Sunday, January 29, 2012

ಪದ್ಮಶ್ರೀ ಉಲ್ಲಾಸ ಕಾರಂತ


“ಅಂವ ಶಾಲೆಗೇ ಹೋಗಲಿಲ್ಲ! ಆದರೂ ಎಸ್ಸೆಲ್ಸಿ ಪಾಸು ಮಾಡಿ, ಎಂಜಿನಿಯರೂ ಆದ. ಮತ್ತೆ ಒಳ್ಳೇ ಕಾರ್ಖಾನೆ ಕೆಲಸ ಇದ್ದರೂ ಚಿಟ್ಟೆ ಹಕ್ಕೀಂತ ಬಿಟ್ಟು ಹಳ್ಳಿ ಸೇರಿದ. ಅಲ್ಲಿ ಒಳ್ಳೇ ಧಾರಣೆ ಇದ್ದ ವಾಣಿಜ್ಯ ಬೆಳೆಯನ್ನೇ ರೂಢಿಸಿದರೂ ಮನ್ಶಾ ಸ್ಥಿರವಿಲ್ಲ. ಮತ್ತೆ ಸಿಂಗಳೀಕ, ಹುಲೀಂತ ಭ್ರಮೆ ಹಿಡ್ಕೊಂಡು ಕಾಡುಸೇರಿದ.” ಪುತ್ತೂರಿನ ಆಸುಪಾಸಿನ ಸಾಮಾನ್ಯರ ವಲಯದಲ್ಲಿ ಇಂದೂ ಹರಿದಾಡುವ ಇಂಥ (ನಂಜಿಲ್ಲದ) ಬೆರಗು ಮಿಶ್ರಿತ ಅನುಕಂಪದ ಮಾತುಗಳಿಗೆ ಈಗ ಹೊಸ ಬಾಲ ಸೇರಿಸಬಹುದು “...ರಾಷ್ಠ್ರ ಪ್ರಶಸ್ತಿಯೂ ಪಡೆದ.” ಡಾ| ಕೆ. ಉಲ್ಲಾಸ ಕಾರಂತ ಇಂದು ‘ಪದ್ಮಶ್ರೀ’. ನನ್ನಜ್ಜ, ಅಪ್ಪರ ಪರಿಚಯಗಳಲ್ಲಿ ಇವರದು ನಮಗೆ ಕುಟುಂಬ ಸ್ನೇಹವೇ ಇದ್ದರೂ ವಾಸ್ತವದಲ್ಲಿ ಸುಮಾರು ಮೂರೂವರೆ ದಶಕದ ಹಿಂದೆ, ಅದೇ ಮೊದಲು ಉಲ್ಲಾಸ್ ನನ್ನಂಗಡಿಗೆ ಬಂದಿದ್ದರು. ನಾನಾಗ ಪುಸ್ತಕ ವೃತ್ತಿಯಲ್ಲಿ ನೆಲೆಸುತ್ತಿದ್ದರೂ ರಜಾದಿನಗಳಲ್ಲಿ ದೊಡ್ಡ ಬಾಯಿಯೊಡನೆ ಶಿಖರದ ಮೇಲೆ ಶಿಖರಕ್ಕೇರಿ ಕೀರ್ತಿಪತಾಕೆ ಏರಿಸುತ್ತಿದ್ದೆ. ‘ಪರಮ ಸಾ-ಹಸಿ’ಯಾದ ನನ್ನಲ್ಲಿ ಉಲ್ಲಾಸ್ ಕೇಳಿದ್ದಾದರೂ ಏನು “ಸಿಂಗಳೀಕ ಕಂಡಿದ್ದೀರಾ?” ಬಲು ನಾಚು ಸ್ವಭಾವದ ಸಿಂಗಳೀಕ ಬಿಟ್ಟು ಶತಮಾನದ ಕಾಲ ಭಾರೀ ಬೇರು ಊರಿ ನಿಂತ ಮರಗಳೂ ಕಿತ್ತೋಡುವಂತೆ ಚಾರಣಗೈಯುತ್ತಿದ್ದ ನಾನೇನೋ ದೊಡ್ಡ “ಇಲ್ಲ” ಹೇಳಿರಬೇಕು. ಆದರೆ ಛಲಬಿಡದ ಆ ತರುಣ (ನನಗೆ ಮೂರುವರ್ಷದ ಹಿರಿಯ), ಈ ವಲಯದಲ್ಲಿ ನಶಿಸಿಹೋಗಿದೆ ಎಂದು ಖ್ಯಾತ ವಿಜ್ಞಾನಿಗಳು ಘೋಷಿಸಿದ್ದ ಸಿಂಗಳೀಕವನ್ನು