಲ್ಲಿರುವ ಚಿಕಿಣಿ ಹುಲ್ಲುಗಳು ಪಾದದ ಭಾರಕ್ಕೆ ಪೂರ್ತಿ ಮುದುಡುತ್ತವೆ. ಹಾಗಿದ್ದರೂ ಬಿಸಿಲು ತಿನ್ನುವುದಕ್ಕೆ, ಗಾಳಿ ಕುಡಿಯುವುದಕ್ಕೆ, ಬದುಕನ್ನು ಪಡೆಯುವುದಕ್ಕೆ ಅವು ಮತ್ತೆ ಸೆಡೆದು ನಿಲ್ಲುತ್ತವೆ. ಕೆ.ಜಿ.ಭಟ್ಟರೂ ಎಲ್ಲರಂತೆ ಈ ಹುಲ್ಲದಾರಿಗಳಲ್ಲಿ ನಡೆದವರೇ, ಆದರೆ ಉಳಿದವರು ಮೆಟ್ಟಿ ಮುಂದೆಸಾಗಿದ ಕಾಲಡಿಯ ಸಸಿಗಳಲ್ಲಿ ಇದುವರೆಗೆ ವಿಜ್ಞಾನ ಜಗತ್ತು ಗುರುತಿಸದ ಸಸ್ಯಗಳು ಅವರಿಗೆ ಹಲವು ಸಲ ಸಿಕ್ಕಿವೆ. ವಾಸ್ತವದಲ್ಲಿ ಅವರು ಪದವಿಕಾಲೇಜಿನ ಮೇಷ್ಟ್ರು, ಸುತ್ತಲಿನ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳು ಮಾತ್ರ “ಕೆ.ಜಿ. ಸರ್ ಒಂದು ಸಸ್ಯವನ್ನು ವಿವರಿಸಿದರೆ ಅದಕ್ಕೆ ಬೇರೆ ಅಫೀಲು ಇಲ್ಲ” ಎಂದು ಕೃತಜ್ಞತೆಯಲ್ಲಿ ನೆನೆಯುತ್ತಾರೆ. ‘ಟೇಕ್ಸೋನಮಿ’ ಎನ್ನುವುದು ಬೋಟನಿಯಲ್ಲಿ ಸಸ್ಯಗಳ ವರ್ಗೀಕರಣಶಾಸ್ತ್ರ. ಇದು ಜಗತ್ತಿನ ಎಲ್ಲ ಸಸ್ಯಗಳನ್ನು ಗುರುತಿಸಿ ಹೆಸರಿಸಿ ಅವನ್ನು ಹಲವು ಗುಂಪುಗಳಲ್ಲಿ ಬೇರ್ಪಡಿಸುವ ಸಸ್ಯವಿಜ್ಞಾನದ ಕ್ರಮ. ಕೆ.ಜಿ.ಭಟ್ಟರಿಗೆ ಯಾವುದೇ ಹಸಿರು ಕಣ್ಣಿಗೆ ಕಂಡೊಡನೆ ಆ ಮೂಕ, ನಿಶ್ಚಲ ಜೀವದ ದೇಹರಚನೆಯ ಬಗ್ಗೆ ಚಿಂತನೆ ಸುರಾಗುತ್ತದೆ, ವಿಜ್ಞಾನದ ವಿಭಾಗಕ್ರಮದಲ್ಲಿ ಈ ಹಸಿರುವ್ಯಕ್ತಿತ್ವವು ಎಲ್ಲಿ ಕೂತಿದೆ ಇಲ್ಲಾ ಅದಕ್ಕೆ ಎಲ್ಲಿ ಹೊಸಜಾಗ ನೀಡಬೇಕಾಗಿದೆ? ಎಂಬುದು ಅವರಿಗೆ ಜ್ಞಾನಧ್ಯಾನವಾಗುತ್ತದೆ.

