
“ಅಂವ ಶಾಲೆಗೇ ಹೋಗಲಿಲ್ಲ! ಆದರೂ ಎಸ್ಸೆಲ್ಸಿ ಪಾಸು ಮಾಡಿ, ಎಂಜಿನಿಯರೂ ಆದ. ಮತ್ತೆ ಒಳ್ಳೇ ಕಾರ್ಖಾನೆ ಕೆಲಸ ಇದ್ದರೂ ಚಿಟ್ಟೆ ಹಕ್ಕೀಂತ ಬಿಟ್ಟು ಹಳ್ಳಿ ಸೇರಿದ. ಅಲ್ಲಿ ಒಳ್ಳೇ ಧಾರಣೆ ಇದ್ದ ವಾಣಿಜ್ಯ ಬೆಳೆಯನ್ನೇ ರೂಢಿಸಿದರೂ ಮನ್ಶಾ ಸ್ಥಿರವಿಲ್ಲ. ಮತ್ತೆ ಸಿಂಗಳೀಕ, ಹುಲೀಂತ ಭ್ರಮೆ ಹಿಡ್ಕೊಂಡು ಕಾಡುಸೇರಿದ.” ಪುತ್ತೂರಿನ ಆಸುಪಾಸಿನ ಸಾಮಾನ್ಯರ ವಲಯದಲ್ಲಿ ಇಂದೂ ಹರಿದಾಡುವ ಇಂಥ (ನಂಜಿಲ್ಲದ) ಬೆರಗು ಮಿಶ್ರಿತ ಅನುಕಂಪದ ಮಾತುಗಳಿಗೆ ಈಗ ಹೊಸ ಬಾಲ ಸೇರಿಸಬಹುದು “...ರಾಷ್ಠ್ರ ಪ್ರಶಸ್ತಿಯೂ ಪಡೆದ.” ಡಾ| ಕೆ. ಉಲ್ಲಾಸ ಕಾರಂತ ಇಂದು ‘ಪದ್ಮಶ್ರೀ’. ನನ್ನಜ್ಜ, ಅಪ್ಪರ ಪರಿಚಯಗಳಲ್ಲಿ ಇವರದು ನಮಗೆ ಕುಟುಂಬ ಸ್ನೇಹವೇ ಇದ್ದರೂ ವಾಸ್ತವದಲ್ಲಿ ಸುಮಾರು ಮೂರೂವರೆ ದಶಕದ ಹಿಂದೆ, ಅದೇ ಮೊದಲು ಉಲ್ಲಾಸ್ ನನ್ನಂಗಡಿಗೆ ಬಂದಿದ್ದರು. ನಾನಾಗ ಪುಸ್ತಕ ವೃತ್ತಿಯಲ್ಲಿ ನೆಲೆಸುತ್ತಿದ್ದರೂ ರಜಾದಿನಗಳಲ್ಲಿ ದೊಡ್ಡ ಬಾಯಿಯೊಡನೆ ಶಿಖರದ ಮೇಲೆ ಶಿಖರಕ್ಕೇರಿ ಕೀರ್ತಿಪತಾಕೆ ಏರಿಸುತ್ತಿದ್ದೆ. ‘ಪರಮ ಸಾ-ಹಸಿ’ಯಾದ ನನ್ನಲ್ಲಿ ಉಲ್ಲಾಸ್ ಕೇಳಿದ್ದಾದರೂ ಏನು “ಸಿಂಗಳೀಕ ಕಂಡಿದ್ದೀರಾ?” ಬಲು ನಾಚು ಸ್ವಭಾವದ ಸಿಂಗಳೀಕ ಬಿಟ್ಟು ಶತಮಾನದ ಕಾಲ ಭಾರೀ ಬೇರು ಊರಿ ನಿಂತ ಮರಗಳೂ ಕಿತ್ತೋಡುವಂತೆ ಚಾರಣಗೈಯುತ್ತಿದ್ದ ನಾನೇನೋ ದೊಡ್ಡ “ಇಲ್ಲ” ಹೇಳಿರಬೇಕು. ಆದರೆ ಛಲಬಿಡದ ಆ ತರುಣ (ನನಗೆ ಮೂರುವರ್ಷದ ಹಿರಿಯ), ಈ ವಲಯದಲ್ಲಿ ನಶಿಸಿಹೋಗಿದೆ ಎಂದು ಖ್ಯಾತ ವಿಜ್ಞಾನಿಗಳು ಘೋಷಿಸಿದ್ದ ಸಿಂಗಳೀಕವನ್ನು ವೈಜ್ಞಾನಿಕವಾಗಿ ಮರುಸ್ಥಾಪಿಸಿದರು. ಮುಂದುವರಿದು