ವೈಜ್ಞಾನಿಕವಾಗಿ ಮರುಸ್ಥಾಪಿಸಿದರು. ಮುಂದುವರಿದು ಕುದುರೆಮುಖ ಶಿಖರವನ್ನು ಕೇಂದ್ರವಾಗಿಟ್ಟುಕೊಂಡ ಪಶ್ಚಿಮಘಟ್ಟದ ಈ ವಲಯದ ಕಾಡನ್ನು ಪೂರ್ಣ ಸಂರಕ್ಷಿಸಿಕೊಳ್ಳಬೇಕಾದ ಆವಶ್ಯಕತೆಯನ್ನೂ ಸಾರಿದರು. ಹಾಗೆ ಉಲ್ಲಾಸರಿಂದ ಬೀಜಾರೋಪಗೊಂಡ ಕನಸು ಇಂದು ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನ’ವಾಗಿ ವಿಕಸಿಸಿರುವುದನ್ನು ಕಾಣುತ್ತೇವೆ. ಅತ್ತ ಉಲ್ಲಾಸರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯ ವರದಿಗಳು ಬರುತ್ತಿದ್ದಂತೆ ಇತ್ತ ಈ ಅರಣ್ಯದಲ್ಲಿ ಬಹುಕಾಲಾನಂತರ ಎರಡು ಮರಿಗಳನ್ನೂ ಕೂಡಿಕೊಂಡ ಹುಲಿಜೋಡಿಯನ್ನು (ಒಟ್ಟಾರೆ ನಾಲ್ಕು) ಇಲಾಖೆಯ ರಕ್ಷಕರು ಕಂಡಿರುವ ವರದಿಯೂ ಬಂದಿದೆ. ಇಲ್ಲೇ ಒಂದು ಲೇಖನದ ಆಚೆ ನಾನು ಬರೆದಿರುವ ಪಾಂಡರಮಕ್ಕಿಯ ವಲಯದ ಒಂದು ಜಲಮೂಲದ ಬಳಿ ಈ ಹುಲಿ ಸಂಸಾರ ಸಹಜ ವಿಹಾರದಲ್ಲಿತ್ತಂತೆ. “ಶುದ್ಧ ಮಾಂಸಾಹಾರಿಯಾದ (ಹಾಗಾಗಿ ಮಹಾದುಷ್ಟ ಪ್ರಾಣಿಯೆಂದೇ ಭಾವಿಸಲಾದ) ಹುಲಿಗೆ ರಕ್ಷಣೆ ಯಾಕೆ” ಎಂದವರಿಗೆಲ್ಲಾ ಉಲ್ಲಾಸ್ ಉತ್ತರಿಸುತ್ತಾ ಪ್ರಾಕೃತಿಕ ಪರಿಸರ-ಬಂಧ ವಿವರಿಸುವಾಗ ಪಿರಮಿಡ್ಡಿನ ಚಿತ್ರ ಕೊಡುತ್ತಿದ್ದರು. ಪಿರಮಿಡ್ಡಿನ ಕೆಳಸ್ತರದ ನೆಲನೀರು ಮುಕ್ತಗೊಂಡದ್ದು, ಮತ್ತೆ ಮೇಲಿನ ಗಾಳಿ ಹಸಿರು ಪ್ರಾಕೃತಿಕವಾಗುತ್ತ ನಡೆದದ್ದು, ಮುಂದುವರಿದು ಕಡವೆ ಕಾಟಿಗಳವರೆಗೂ ಸಸ್ಯಾಹಾರಿಗಳು ವಿಕಸಿಸಿದ್ದಕ್ಕೆಲ್ಲ ನಾವು ಸಾಕ್ಷಿ ಹಾಕುತ್ತಲೇ ಬಂದಿದ್ದೇವೆ. ಈಗ ಸ್ಪಷ್ಟ ಶಿಖರ ಮೂಡಿದಂತೆ ಕಾಣಿಸಿದ ಹುಲಿ ಸಂಸಾರ ಉಲ್ಲಾಸರಿಗೆ ನಿಜ ಸಮ್ಮಾನ; ಅದೆಷ್ಟು ಕಾಕತಾಳೀಯವಾದರೂ ವನವೇ ಸಂಭ್ರಮಿಸಿದ ಭಾವ.