10 May 2013

ಮಾಮಲ್ಲಪುರಂ


(ಕ್ಷೇತ್ರ ದರ್ಶನದಲ್ಲೊಂದು ಸುತ್ತು - ಭಾಗ ಎರಡು)

ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಪೊಟ್ಟಣದಲ್ಲಿ ನಮ್ಮ ಎರಡನೇ ಕಾರ್ಯಕ್ರಮದ (ಒಂದು ಹಗಲು) ಮುಖ್ಯ ಲಕ್ಷ್ಯ ಮಹಾಬಲಿಪುರಂ ಅಥವಾ ಮಾಮಲ್ಲಪುರ; ಚೆನ್ನೈಯಿಂದ ದಕ್ಷಿಣಕ್ಕೆ ಸುಮಾರು ೫೮ ಕಿಮೀ ಓಟ. ಹಿಂದಿನ ದಿನದ ನಗರ ತಿರುಗಾಟದಲ್ಲಿ ಹದಿನಾಲ್ಕೇ ಜನರಿದ್ದರೆ ಈ ದೊಡ್ಡದಕ್ಕೆ ಇನ್ನೂ ಕಡಿಮೆ - ಎಂಟೇ ಜನ. ಇಲ್ಲಿನ ನಿರ್ವಾಹಕ ಬರಿಯ ಉದ್ಘೋಷಕನಲ್ಲ, ಇಂಗ್ಲಿಷ್ನಲ್ಲಿ ತುಸು ಮಾತಾಡಬಲ್ಲವನಾಗಿದ್ದ. ಚಾಲಕನ ಗೂಡೊಳಗೆ ಮುಖಮರೆಸಿಕೊಳ್ಳದೆ, ಅನೌಪಚಾರಿಕವಾಗಿ ನಮ್ಮ ಪುಟ್ಟ ತಂಡದ ನಡುವೆ ನಿಂತೇ ವಿವರಣೆ ಕೊಡುತ್ತಿದ್ದ. ಈತನ ಬಗ್ಗೆ ಇನ್ನೊಂದು ಮಾತೂ ಇಲ್ಲೇ ಹೇಳಿಬಿಡುತ್ತೇನೆ, ದಿನದ ಕೊನೆಯಲ್ಲಿ ಹೆಚ್ಚಿನ ಆದಾಯಕ್ಕೆ ವ್ಯಕ್ತಿತ್ವ ಮಾರಿಕೊಂಡು ಆತ ಯಾರಿಗೂ ಸಲಾಮು ಹೊಡೆಯಲಿಲ್ಲ; ಸಂತತಿ ಸಾವಿರವಾಗಲಿ.

07 May 2013

ಗೃಧ್ರಾಲಿಂಗನದಿಂದ ಪಾರಾದ ಪಕ್ಷಿ


ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು - ಏಳು
ಅಧ್ಯಾಯ ಹದಿನೈದು

ಫಲಿತಾಂಶ ಬಂದಾಗ ಕೊಡಗಿನ ವಿದ್ಯಾರ್ಥಿಗಳಾಗಿ ನಾವು ಮೂವರು ಮಾತ್ರ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದೆವು: ಒಂದನೆಯ ಸ್ಥಾನ ಕೆ.ಬಿ.ಸುಬ್ಬಯ್ಯನಿಗೂ ಎರಡನೆಯದು ನನಗೂ ಮೂರನೆಯದು ಶೆಣೈಗೂ ಲಭಿಸಿದ್ದುವು. ಆ ದಿನಗಳಂದು ಇಂಟರ್ಮೀಡಿಯೆಟ್ ಪಿಸಿಎಂ ಸಂಯೋಜನೆ ಎಲ್ಲ ಶಿಸ್ತುಗಳಿಗೂ ನೇರ ಪ್ರವೇಶ ಒದಗಿಸುತ್ತಿದ್ದ ಕೀಲಿಕೈ: ಮೆಡಿಕಲ್, ಎಂಜಿನಿಯರಿಂಗ್, ಅಗ್ರಿಕಲ್ಚರಲ್, ಬಿಎ ಮತ್ತು ಬಿಎ (ಆನರ‍್ಸ್) ಮುಂತಾದ ಅಧ್ಯಯನಶಾಖೆಗಳಿಗೆ.