ಕುದುರೆಮುಖ ಶಿಖರವನ್ನು ಕೇಂದ್ರವಾಗಿಟ್ಟುಕೊಂಡ ಪಶ್ಚಿಮಘಟ್ಟದ ಈ ವಲಯದ ಕಾಡನ್ನು ಪೂರ್ಣ ಸಂರಕ್ಷಿಸಿಕೊಳ್ಳಬೇಕಾದ ಆವಶ್ಯಕತೆಯನ್ನೂ ಸಾರಿದರು. ಹಾಗೆ ಉಲ್ಲಾಸರಿಂದ ಬೀಜಾರೋಪಗೊಂಡ ಕನಸು ಇಂದು ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನ’ವಾಗಿ ವಿಕಸಿಸಿರುವುದನ್ನು ಕಾಣುತ್ತೇವೆ. ಅತ್ತ ಉಲ್ಲಾಸರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯ ವರದಿಗಳು ಬರುತ್ತಿದ್ದಂತೆ ಇತ್ತ ಈ ಅರಣ್ಯದಲ್ಲಿ ಬಹುಕಾಲಾನಂತರ ಎರಡು ಮರಿಗಳನ್ನೂ ಕೂಡಿಕೊಂಡ ಹುಲಿಜೋಡಿಯನ್ನು (ಒಟ್ಟಾರೆ ನಾಲ್ಕು) ಇಲಾಖೆಯ ರಕ್ಷಕರು ಕಂಡಿರುವ ವರದಿಯೂ ಬಂದಿದೆ. ಇಲ್ಲೇ ಒಂದು ಲೇಖನದ ಆಚೆ ನಾನು ಬರೆದಿರುವ ಪಾಂಡರಮಕ್ಕಿಯ ವಲಯದ ಒಂದು ಜಲಮೂಲದ ಬಳಿ ಈ ಹುಲಿ ಸಂಸಾರ ಸಹಜ ವಿಹಾರದಲ್ಲಿತ್ತಂತೆ. “ಶುದ್ಧ ಮಾಂಸಾಹಾರಿಯಾದ (ಹಾಗಾಗಿ ಮಹಾದುಷ್ಟ ಪ್ರಾಣಿಯೆಂದೇ ಭಾವಿಸಲಾದ) ಹುಲಿಗೆ ರಕ್ಷಣೆ ಯಾಕೆ” ಎಂದವರಿಗೆಲ್ಲಾ ಉಲ್ಲಾಸ್ ಉತ್ತರಿಸುತ್ತಾ ಪ್ರಾಕೃತಿಕ ಪರಿಸರ-ಬಂಧ ವಿವರಿಸುವಾಗ ಪಿರಮಿಡ್ಡಿನ ಚಿತ್ರ ಕೊಡುತ್ತಿದ್ದರು. ಪಿರಮಿಡ್ಡಿನ ಕೆಳಸ್ತರದ ನೆಲನೀರು ಮುಕ್ತಗೊಂಡದ್ದು, ಮತ್ತೆ ಮೇಲಿನ ಗಾಳಿ ಹಸಿರು ಪ್ರಾಕೃತಿಕವಾಗುತ್ತ ನಡೆದದ್ದು, ಮುಂದುವರಿದು ಕಡವೆ ಕಾಟಿಗಳವರೆಗೂ ಸಸ್ಯಾಹಾರಿಗಳು ವಿಕಸಿಸಿದ್ದಕ್ಕೆಲ್ಲ ನಾವು ಸಾಕ್ಷಿ ಹಾಕುತ್ತಲೇ ಬಂದಿದ್ದೇವೆ. ಈಗ ಸ್ಪಷ್ಟ ಶಿಖರ ಮೂಡಿದಂತೆ ಕಾಣಿಸಿದ ಹುಲಿ ಸಂಸಾರ ಉಲ್ಲಾಸರಿಗೆ ನಿಜ ಸಮ್ಮಾನ; ಅದೆಷ್ಟು ಕಾಕತಾಳೀಯವಾದರೂ ವನವೇ ಸಂಭ್ರಮಿಸಿದ ಭಾವ.