Friday, January 20, 2012

ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ!


ದೇವಕಿ ಹಾಗೂ ನಾನು
ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ) ಕೊಡಬೇಕಾಗಿಯೂ ಇಲ್ಲ. ಮೂವತ್ತಾರು ವರ್ಷಗಳ ಪುಸ್ತಕೋದ್ಯಮದಲ್ಲಿ ನನ್ನ ನಿರ್ವಹಣೆ ಬಗ್ಗೆ ಧನ್ಯತೆಯಿದ್ದರೂ ನನ್ನನ್ನು ಬೆಳೆಸಿದ ಮತ್ತು ನನ್ನ ಭವಿಷ್ಯಕ್ಕೆ ಭದ್ರತೆಯನ್ನೂ ಒದಗಿಸುತ್ತಿರುವ ಈ ವೃತ್ತಿಯ ಬಗ್ಗೆ ಸಂತೋಷವಿದ್ದರೂ ಮುಖ್ಯವಾಗಿ ಕನ್ನಡ ಮತ್ತೆ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ನಿರಾಶೆಯಲ್ಲಿ ನಿವೃತ್ತನಾಗುತ್ತಿದ್ದೇನೆ. ಹೆಚ್ಚು ಕಡಿಮೆ ಶೂನ್ಯ ಬಂಡವಾಳದಿಂದ ತೊಡಗಿದ ಈ ಮಳಿಗೆಗೆ ಡಿವಿಕೆ ಮೂರ್ತಿಯವರು ಪ್ರಧಾನ ಪ್ರೇರಕರು ಮತ್ತು ಶುದ್ಧ ವ್ಯಾವಹಾರಿಕವಾಗಿ ಪೋಷಕರು. ಉಳಿದಂತೆ ನನ್ನ ತಂದೆಯ ನಾಮದ ಬಲದಲ್ಲಿ ಕನ್ನಡದ ಹೆಚ್ಚು ಕಡಿಮೆ ಎಲ್ಲಾ ಮತ್ತು ಇಂಗ್ಲಿಷಿನ ಕೆಲವು ಪ್ರಕಾಶಕರೂ ವಿತರಕರೂ ಬೇಕಾದ ಪುಸ್ತಕಗಳನ್ನು ಕೊಟ್ಟು, ನಾನು ಅನಿರ್ದಿಷ್ಟ ಕಾಲಾನಂತರ ಪಾವತಿ ಕೊಟ್ಟಂತೆ ಒಪ್ಪಿಸಿಕೊಂಡು ಸಹಕರಿಸಿದ್ದಾರೆ. ಮೈಸೂರಿನಲ್ಲಿ ಕುಳಿತು, ಕರ್ನಾಟಕ ಮಟ್ಟದಲ್ಲಿ ಯೋಚಿಸಿ ನಾನು ಮಂಗಳೂರು ಆಯ್ದುಕೊಂಡಾಗ ನೆನಪಾದ ಏಕೈಕ ಹೆಸರು ಬಿ.