ಇಂದಿನವರಂತೆ, ಅಥವಾ ತುಸು ಹೆಚ್ಚಾಗಿ, ಅಂದಿನ ನಮ್ಮೆಲ್ಲರ ಆಶಯವಿದ್ದುದು ಎಂಜಿನಿಯರಿಂಗ್‌ಗೆ ಸೇರಬೇಕು, ಹಿರಿಹುದ್ದೆ ಹಿಡಿಯಬೇಕು, ತೋರ ಸಂಬಳ ಗಳಿಸಬೇಕು ಮತ್ತು ಸುಖಜೀವನ ಬಾಳಬೇಕು ಎಂಬ ಘನಸಾಧನೆಯತ್ತ ಮಾತ್ರ. ಕೊಡಗಿನ ಅರ್ಹ ವಿದ್ಯಾರ್ಥಿಗಳಿಗೆ ಮದ್ರಾಸಿನ ಸರ್ಕಾರೀ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ತಲಾ ಒಂದು ಸ್ಥಾನ ಮೀಸಲಿತ್ತು. ನಾವು ಮೂವರೂ ಉಭಯ ಕಾಲೇಜುಗಳಿಗೂ ಕೊಡಗಿನ ಚೀಫ಼್ ಕಮಿಶನರ್ ಮೂಲಕ ಅರ್ಜಿ ಸಲ್ಲಿಸಿದೆವು. ಸುಬ್ಬಯ್ಯ ಬಿಟ್ಟ ಸ್ಥಾನ ನನಗೆ ದೊರೆಯುವುದು ಖಾತ್ರಿ ಎಂಬುದು ನನ್ನ, ಮಿಗಿಲಾಗಿ ತಂದೆಯವರ, ದೃಢ ವಿಶ್ವಾಸ. ಆದರೆ ಹೂರಣ ಹೊರಬಿದ್ದಾಗ ಕಾಲ ಮಿಂಚಿತ್ತು: ಸುಬ್ಬಯ್ಯನಿಗೆ ಆತ ಇಷ್ಟಪಟ್ಟ ಎಂಜಿನಿಯರಿಂಗಿಗೆ ಪ್ರವೇಶ ದೊರೆತಿತ್ತು. ನನಗೂ ಶೆಣೈಗೂ ತೊಪ್ಪಿ: ಸಸ್ಯವಿಜ್ಞಾನ ಬಿಎಸ್‌ಸಿಯಲ್ಲಿ ಅನುತ್ತೀರ್ಣಳಾಗಿದ್ದ ತಮ್ಮ ನೆಂಟಿತ್ತಿಯನ್ನು ಚೀಫ಼್ ಕಮಿಶನರ್ ಮೆಡಿಕಲ್‌ಗೆ ಆಯ್ದಿದ್ದರು. ನ್ಯಾಯಾಲಯದ ಕಟ್ಟೆ ಏರುವ ದಿನಗಳು ಅವಲ್ಲ. ಜೊತೆಗೆ ನನ್ನಪ್ಪ ಸರ್ಕಾರೀ ನೌಕರ ಕೂಡ.

03 May 2013

ಕ್ಯಾರಟ್ಸ್ - ೧೦೦% ಸಸ್ಯಾಹಾರಿ!


ಇದು ಬರಿ ಹೋಟೆಲಲ್ಲೋ ಅಣ್ಣಾ

“ಸ್ವಾಮೀ ಇಂಥದ್ದೊಂದು ಪುಸ್ತಕ ಕನ್ನಡದಲ್ಲಿ ಪ್ರಕಟಿಸುವುದಿದ್ದರೆ ಹೇಗೆ?” ಹ್ಯಾಮ್ಲಿನ್ ಪ್ರಕಾಶಕರ ಬಲುವರ್ಣದ, ಬಹುಚಂದದ ಮಕ್ಕಳ ವಿಜ್ಞಾನ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಆ ತರುಣ ಕೇಳಿದ. ಕೆಂಚು ಬಿಳಿಯಾಗಿ ಮೈತುಂಬಿಕೊಂಡು, ಈಗ ತಾನೇ ಅಮೆರಿಕಾದಿಂದ ಇಳಿದಂತಿದ್ದ ಈತನಿಗೇನು  ಬೆಪ್ಪೇ ಅನಿಸಿತ್ತು. ಕನ್ನಡ ಮಾಧ್ಯಮ, ಕನ್ನಡ ಶಾಲೆ ಎನ್ನುವುದೇ ‘ಅಪರಾಧ’ವಾಗಿರುವ ಕಾಲವಿದು. ಆ ಪ್ರಶ್ನೆ ನನಗೆ ನಗೆ ತರಿಸಿತು, ಜೊತೆಗೆ ಒಂದೆರಡು ನೆನಪೂ.