ವಿ ಕೆದಿಲಾಯರದ್ದು. ಅವರು ಮತ್ತು ಹಾಗೇ ಪ್ರೀತಿಯೊಂದೇ ಕಾರಣವಾದ ಪುತ್ತೂರಿನ ಅಜ್ಜನ ಮನೆಯ ಸಂಬಂಧಿಕರು, ತಂದೆಯ ಅಸಂಖ್ಯ ಗುರು, ಮಿತ್ರ ಮತ್ತು ಶಿಷ್ಯ ಬಳಗ (ತಂದೆ ಹಿಂದೆ ಇಲ್ಲಿ ವಿದ್ಯಾರ್ಥಿಯಾಗಿಯೂ ಅಧ್ಯಾಪಕನಾಗಿಯೂ ಸ್ವಲ್ಪ ಕಾಲ ದುಡಿದಿದ್ದರು), ನನ್ನದೇ ಮಿತ್ರ ಬಳಗ, ಸಂಬಂಧಿಕರೆಲ್ಲ ನನಗೊದಗಿದ ವಿಶೇಷವರ್ಗವೆಂದೇ ಹೇಳಬೇಕು. ಇತ್ತ ಹೊರಳಿದರೆ, ನಾಲ್ಕಾಣೆ ಸ್ತೋತ್ರಕ್ಕಾಗಿ ಬಂಗಾಡಿ ಮೂಲೆಯಿಂದ ಅಂಗಡಿಗೆ ಧಾವಿಸಿ ಬರುವವರಿಂದ ಹಿಡಿದು, ಇಂದು ಇಡಿಯ ಅಂಗಡಿ ಕೊಳ್ಳುವವರವರೆಗೆ ವ್ಯಕ್ತಿ, ಸಂಸ್ಥೆಗಳು ಪ್ರೋತ್ಸಾಹಿಸಿದ್ದಾರೆ. ಒಳಗೆ ನೋಡಿದರೆ ಇದ್ದು, ಬಿಟ್ಟ, ಮುರಳೀಧರ, ಮಂಜುನಾಥ, ದಿವಾಕರ, ಪ್ರಕಾಶರಾದಿ ಮಸಕು ಮುಖಗಳ ಎದುರು ಹಲವು ವರ್ಷಗಳಿಂದ ಇಂದಿನವರೆಗೂ ವಿಶೇಷವಾಗಿ ನಿಂತಿರುವ ಶಾಂತಾರಾಮನವರೆಗೆ ಸಹಾಯಕರ ಪ್ರೀತಿಯ ದುಡಿಮೆ ಕಾಣುತ್ತದೆ. ನನ್ನಷ್ಟೇ ಅತ್ರಿಯ ಮತ್ತು ನನ್ನ ಜೀವನದ ಭಾಗವೇ ಆಗಿರುವ ನನ್ನ ಅಪ್ಪ, ಅಮ್ಮ, ವಿಶೇಷವಾಗಿ ಹೆಂಡತಿ - ದೇವಕಿ, ಮತ್ತೆ ಮಗ - ಅಭಯರ ಬಗ್ಗೆ ಹೇಳಿದರೆ ಆತ್ಮಸ್ತುತಿಯಾದೀತು, ಹೇಳದಿದ್ದರೆ ಸ್ವಾರ್ಥವಾದೀತು! ಅವರೆಲ್ಲರ ಸವಿವರ ಸ್ಮರಣೆ ಒಂದು ಉದ್ಯಮದ ಆರೋಗ್ಯಪೂರ್ಣ ಬೆಳವಣಿಗೆಯ ದಾಖಲೀಕರಣಕ್ಕೆ ಅವಶ್ಯವೆಂಬ ಅರಿವು ನನಗಿದೆ. ಸಮಯಾನುಕೂಲ ನೋಡಿಕೊಂಡು ಮುಂದೆಂದಾದರೂ ಇಲ್ಲೇ ಕಂತುಗಳಲ್ಲೋ ಇಡಿಯಾಗಿಯೋ ಕೊಡಲು ಪ್ರಯತ್ನಿಸುತ್ತೇನೆ ಎಂಬ ಆಶ್ವಾಸನೆ ಮಾತ್ರ ಕೊಡುತ್ತಾ ೩೧-೩-೨೦೧೨ರಂದು ಅತ್ರಿ ಬುಕ್ ಸೆಂಟರ್ ಅನ್ನು ಖಾಯಂ ಮುಚ್ಚುತ್ತಿದ್ದೇನೆ.

Saturday, January 14, 2012

ದೇಶಕಾಲದ್ದು ಕೊನೆಯಲ್ಲ; ವಿರಾಮ!


೨೦೧೧ರ ಅಕ್ಟೋಬರ್ ಮೊದಲವಾರದಲ್ಲಿ ನಾನು ಅಂತರ್ಜಾಲದಲ್ಲಿ ಮಿಂಚಂಚೆ ತನಿಖೆ ನಡೆಸಿದ್ದಂತೆ ಎಡಪಕ್ಕದ ‘ದೇಶಕಾಲ’ದ ಹಸಿರು ದೀಪ ಮಿನುಗಿ, ಬಲಪಕ್ಕದಲ್ಲಿ ಸಂವಾದ ಕಿಂಡಿ ಮೊಳೆದು ಸಾರಿತು - ‘೨೮ನೇ ಸಂಚಿಕೆಗೆ ದೇಶಕಾಲ ನಿಲ್ಲಿಸುತ್ತಿದ್ದೇನೆ’. ಮತ್ತೆ ಎರಡನೇ ವಾರದಲ್ಲಿ ೨೭ನೇ ಸಂಚಿಕೆ ಬಂದಾಗ ಸಂಪಾದಕೀಯದಲ್ಲಿ ಚುಟುಕಾಗಿ ಬರೆದುಕೊಂಡಿದ್ದರು - ಪತ್ರಿಕೆಯ ನಿರ್ವಹಣಾ ಹರಹು ಹೆಚ್ಚಿದ್ದರಿಂದ ತನಗೆ ತೊಡಗಿಕೊಳ್ಳಲು ವ್ಯವಧಾನ ಸಾಲದ್ದರಿಂದ ದೇಶಕಾಲವನ್ನು ಮುಂದಿನ ಸಂಚಿಕೆಗೆ ನಿಲ್ಲಿಸುತ್ತಿದ್ದೇನೆ. ಅದರಲ್ಲೂ ಈಗಷ್ಟೇ ಬಂದಿರುವ ೨೮ನೇ ಸಂಚಿಕೆಯಲ್ಲೂ ತತ್ಕಾಲೀನ ನಿಲುಗಡೆ, ಅರ್ಥಾತ್ ಅನಿರ್ದಿಷ್ಟ ವಿರಾಮದ ಕುರಿತಷ್ಟೇ ಬರೆದಿರುವುದು ಇದ್ದುದರಲ್ಲಿ ಸಮಾಧಾನದ ವಿಷಯ. ಸಂಪಾದಕ (ಮಾಲಿಕನೂ ಹೌದು) ವಿವೇಕ ಶಾನಭಾಗ ಏಳು ವರ್ಷಗಳ ಉದ್ದಕ್ಕೂ ‘ತಾನು ಬಿಡುವಿಲ್ಲದ ಕೆಲಸಗಳ ನಡುವೆ ಕನ್ನಡ ಸೇವೆ ಮಾಡುತ್ತಿರುವ’ ಮಾತು ಆಡಿದ್ದಿಲ್ಲ. ಚಂದಾದಾರರಿಗೆ ಸಕಾಲದಲ್ಲಿ ಸಂಚಿಕೆ ಮುಟ್ಟಿಸುವಲ್ಲಿ, ಅವಧಿ ಮುಗಿದದ್ದನ್ನು ಕೊನೆಯ ಸಂಚಿಕೆಯೊಡನೆ ತಿಳುವಳಿಕೆ ಪತ್ರ ಹಾಗೂ ಎಂ.ಓ ಅರ್ಜಿ ಕಳಿಸುವಲ್ಲಿ ವಿಳಂಬಿಸಿದ್ದಲ್ಲ. ಆದರೆ ಅದನ್ನು ಮರೆವಿನಲ್ಲೋ ನಿರಾಸಕ್ತಿಯಲ್ಲೋ ಬಳಸದೇ ಉಳಿದವರಿಗೆ ಸಂಚಿಕೆಯನ್ನು ಸಾಲದಲ್ಲಿ ಕಳಿಸಿ, ಬಾಕಿ ವಸೂಲಿಗೆ ಒತ್ತಾಯಿಸುವ, ಗಿಂಜುವ ಪ್ರಸಂಗ ತಂದುಕೊಂಡದ್ದೂ ಇಲ್ಲ. ಮತ್ತೆ ಇಂಥ ಸಂಪಾದಕೀಯ ಟಿಪ್ಪಣಿಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಆರ್ಥಿಕ ಬಿಕ್ಕಟ್ಟಿನ ಉಲ್ಲೇಖ, ಚಂದಾ ನವೀಕರಣದ ಕೊರತೆಯ ಕೊರಗು ಇತ್ಯಾದಿ ತೋಡಿಕೊಂಡದ್ದೂ ಇಲ್ಲ. ಬದಲಿಗೆ, ಕೊನೆಯೆರಡೂ ಸಂಚಿಕೆಗಳಲ್ಲಿ ಚಂದಾದಾರರಿಗೆ ತಾವೇ ಬಾಕಿಯುಳಿಸುವ ಹಣ ಮರಳಿಸುವ ಸ್ಪಷ್ಟ ಮಾತಿತ್ತು. ಇನ್ನೂ ಮುಖ್ಯವಾದದ್ದು ಮತ್ತು ಅವರು ಹೇಳದ ಉಳಿದದ್ದು - ತಾನು ಉದ್ದೇಶಿಸಿದ ಗುಣಮಟ್ಟದ ಹರಕೆಯನ್ನು ಇನ್ನೊಬ್ಬರ ಮೇಲೆ ಹೇರದ ನಿಲುವು. (“ಸಾರ್, ನೀವು ಬರ್ಬೇಕೂಂತಿಲ್ಲಾ. ನಿಮ್ಮೆಸ್ರಾಕ್ಕಂಡಿರ್ತೀವಿ” ಎನ್ನುವ ಎಷ್ಟೂ ಸಂಕಟಕರನ್ನೂ ‘ಕೀರ್ತಿಶೇಷ’ರಾಗಲು ಬಯಸುವವರನ್ನೂ ನಾನು ಕಂಡ ಬೆಳಕಿನಲ್ಲಿ.) ವಿವೇಕ ಇವರಿಗೆ ಅನ್ವರ್ಥನಾಮ!