ಸುಮಾರು ನಾಲ್ಕು ದಶಕಗಳ ಹಿಂದೆಯೇ ಐಬಿಯೆಚ್ ಪ್ರಕಾಶನ ವಿದೇಶೀ ಮೂಲದ, ಸುಂದರ ವರ್ಣಚಿತ್ರಗಳ, ಉತ್ತಮ ಗುಣಮಟ್ಟದ ಮಕ್ಕಳ ಪುಸ್ತಕ ಮಾಲಿಕೆಗಳೆರಡನ್ನು ಕನ್ನಡಕ್ಕಿಳಿಸತೊಡಗಿದ್ದರು. ಹಾಗೆ ಬಂದ ‘ಮೂಲವಿಜ್ಞಾನ ಪಾಠಮಾಲೆ’ ಮತ್ತು ‘ವಿಜ್ಞಾನಪ್ರಪಂಚ’ಗಳ ಪ್ರಧಾನ ಸಂಪಾದಕನ ಜವಾಬ್ದಾರಿ (ಬಹುತೇಕ ಅನುವಾದವೂ) ಹೊತ್ತವರು ನನ್ನ ತಂದೆ (ಜಿಟಿನಾ). ಅಂದು ಕನ್ನಡದ  ಶಾಲೆಗಳಿಗೆ ಇಂದಿನ ಅನಾಥ ಸ್ಥಿತಿಯಿರಲಿಲ್ಲ. ಆ ಪುಸ್ತಕಗಳ ನೈಜ ಜನಪ್ರಿಯತೆಯ ಬೆಳಕಿನಲ್ಲಿ ಪ್ರಕಾಶಕರ ಉತ್ಸಾಹ ಹೆಚ್ಚಿ, ಸ್ವತಂತ್ರವಾಗಿಯೂ ಕನ್ನಡದಲ್ಲಿ ‘ವಿಜ್ಞಾನ ನೋಡುಕಲಿ’ ಎಂಬ ಹೆಸರಿನಲ್ಲಿ ಇನ್ನಷ್ಟು ಮಕ್ಕಳ ಪುಸ್ತಕಗಳನ್ನು ತರಲು ಮುಂದಾದರು. ಇದಕ್ಕೂ ತಂದೆಯದೇ ಸಾರಥ್ಯ. ರಥದಲ್ಲಿ ಅಡ್ಯನಡ್ಕ ಕೃಷ್ಣ ಭಟ್ಟ, ಕೆ.ಎಸ್ ನಿಸಾರ್ ಅಹಮದ್ ಮುಂತಾದವರು ಮೆರೆದದ್ದೂ ಆಯಿತು. ಆಕಾಶದ ಅದ್ಭುತಗಳು, ಮನುಷ್ಯನ ಕತೆ, ಶಿಲೆಗಳು ಖನಿಜಗಳು, ಹಕ್ಕಿಗಳು ಇತ್ಯಾದಿ ಪುಸ್ತಕಗಳು ಆ ಕಾಲಕ್ಕೆ ಅಪ್ಪಟ ದೇಶೀ ಚಿತ್ರ, ಕನ್ನಡ ಭಾಷೆಯಲ್ಲಿ (ಜನಪ್ರಿಯತೆ ಗಮನಿಸಿ, ಇಂಗ್ಲಿಷ್ ಅನುವಾದವೂ) ಕೈತೊಳೆದು ಮುಟ್ಟುವಷ್ಟು ಚಂದಕ್ಕೇ ಬರತೊಡಗಿದವು. ಆದರೆ ಈ ಕನ್ನಡ ಸಾಹಸಗಳನ್ನು ವಾಣಿಜ್ಯ ನೆಲೆಯಲ್ಲೂ ಯಶಸ್ವಿಗೊಳಿಸುವ ಪ್ರಕಾಶಕರ ಉತ್ಸಾಹದಲ್ಲಿ ಎಡವಟ್ಟಾಗಿ ಎಲ್ಲ ನಿಂತೇ ಹೋಯಿತು.