Saturday, January 7, 2012

ಪಾಂಡರಮಕ್ಕಿ ಜಾಡಿನಲ್ಲಿ


[ಕಾಡಜಾಡಿನಲ್ಲಿ ಹೆಕ್ಕಿದ ಪರಿಸರ ಪ್ರಶ್ನೆಗಳು ಭಾಗ ಎರಡು]

ಉಪೋಪ ಕಥೆಗಳ ‘ಕಾಟದಲ್ಲಿ’ ಭಗವತಿ ನೇಚರ್ ಕ್ಯಾಂಪ್ ದ್ವಾರದಿಂದ ಹೊರಟ ನಿಮ್ಮನ್ನು ದಾರಿ ಹೊಳೆ ಪಾತ್ರದತ್ತ ಸರಿಯುವಲ್ಲಿ, ವಿದ್ಯುತ್ ಸ್ತಂಭ ಸಾಲಿನ ನೆರಳಲ್ಲಿ ನಿಲ್ಲಿಸಿ ಬಿಟ್ಟಿದ್ದೆ. ಬನ್ನಿ, ಈಗ ಆ ಹೊಳೆ - ಭದ್ರಾ ನದಿಯ ಆದಿಮ ರೂಪಿಯನ್ನೇ ದಾಟಿ ಮುಂದುವರಿಯೋಣ. ಕುರಿಯಂಗಲ್ಲಿನ ಹಿಮ್ಮೈಯ ಬೆಟ್ಟಕಾಡಿನಿಂದ ಬಸಿಯುವ ಈ ಶುದ್ಧ ಸಲಿಲಕ್ಕೆ ನಮ್ಮಿಂದ ಮೇಲೆ ಎರಡು ಕಡೆ ಮಾತ್ರ ಮನುಷ್ಯ ಸಂಪರ್ಕವಿದೆ. ಮೊದಲು, ಸುಮಾರು ಒಂದು ಕಿಮಿ ಮೇಲೆ  - ಕುರಿಯಂಗಲ್ಲಿನ (ಅಂದಕಾಲತ್ತಿಲೆ) ರಿಪೀಟರ್ ಸ್ಟೇಶನ್ನಿಗೆಹೋಗುತ್ತಿದ್ದ ಮಣ್ಣದಾರಿಯ ಅನುಕೂಲಕ್ಕೊಂದು  ಗಟ್ಟಿ ಸೇತುವೆ. ರಾಷ್ಟ್ರೀಯ ಉದ್ಯಾನವನದ ಬಿಗಿ ಬರುವ ಮುನ್ನ ಅಲ್ಲಿವರೆಗೆ ವಾಹನ ನುಗ್ಗಿಸಿ ಹೊಳೆ ಮತ್ತದರ ಸುತ್ತಮುತ್ತ ಸಾಕಷ್ಟು ‘ವನವಿಹಾರಿಗಳ’ ದಾಂಧಲೆ ನಡೆಯುವುದಿತ್ತು. ಈಗ ಜನ, ವಾಹನ ಸಂಚಾರ ತೀರಾ ವಿರಳ. ಇದ್ದರೂ ವನ್ಯ ಇಲಾಖೆಯ ಮಾರ್ಗದರ್ಶಿಯೊಡನೇ ಹಾದು ಹೋಗುವುದರಿಂದ ಮಲಿನಕಾರಕವಲ್ಲ ಎಂದು ನಂಬಬಹುದು. 

Sunday, January 1, 2012

ಕುಮಾರವ್ಯಾಸ ನೃತ್ಯ ಭಾರತ

[ಕುಬ್ಜ ಚಿತ್ರಕ್ಕೆ ತೋರದ ಚೌಕಟ್ಟು]

ಅದೊ೦ದು ಮಧ್ಯಾಹ್ನ ಅ೦ಗಡಿ ಬಾಗಿಲಡಿಯಲ್ಲಿ ತೂರಿದ್ದ ಕರೆಯೋಲೆ ಸಿಕ್ಕಿತು - ವಿದುಷಿ ಭ್ರಮರಿ ಶಿವಪ್ರಕಾಶ್ ಪ್ರಸ್ತುತ ಪಡಿಸುವ ‘ಕುಮಾರವ್ಯಾಸ ನೃತ್ಯ ಭಾರತ. ಬೆ೦ಬತ್ತಿದ೦ತೆ ಭ್ರಮರಿಯವರ ದೂರವಾಣಿ ಕರೆಯೂ ಬ೦ತು. ಹೆಚ್ಚಿನ ಒತ್ತಡ ತರುವಂತೆ ಕಾರ್ಕಳದಿ೦ದ ಪ್ರೊ| ಎ೦. ರಾಮಚ೦ದ್ರರ ದೂರವಾಣಿ ಅ೦ದು ನಿಮ್ಮಲ್ಲಿ ಮರುದಿನ ನಮ್ಮಲ್ಲಿ. ಅವಶ್ಯ ನೋಡಿ ಕುಮಾರವ್ಯಾಸ ನೃತ್ಯ ಭಾರತ. ಅಧ್ಯಾಪಕ, ಕವಿ, ಕತೆಗಾರ, ನಾಟಕಕಾರ, ನಟ, ರಂಗನಿರ್ದೇಶಕ ಎಂಬಿತ್ಯಾದಿ ಬಹುಮುಖೀ ಆಸಕ್ತಿಗಳ ಮತ್ತು ಸದಾ ಕ್ರಿಯಾಶೀಲ ಪ್ರೊ| ಉದ್ಯಾವರ ಮಾಧವಾಚಾರ್ಯರ ಮಗಳು ಈ ಭ್ರಮರಿ ಎನ್ನುವುದು ನನಗೆ ತಿಳಿದೇ ಇತ್ತು. ಅವೆಲ್ಲದರ ಮೇಲೆ ನನ್ನ ನೆನಪಿನಾಳದ ನೂರೊಂದು ರಮ್ಯ ಪೌರಾಣಿಕ ರಂಗಪ್ರಸ್ತುತಿಗಳೂ ಮೇಲೆದ್ದು ಪ್ರಭಾವಿಸಿದವು ಎನ್ನುವುದನ್ನೂ ಇಲ್ಲೇ ಹೇಳಿಬಿಡಬೇಕು. ಸುಮಾರು ಎರಡು ದಶಕಗಳ ಹಿಂದೆ ಪದ್ಮಾಸುಬ್ರಹ್ಮಣ್ಯಂ ಕೊಟ್ಟ ರಾಮಾಯ ತುಭ್ಯಂ ನಮಃ ಮತ್ತು ಕೃಷ್ಣಾಯ ತುಭ್ಯಂ ನಮಃ ಉಂಟುಮಾಡಿದ ಧನ್ಯತೆ ಚಿರಂಜೀವಿ. ಮುಂದುವರಿದ ದಿನಗಳಲ್ಲಿ ನೀನಾಸಂ ಕೊಟ್ಟ ಕುಮಾರವ್ಯಾಸ ಭಾರತದ್ದೇ ರಂಗಪ್ರಸ್ತುತಿ - ಸೀಮಿತ ಅವಧಿಯಲ್ಲಿ, ಸಮಗ್ರ ಕಥಾನಿರೂಪಣೆಗೆ ಕೊರತೆ ಬಾರದಂತೆ ಆಯ್ದ ಕಾವ್ಯ ಭಾಗಗಳನ್ನು ಒಂದೂ ಪ್ರಕ್ಷಿಪ್ತ ತಾರದೆ ರಂಗಕ್ಕಳವಡಿಸಿದ್ದು, ನೆನೆಸಿದರೆ ಇಂದೂ ಮೈಮನ ನಲಿಯುವುದು! ‘ಇದು ರಂಗಪ್ರಯೋಗಕ್ಕಲ್ಲ ಎಂದು ಸ್ವತಃ ಲೇಖಕ ಕುವೆಂಪು ಘೋಷಿಸಿಯೇ ಪ್ರಕಟಿಸಿದ ಶೂದ್ರತಪಸ್ವಿ ನಾಟಕವನ್ನು ರಂಗಸೂಚನೆಗಳೂ ಸೇರಿದಂತೆ ಸಾರಾಸಗಟಾಗಿ ತೆಗೆದುಕೊಂಡು ರಂಗಾಯಣ ಕೊಟ್ಟ ಪ್ರದರ್ಶನ ಇನ್ನೊಂದೇ ಅದ್ಭುತ ಅನುಭವ. ಈಗಲೂ ನಡೆಯುತ್ತಲೇ ಇರುವ (ನನ್ನೆದುರು ಡೀವೀಡೀಯಲ್ಲಿಯೂ) ‘ಗಣೇಶ್-ಮಂಟಪ ಕಂಬೈನ್ಸ್ ಯಕ್ಷಗಾನ ಏಕವ್ಯಕ್ತಿ ಪ್ರಯೋಗಗಳೂ ವಿಚಾರಪರವಾಗಿ ನೋಡುವ ಯಾರೂ ಮೆಚ್ಚಿ ಅಹುದಹುದೆನ್ನಬೇಕು. ಇನ್ನೂ ಇಂತಹ ಅನೇಕರು ಅವರವರ ಸಿದ್ಧಿಗನುಗುಣವಾಗಿ ನಾಟ್ಯ, ನಾಟಕ, ಕಾವ್ಯ, ಜಾನಪದ, ಸಂಗೀತ, ಮಟ್ಟು ಮುಂತಾದವನ್ನು ಭಾವಸಂವಹನದ ಮಾಧ್ಯಮವಾಗಿ ಬಳಸಿ ಶಿಖರ ದರ್ಶನ ಮಾಡಿಸಿದ್ದಾರೆ. ಈ ಸರಕ್ಕೆ ಹೊಸತೊಂದು ಮುತ್ತು ಪೋಣಿಸುವ ಉತ್ಸಾಹದಲ್ಲಿ ನಾನು ಕೆನರಾ ಹೆಮ್ಮಕ್ಕಳ ಶಾಲೆಯ ಸಭಾಂಗಣಕ್ಕೆ ಅಂದು (೧೮-೧೨-೧೧) ಹೋಗಿದ್ದೆ.